ಬೆಂಗಳೂರಿನಲ್ಲಿ ನೆಲೆಯೂರಲು ಲೂಫ್ತಾನ್ಸಾ ಟೆಕ್ನಿಕ್ ಆಸಕ್ತಿ: ಎಂ ಬಿ ಪಾಟೀಲ

ಅದ್ವೈತ್ (6)

ಬೆಂಗಳೂರು (ಆ. 12): ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಲೂಫ್ತಾನ್ಸಾ ಟೆಕ್ನಿಕ್ ಕಂಪನಿಯು ತನ್ನ ಕಾರ್ಯ ಚಟುವಟಿಕೆಗಳ ವಿಸ್ತರಣೆಗೆ ಮುಂದಾಗಿದ್ದು, ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಬುಧವಾರ ತಮನ್ನು ಇಲ್ಲಿನ ಖನಿಜ ಭವನದಲ್ಲಿ ಭೇಟಿಯಾಗಿದ್ದ ಕಂಪನಿಯ ಸಿಇಒ ಮಾರ್ಸೆಲ್ ಪಾಸ್ಟೂಸ್ಕ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಜರ್ಮನ್ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೇಸ್ಲರ್ ಕೂಡ ಇದ್ದರು.

ಈ ಬಗ್ಗೆ ಮಾತನಾಡಿರುವ ಸಚಿವರು, ಬೆಂಗಳೂರಿನಲ್ಲಿ ಇರುವ ವೈಮಾನಿಕ ಕ್ಷೇತ್ರದ ಸುಸ್ಥಿತಿ, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಹೊಂದಿರುವ ಅತ್ಯುತ್ತಮ ವಿಮಾನಸೇವೆ, ಕೌಶಲ್ಯ ಹೊಂದಿರುವ ಪ್ರತಿಭಾ ಸಂಪನ್ಮೂಲ, ಸಂಶೋಧನೆ ಮತ್ತು ಅಭಿವೃದ್ಧಿ, ಹೂಡಿಕೆಸ್ನೇಹಿ ನೀತಿಗಳು, ವಿಶ್ವ ದರ್ಜೆಯ ಎಂಜಿನಿಯರಿಂಗ್, ಏರೋಸ್ಪೇಸ್ ಮತ್ತು ರಕ್ಷಣಾ ಪರಿವ್ಯವಸ್ಥೆ ಇವುಗಳನ್ನು ಲೂಫ್ತಾನ್ಸಾ ಟೆಕ್ನಿಕ್ ನಿಯೋಗಕ್ಕೆ ಮನದಟ್ಟು ಮಾಡಿಕೊಡಲಾಗಿದೆ ಎಂದಿದ್ದಾರೆ.

ಕಂಪನಿಯ ಹೂಡಿಕೆ ಪ್ರಸ್ತಾವನೆಯನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇನ್ವೆಸ್ಟ್ ಇಂಡಿಯಾ ಮುಂತಾದ ಉಪಕ್ರಮಗಳೊಂದಿಗೆ ಕೆಲಸ ಮಾಡಲಾಗುವುದು. ಇದು ಸಾಧ್ಯವಾದರೆ, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯದ ಸ್ಥಾನವು ಮತ್ತಷ್ಟು ದೃಢವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಕಂಪನಿಯ ಉನ್ನತಾಧಿಕಾರಿಗಳಾದ ಜೂಲಿಯಾ ಶ್ಮಿಟ್, ಫಿಲಿಪ್ ಜೆಸೆಲ್, ಜಯಂತ್ ಸಿಂಗ್ ಕೂಡ ಇದ್ದರು.

Exit mobile version