ಇನ್ಸ್ಟಾಗ್ರಾಂ ಲವ್..ಮದ್ವೆ ನಂತ್ರ ಮಗು ಜೊತೆ ಬೀದಿಗೆ ಬಿದ್ದ ಮಹಿಳೆ: ನ್ಯಾಯಕ್ಕಾಗಿ ಹೋರಾಟ

ಷ್ಯ (11)

ಮೈಸೂರು: ಸಾಮಾಜಿಕ ಜಾಲತಾಣದ ಮೂಲಕ ಹುಟ್ಟಿದ ಪ್ರೀತಿ, ಬಳಿಕ ಮದುವೆಯಾಗಿ ಸುಂದರ ಬದುಕಿನ ಕನಸು ಕಂಡಿದ್ದ ಯುವತಿಯೊಬ್ಬಳ ಜೀವನ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಪ್ರೀತಿಸಿ ಮದುವೆಯಾದ ಪತಿಯೇ ತನ್ನನ್ನು ಹಾಗೂ ಮಗುವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಗೃಹಿಣಿಯೊಬ್ಬರು ನ್ಯಾಯಕ್ಕಾಗಿ ಅಲೆದಾಡುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಗದಗ ಜಿಲ್ಲೆಯ ಮಹಾಲಿಂಗಪುರ ತಾಂಡ ಮೂಲದ ಸಿಂಧು ಎಂಬ ಯುವತಿ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಸೊಳ್ಳಾಪುರ ಗ್ರಾಮದ ರಾಕೇಶ್ ಎಂಬ ಯುವಕನನ್ನು ಪ್ರೀತಿಸಿದ್ದರು. ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಗೆ ತಿರುಗಿದ್ದು, ನಂತರ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಪುಟ್ಟ ಮಗು ಕೂಡ ಇದೆ.

ಮದುವೆಯ ಬಳಿಕ ತಮ್ಮ ಜೀವನ ಸುಖವಾಗಿ ಸಾಗಲಿದೆ ಎಂದು ನಂಬಿದ್ದ ಸಿಂಧುಗೆ, ಕೆಲವೇ ದಿನಗಳಲ್ಲಿ ಸಮಸ್ಯೆಗಳು ಎದುರಾಗಿವೆ ಎಂದು ಅವರು ಆರೋಪಿಸಿದ್ದಾರೆ. ಹೆರಿಗೆ ಬಳಿಕ ಆರೋಗ್ಯ ಸಮಸ್ಯೆಯಿಂದಾಗಿ ಸಿಂಧು ತವರು ಮನೆಗೆ ತೆರಳಿದ್ದರು. ಆರೋಗ್ಯ ಸುಧಾರಿಸಿದ ಬಳಿಕ ಮಗುವಿನೊಂದಿಗೆ ಮತ್ತೆ ಗಂಡನ ಮನೆಗೆ ಬಂದಾಗ ಪರಿಸ್ಥಿತಿ ಬದಲಾಗಿತ್ತು ಎಂದು ಅವರು ಹೇಳಿದ್ದಾರೆ.

ಗಂಡನ ಮನೆಯವರು ತಮ್ಮ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಸಿಂಧು ಆರೋಪಿಸಿದ್ದಾರೆ. ಊಟ ನೀಡದೆ ಮನೆಯ ಕೆಲಸ ಮಾಡಿಸುತ್ತಿದ್ದರು, ಮಗುವಿನ ಆರೈಕೆಯಲ್ಲೂ ತೊಂದರೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಮಗುವಿಗೆ ಹಾಲು ಕೊಡಿಸಲು ಬೇರೆ ಮನೆಯವರ ಸಹಾಯ ಪಡೆಯಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಸಿಂಧು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪತಿ ರಾಕೇಶ್ ಟಿಟಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕರೆ ಮಾಡಿದಾಗಲೆಲ್ಲಾ ಕೆಲಸದ ನಿಮಿತ್ತ ದೂರದಲ್ಲಿದ್ದೇನೆ ಎಂದು ಹೇಳುತ್ತಿದ್ದರು ಎಂದು ಸಿಂಧು ಆರೋಪಿಸಿದ್ದಾರೆ. ಪತಿಯ ಬೆಂಬಲ ಸಿಗದೆ, ಕೊನೆಗೆ ತಾನು ಮತ್ತು ಮಗುವನ್ನು ಗಂಡನ ಮನೆಯವರು ಹೊರಗೆ ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೈಯಲ್ಲಿ ಹಸುಗೂಸನ್ನು ಹಿಡಿದುಕೊಂಡು ಸಿಂಧು ಇದೀಗ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. “ನನಗೆ ನನ್ನ ಗಂಡ ಬೇಕು, ನನ್ನ ಮಗುವಿಗೆ ತಂದೆಯ ಆಶ್ರಯ ಬೇಕು” ಎಂದು ಅವರು ಮನವಿ ಮಾಡುತ್ತಿದ್ದಾರೆ. ಮಗುವಿನೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸಿಂಧು, ತಮ್ಮ ಬದುಕಿಗೆ ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಮಗಳ ಸ್ಥಿತಿಯನ್ನು ಕಂಡು ಸಿಂಧು ಅವರ ಪೋಷಕರು ಕೂಡ ಕಣ್ಣೀರಿಡುತ್ತಿದ್ದಾರೆ. ಪ್ರೀತಿಸಿ ಮದುವೆಯಾಗಿ ಬಂದ ಮಗಳು ಇಂದು ಮಗುವಿನೊಂದಿಗೆ ಸಂಕಷ್ಟದಲ್ಲಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ. ಮೈಸೂರಿನ ಅಂಬೇಡ್ಕರ್ ಪ್ರತಿಮೆ ಎದುರು ಮಗುವಿನೊಂದಿಗೆ ಕುಳಿತು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

Exit mobile version