ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ ಸಂಚಾರ ಮಾರ್ಗದಲ್ಲಿ ಬದಲಾವಣೆ

ಹ್ಮೋ (37)

ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಸೆಪ್ಟೆಂಬರ್ 18ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ದಲ್ಲಿ ನಡೆಯಲಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರು ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ಸಲಹೆಗಳನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 17ರ ಸಂಜೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಸೆಪ್ಟೆಂಬರ್ 18ರ ಬೆಳಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪಡೀಲ್‌ನ ಪ್ರಜಾಸೌಧಕ್ಕೆ ತೆರಳಲಿದ್ದಾರೆ. ಸಭೆ ಮುಗಿದ ಬಳಿಕ ಮಧ್ಯಾಹ್ನ ಮೇರಿಹಿಲ್‌ನ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ಬಳಿಕ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 19ರ ಬೆಳಗ್ಗೆ ನಗರದಿಂದ ನಿರ್ಗಮಿಸಲಿದ್ದಾರೆ.

ಗಣ್ಯರ ಭದ್ರತೆ ಹಾಗೂ ವಾಹನ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಕೈಗೊಳ್ಳಲಾಗುತ್ತದೆ. ಸೆ.17ರ ಸಂಜೆ ಹಾಗೂ ಸೆ.19ರ ಬೆಳಗ್ಗೆ ಬಜಪೆ ವಿಮಾನ ನಿಲ್ದಾಣದಿಂದ ಕಾವೂರು, ಬೊಂದೇಲ್, ಮೇರಿಹಿಲ್, ಕೆ.ಪಿ.ಟಿ., ಕದ್ರಿ ಕಂಬಳ, ಬಂಟ್ಸ್ ಹಾಸ್ಟೆಲ್, ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್, ಹಂಪನಕಟ್ಟೆ, ಕ್ಲಾಕ್ ಟವರ್ ಹಾಗೂ ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ.

ಸೆ.18ರ ಬೆಳಗ್ಗೆ ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಕ್ಲಾಕ್ ಟವರ್, ಹಂಪನಕಟ್ಟೆ, ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್, ಕೆ.ಪಿ.ಟಿ., ನಂತೂರು ವೃತ್ತ, ಪಂಪುವೆಲ್, ನಾಗುರಿ, ಬಜಾಲ್ ಕ್ರಾಸ್ ಮೂಲಕ ಪಡೀಲ್‌ನ ಪ್ರಜಾಸೌಧಕ್ಕೆ ಸಂಚಾರ ನಡೆಯಲಿದೆ.

ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಬದ್ರಿಯಾ ಜಂಕ್ಷನ್‌ನಿಂದ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನಿಲೇಶ್ವರ ರಸ್ತೆ ಹಾಗೂ ರೋಸಾರಿಯೋ ರಸ್ತೆ ಮೂಲಕ ಸಂಚರಿಸಬಹುದು. ಹ್ಯಾಮಿಲ್ಟನ್‌ನಿಂದ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವವರು ನೆಲ್ಲಿಕಾಯಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ಪಂಪುವೆಲ್–ನಾಗುರಿ–ಪಡೀಲ್ ಮಾರ್ಗದ ಬದಲು ನಂತೂರು–ಕೈಕಂಬ–ಮರೋಳಿ ಮಾರ್ಗವನ್ನು ಬಳಸಬಹುದು. ಪರ್ಯಾಯವಾಗಿ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೊಳಿಯಾರ್–ಮೆಲ್ಕಾರ್ ಮಾರ್ಗವನ್ನೂ ಬಳಸಬಹುದಾಗಿದೆ. ಪಡೀಲ್ ಹಾಗೂ ಬಜಾಲ್ ನಡುವಿನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಜಪ್ಪಿನಮೊಗರು ದ್ವಾರ–ಬಜಾಲ್ ಮಾರ್ಗವನ್ನು ಬಳಸುವಂತೆ ಸಲಹೆ ನೀಡಲಾಗಿದೆ.

ಗಣ್ಯರ ಸಂಚಾರ ನಡೆಯುವ ರಸ್ತೆಗಳಲ್ಲಿ ರಸ್ತೆಬದಿಯಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.

ಗಣ್ಯರ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು

ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರು ನಗರವನ್ನು ಸಿಂಗಾರಗೊಳಿಸಲಾಗುತ್ತಿದೆ. ಬಜಪೆ ವಿಮಾನ ನಿಲ್ದಾಣ ರಸ್ತೆ, ಪ್ರಜಾಸೌಧ ರಸ್ತೆ, ಸರ್ಕ್ಯೂಟ್ ಹೌಸ್ ಹಾಗೂ ತಾಜ್ ವಿವಾಂತ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ರಸ್ತೆ ಡಿವೈಡರ್‌ಗಳಿಗೆ ಹೊಸ ಬಣ್ಣ ಬಳಿಯಲಾಗಿದ್ದು, ಹೆಚ್ಚುವರಿ ಎಲ್‌ಇಡಿ ದೀಪಗಳನ್ನು ಅಳವಡಿಸಿ ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕರಾವಳಿಯ ಸಾಂಪ್ರದಾಯಿಕ ಆತಿಥ್ಯ ನೀಡಲು ಸಿದ್ಧತೆ ನಡೆಸಲಾಗಿದೆ. ತಣ್ಣೀರುಬಾವಿ ಕಡಲತೀರದಲ್ಲಿ ವಿಶೇಷ ರಾತ್ರಿ ಭೋಜನ ಆಯೋಜಿಸಲಾಗಿದ್ದು, ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಅಲಂಕಾರ, ಸ್ವಾಗತ ಕಮಾನು ಹಾಗೂ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗುತ್ತಿದೆ. ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು, ವಿವಿಧ ಮೀನು ಖಾದ್ಯಗಳು ಸೇರಿದಂತೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಅಗತ್ಯವಿದ್ದಲ್ಲಿ ಪರ್ಯಾಯ ಮಾರ್ಗ ಬಳಸುವ ಮೂಲಕ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಹಕರಿಸುವಂತೆ ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.

Exit mobile version