ರಾತ್ರೋರಾತ್ರಿ ಬಂಡೆಕಲ್ಲುಗಳ ಕಳ್ಳ ಸಾಗಾಟ: ನಾಲ್ವರ ಬಂಧನ

Untitled design 2025 11 23T111205.243

ನೆಲಮಂಗಲ, ನವೆಂಬರ್ 23: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ರಾತ್ರೋರಾತ್ರಿ ಬಂಡೆಕಲ್ಲುಗಳ ಅಕ್ರಮ ಕಳ್ಳಸಾಗಣೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕ್ರೇನ್‌ಗಳು ಮತ್ತು ಬಂಡೆಕಲ್ಲುಗಳನ್ನೇರಿಸಿ ಸಾಗಿಸುತ್ತಿದ್ದ ಲಾರಿ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಘಟನೆ 2024ರ ಏಪ್ರಿಲ್ 23ರ ರಾತ್ರಿ ನಡೆದಿತ್ತು. ಪ್ರಸಿದ್ಧ ಮಹಿಮಾ ರಂಗನಾಥಸ್ವಾಮಿ ಬೆಟ್ಟ (ಮಹಿಮಾ ರಂಗನಬೆಟ್ಟ) ಸುತ್ತಮುತ್ತಲಿನ ಪ್ರದೇಶದಿಂದ ಪರವಾನಗಿ ಇಲ್ಲದೇ ಅಕ್ರಮವಾಗಿ ಬಂಡೆಕಲ್ಲುಗಳನ್ನು ಕತ್ತರಿಸಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ 112 ಕಂಟ್ರೋಲ್‌ ರೂಮಿಗೆ ಬಂದಿತ್ತು. ತಕ್ಷಣ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ದಂಧೆಯ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ರೌಡಿಶೀಟರ್ ಆಗಲಗುಪ್ಪೆ ಪ್ರಸನ್ನ ವಿರುದ್ಧ ಆರೋಪ ದಾಖಲಾಗಿತ್ತು.

ಪೊಲೀಸರ ಕಾರ್ಯಾಚರಣೆಯಲ್ಲಿ ಮಾವಿನಕುಂಟೆಯ ಅಶೋಕ್, ತುಮಕೂರಿನ ಯೋಗೇಶ್ ಸೇರಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಬಳಸುತ್ತಿದ್ದ ಎರಡು ಕ್ರೇನ್‌ಗಳು ಹಾಗೂ ಬಂಡೆಕಲ್ಲು ತುಂಬಿದ್ದ ಲಾರಿ ಸೇರಿದಂತೆ ಬಳಸಲಾಗುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಣಿಗಲ್ ಬೈಪಾಸ್ ನಲ್ಲಿ ಲಾರಿ ಪೊಲೀಸ್ ವಾಹನವನ್ನು ಕಂಡು ರಿಸರ್ವ್ ಹೊಡೆಯಲು ಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಉರುಳಿ ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.

ಜಪ್ತಿ ಮಾಡಲಾದ ಬಂಡೆಕಲ್ಲುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಕಲ್ಲುಗಳನ್ನು ಕುಣಿಗಲ್ ಬೈಪಾಸ್ ಬಳಿಯೇ ಶೇಖರಿಸಿ ಇರಿಸಲಾಗಿತ್ತು. ಇದೇ ತಿಂಗಳು ದೇವನಹಳ್ಳಿ ತಾಲ್ಲೂಕಿನಲ್ಲಿ ಜಪ್ತಿ ಮಾಡಿದ್ದ ಕಲ್ಲುಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಪ್ತಿ ಮಾಡಿದ್ದ ಮಾಲುಗಳ ಹರಾಜು ಪ್ರಕ್ರಿಯೆ ಶುರುವಾಗಬೇಕಿತ್ತು. ಈ ನಡುವೆಯೇ ರಾತ್ರೋರಾತ್ರಿ ಬಂಡೆಕಲ್ಲುಗಳನ್ನು ಕದ್ದೊಯ್ಯಲು ಯತ್ನ ನಡೆದಿರುವುದು ಶಂಕೆಗೆ ಕಾರಣವಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ದಿನನಿತ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹಾನಿ ಆಗುತ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ. “ಬೇಲಿಯೇ ಎದ್ದು ಹೊಲ ಮೇಯುವಂತಾಗಬಾರದು. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸದ್ಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

Exit mobile version