ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಬರ್ಬರ ಹ*ತ್ಯೆ

WhatsApp Image 2026 03 27 at 7.40.36 AM (1)

ಮಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಒಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಕೊಲೆಯಾದ ರೌಡಿಶೀಟರ್ ಯಾರು?

ಕೊಲೆಯಾದ ವ್ಯಕ್ತಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆರಿಫ್ (46) ಎಂದು ಗುರುತಿಸಲಾಗಿದೆ. ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿಯಾಗಿರುವ ಆರಿಫ್ ಅವರನ್ನು ‘ಟ್ಯಾಬ್ಲೆಟ್ ಆರಿಫ್’ ಎಂದೂ ಕರೆಯಲಾಗುತ್ತಿತ್ತು. ಈ ಹೆಸರಿನಿಂದಲೇ ಅವರು ಸ್ಥಳೀಯ ವಲಯದಲ್ಲಿ ಪ್ರಸಿದ್ಧರಾಗಿದ್ದರು. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರಿಪ್ ಹೆಸರು ಸೇರಿಕೊಂಡಿದೆ. ಅವರು ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ರೌಡಿಶೀಟರ್ ಆಗಿದ್ದರು.

ಘಟನೆ ಹೇಗೆ ನಡೆಯಿತು?

ಬೆಳಗ್ಗೆ ತೊಕ್ಕೊಟ್ಟು ಫೈ ಓವರ್ ಬಳಿ ಈ ಘಟನೆ ನಡೆದಿದೆ. ಆರಿಫ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರಿಫ್ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲೇ ಕಾರ್‌ನಲ್ಲಿದ್ದ ದುಷ್ಕರ್ಮಿಗಳು ಕೆಳಗೆ ಬಿದ್ದ ಆರಿಫ್ ಮೇಲೆ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರ್ ನಲ್ಲೇ ಪರಾರಿಯಾಗಿದ್ದಾರೆ. ಆರಿಫ್ ಅವರನ್ನು ಕೊಲೆ ಮಾಡಲು ದುಷ್ಕರ್ಮಿಗಳು ಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ ಎಂಬುವುದು ತನಿಖೆಯಿಂದ ತಿಳಿದುಬಂದಿದೆ.

ಗ್ಯಾಂಗ್ ವಾರ್ ಶಂಕೆ

ಆರಿಫ್ ಅವರಿಗೆ ಯಾರೊಂದಿಗೆ ದ್ವೇಷವಿತ್ತು, ಇತ್ತೀಚೆಗೆ ಯಾವುದೇ ಪ್ರಕರಣಗಳು ಇದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. 

ಪೊಲೀಸ್ ತನಿಖೆ ಆರಂಭ

ಘಟನೆಯ ಮಾಹಿತಿ ತಿಳಿದ ತಕ್ಷಣವೇ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಘಟನೆಯಲ್ಲಿ ಬಳಸಲಾದ ಮಾರಕಾಸ್ತ್ರಗಳು, ಕಾರ್ ಮತ್ತು ಬೈಕ್‌ನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿಗಳು ಯಾವ ಕಡೆಗೆ ಪರಾರಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ.

Exit mobile version