ಟೊರೆಂಟೋ: ವಿದೇಶದಲ್ಲಿ ನೆಲೆಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಕನ್ನಡಿಗನೊಬ್ಬ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಘಟನೆ ಕೆನಡಾದ ಟೊರೆಂಟೋದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದ ಚಂದನ್ ಕುಮಾರ್ (34) ಮೃತಪಟ್ಟ ದುರ್ದೈವಿ.
ಘಟನೆಯ ಹಿನ್ನೆಲೆ:
ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದ ಚಂದನ್ ಕುಮಾರ್, ಅಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಟೊರೆಂಟೋದ ವುಸ್ಟೈನ್ ಪ್ಲಾಜಾ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಕೆಲಸ ಮುಗಿಸಿ ವೈಯಕ್ತಿಕ ಕಾರ್ಯದ ಮೇಲೆ ಹೊರಗಿದ್ದ ಚಂದನ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಫೈರಿಂಗ್ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.
ಚಂದನ್ ಕೇವಲ ವೃತ್ತಿಪರ ಎಂಜಿನಿಯರ್ ಮಾತ್ರವಲ್ಲದೆ, ಕೆನಡಾದಲ್ಲಿ ಕನ್ನಡ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೊರೆಂಟೋ ಸುತ್ತಮುತ್ತ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಕೆಲವು ಕನ್ನಡ ಚಲನಚಿತ್ರಗಳ ಚಿತ್ರೀಕರಣ ಕೆನಡಾದಲ್ಲಿ ನಡೆದಾಗ ಅಲ್ಲಿನ ತಂಡಕ್ಕೆ ನೆರವಾಗುವ ಮೂಲಕ ಚಂದನವನದೊಂದಿಗೂ ನಿಕಟ ಸಂಪರ್ಕ ಹೊಂದಿದ್ದರು.
ಸದ್ಯ ಕೆನಡಿಯನ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಪೂರ್ವನಿಯೋಜಿತ ಅಥವಾ ‘ಟಾರ್ಗೆಟ್ ಕಿಲ್ಲಿಂಗ್’ ಇರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಆದರೆ ಈಗಲೇ, ಇದು ಕೊಲೆನಾ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯೇ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಂಕಿತರಿಗಾಗಿ ಶೋಧ ನಡೆಯುತ್ತಿದೆ.
ನೆಲಮಂಗಲದಲ್ಲಿರುವ ಚಂದನ್ ಪೋಷಕರು ಮಗನ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ. ಮೃತ ಚಂದನ್ ತಂದೆ ನಂದಕುಮಾರ್ (ನಿವೃತ್ತ ಶಿಕ್ಷಕ) ಕಣ್ಣೀರಿಡುತ್ತಾ, ಶುಕ್ರವಾರವಷ್ಟೇ ಮಗ ಮಾತನಾಡಿದ್ದ. ಮುಂದಿನ ತಿಂಗಳು ರಜೆ ಪಡೆದು ಮನೆಗೆ ಬರುವುದಾಗಿ ಹೇಳಿದ್ದ. ಅವನಿಗೆ ಮದುವೆ ಮಾಡಬೇಕೆಂದು ನಾವೆಲ್ಲಾ ತಯಾರಿ ನಡೆಸುತ್ತಿದ್ದೆವು. ಆದರೆ ಈಗ ಹೆಣವಾಗಿ ಬರುತ್ತಿದ್ದಾನೆ ಎಂದು ಹೇಳಿದ್ದಾರೆ.
ತಮ್ಮ ಮಗನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು ಎಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಠಾತ್ ದಾಳಿಗೆ ಕಾರಣವೇನು ? ಮಗನ ಸಾವಿಗೆ ನ್ಯಾಯ ಸಿಗಬೇಕೆಂದು ಕುಟುಂಬ ಆಗ್ರಹಿಸಿದೆ.
