ಅಲಂಕಾರಿಕ ಗಿಡವೆಂದು ಮನೆ ಮುಂದೆ 9 ಕೆ.ಜಿ. ಗಾಂಜಾ ಬೆಳೆಸಿದ ಭೂಪ ಅರೆಸ್ಟ್‌

Untitled design 2025 10 30t135352.986

ಮಂಡ್ಯ: ಅಲಂಕಾರಿಕ ಗಿಡ ಎಂದು ಹೇಳಿ ಜನರನ್ನು ಮೋಸಗೊಳಿಸಿ, ಮನೆಯ ಮುಂದೆಯೇ ಗಾಂಜಾ ಗಿಡಗಳನ್ನು ಬೆಳೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದ ಸುರೇಶ್ ಎಂಬ ಆರೋಪಿಯನ್ನ ಪೊಲೀಸರು ಬಂದಿಸಿದ್ದಾರೆ.

ಸುರೇಶ್ ತನ್ನ ನಿವಾಸದ ಮುಂಬದಿಯ ಉದ್ಯಾನದಲ್ಲಿ ಐದು ಗಾಂಜಾ ಗಿಡಗಳನ್ನು ಬೆಳೆಸಿದ್ದ. ಸ್ಥಳೀಯರು ಗಿಡಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದಾಗ, ಅವು ಸುಂದರವಾದ ಅಲಂಕಾರಿಕ ಗಿಡಗಳು ಎಂದು ಸುರೇಶ್ ಹೇಳಿದ್ದ.  ಗಾಂಜಾ ಗಿಡಗಳು ಹೂ ಬಿಡುವ ಹಂತ ತಲುಪಿದಾಗ, ಅವುಗಳನ್ನು ಮತ್ತಷ್ಟು ಮರೆಮಾಚಲು ಅವನು ಗಿಡಗಳಿಗೆ ಸೀರೆಗಳನ್ನು ಸುತ್ತಿ, ಅವು ಸಾಮಾನ್ಯ ಅಲಂಕಾರಿಕ ಸಸ್ಯಗಳಂತೆ ಕಾಣುವಂತೆ ಮಾಡಿದ.

ಆದರೆ, ಸುರೇಶ್‌ನ ವರ್ತನೆ ಸಂಶಯಾಸ್ಪದವಾಗಿತ್ತು.ಜೊತೆಗೆ ಗಿಡಗಳ ಮೇಲೆ ಅನುಮಾನ ಬಂದ ಕಾರಣ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ತಕ್ಷಣ ಸುರೇಶ್‌ನ ಮನೆ ಮೇಲೆ ದಾಳಿ ನಡೆಸಿದರು.

ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಈ ಅಲಂಕಾರಿಕ ಗಿಡಗಳು ನಿಷಿದ್ಧ ಗಾಂಜಾ ಸಸ್ಯಗಳೆಂದು ತಿಳಿದುಬಂದಿದೆ. ಪೊಲೀಸರು ತಪಶೀಲು ಪರಿಶೀಲನೆ ನಡೆಸಿದಾಗ, ಒಟ್ಟು 9 ಕಿಲೋಗ್ರಾಂಗಳಷ್ಟು ಗಾಂಜಾ ಪದಾರ್ಥವನ್ನು ಪತ್ತೆಹಚ್ಚಲಾಯಿತು, ಅದರ ಮಾರುಕಟ್ಟೆ ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಆರೋಪಿ ಸುರೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

Exit mobile version