ಬೆಂಗಳೂರು (ಆ .12): ಆಗಸ್ಟ್ 7ರಂದು ಶಿವಗಂಗೆ ಬೆಟ್ಟದಲ್ಲಿ ಏಕಾಂಗಿಯಾಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ 31 ವರ್ಷದ ಟೆಕ್ಕಿ ಅದ್ವೈತ್ ಉಪಾಧ್ಯಾಯ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಬೆಟ್ಟದ ಅಪಾಯಕಾರಿ ಶಾಂತಲಾ ಡ್ರಾಪ್ ಕೆಳಭಾಗದಲ್ಲಿ ಡ್ರೋನ್ ಮೂಲಕ ಮಾನವ ದೇಹದಂತೆ ಕಾಣುವ ವಸ್ತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಅದ್ವೈತ್ ಅವರನ್ನು ಪತ್ತೆಹಚ್ಚಲು ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಸಾಹಸಿ ಜ್ಯೋತಿರಾಜ್ ಅವರ ತಂಡವೂ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದು, ಶಾಂತಲಾ ಡ್ರಾಪ್ನಿಂದ ರೋಪ್ ಬಳಸಿ ಕಡಿದಾದ ಪ್ರದೇಶಕ್ಕೆ ಇಳಿದು ಶೋಧ ನಡೆಸುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿರುವ ಈ ಪ್ರದೇಶಕ್ಕೆ ತಲುಪುವುದು ಅತ್ಯಂತ ಸವಾಲಿನದ್ದಾಗಿದೆ. ಜ್ಯೋತಿರಾಜ್ ತಂಡ ರೋಪ್ ಮೂಲಕ ಇಳಿದು ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ಅದ್ವೈತ್ ಐಐಟಿ ಹಳೆಯ ವಿದ್ಯಾರ್ಥಿಯಾಗಿದ್ದು, ಸೈಬರ್ ಭದ್ರತಾ ವೃತ್ತಿಪರರಾಗಿ ವೈಟ್ಫೀಲ್ಡ್ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಡುಗೋಡಿಯಲ್ಲಿ ವಾಸವಾಗಿರುವ ಅವರು ಆಗಸ್ಟ್ 7ರಂದು ಬೆಳಗ್ಗೆ ಸುಮಾರು 7.30ಕ್ಕೆ ಶಿವಗಂಗೆ ತಲುಪಿ ಚಾರಣ ಆರಂಭಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಮಧ್ಯಾಹ್ನದ ವೇಳೆಗೆ ವಾಪಸ್ ಬರಬೇಕಿದ್ದರೂ ಅವರು ಮರಳಿರಲಿಲ್ಲ.
ಶಿವಗಂಗೆಗೆ ತೆರಳಲು ಅದ್ವೈತ್ ಬಾಡಿಗೆಗೆ ಪಡೆದಿದ್ದ ಮೋಟಾರ್ಸೈಕಲ್ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಆದರೆ, ಅವರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಪೊಲೀಸರು ಅವರ ಮೊಬೈಲ್ನ ಕೊನೆಯ ಸಿಗ್ನಲ್ ಅನ್ನು ಕುಣಿಗಲ್ ರಸ್ತೆಯ ಕುದುರು ಪ್ರದೇಶದಲ್ಲಿ ಪತ್ತೆಹಚ್ಚಿದ್ದರು. ಈ ಸ್ಥಳ ಸಾಮಾನ್ಯ ಶಿವಗಂಗೆ ಚಾರಣ ಮಾರ್ಗದಿಂದ ದೂರದಲ್ಲಿದೆ ಎನ್ನಲಾಗಿದೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಶೋಧ ಕಾರ್ಯಾಚರಣೆ ತೀವ್ರಗೊಂಡ ಸಂದರ್ಭದಲ್ಲಿ ಅಪಾಯಕಾರಿ ಶಾಂತಲಾ ಡ್ರಾಪ್ನ ಕೆಳಭಾಗದ ದಟ್ಟ ಸಸ್ಯವರ್ಗದಲ್ಲಿ ಡ್ರೋನ್ ತಂಡಗಳಿಗೆ ಮಾನವ ದೇಹದಂತೆ ಕಾಣುವ ವಸ್ತು ಕಂಡುಬಂದಿದೆ. ಇದರಿಂದ ಅದ್ವೈತ್ ಅಪಘಾತಕ್ಕೀಡಾಗಿರಬಹುದೆಂಬ ಆತಂಕ ಹೆಚ್ಚಾಗಿದೆ. ಆದರೆ ಪತ್ತೆಯಾಗಿರುವ ವಸ್ತು ಮಾನವ ದೇಹವೇ ಅಥವಾ ಅದು ಅದ್ವೈತ್ ಅವರದ್ದೇ ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಕಠಿಣ ಭೂಪ್ರದೇಶ ಹಾಗೂ ದಟ್ಟವಾದ ಸಸ್ಯವರ್ಗದಿಂದಾಗಿ ನಿಖರ ಸ್ಥಳ ತಲುಪುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿದೆ. ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದು, ಡ್ರೋನ್ಗಳು ಹಾಗೂ ನೆಲದ ತಂಡಗಳ ಮೂಲಕ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿದಿದೆ.
ಇದರ ನಡುವೆ ಪೊಲೀಸರು ಅದ್ವೈತ್ ನಾಪತ್ತೆಯಾಗುವ ಮುನ್ನ ಅವರ ಚಲನವಲನ ಹಾಗೂ ಡಿಜಿಟಲ್ ಚಟುವಟಿಕೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಅವರ ಲ್ಯಾಪ್ಟಾಪ್ನ ಬ್ರೌಸಿಂಗ್ ಇತಿಹಾಸದ ಕುರಿತೂ ತನಿಖೆ ನಡೆಯುತ್ತಿದೆ. ಕೆಲವು ಹುಡುಕಾಟಗಳು ಶಿವಗಂಗೆ, ಶಾಂತಲಾ ಡ್ರಾಪ್ ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೆ ಸಂಬಂಧಿಸಿದ್ದವು ಎನ್ನಲಾಗಿದ್ದರೂ, ಇದರಿಂದ ಯಾವುದೇ ಅಂತಿಮ ತೀರ್ಮಾನಕ್ಕೆ ಪೊಲೀಸರು ಬಂದಿಲ್ಲ.
ಇಂದೋರ್ ಪೊಲೀಸರು ಕೂಡ ಪ್ರಕರಣದ ಮಾಹಿತಿ ಕಲೆಹಾಕುತ್ತಿದ್ದಾರೆ. ಅದ್ವೈತ್ ಇಂದೋರ್ ನಿವಾಸಿ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ಲಭ್ಯವಾಗಿದ್ದು, ಕುಟುಂಬ ತಮ್ಮನ್ನು ಸಂಪರ್ಕಿಸಿದರೆ ಅಗತ್ಯ ನೆರವು ನೀಡುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸದ್ಯ ರಕ್ಷಣಾ ತಂಡಗಳ ಪ್ರಮುಖ ಗುರಿ ಅದ್ವೈತ್ ಅವರನ್ನು ಪತ್ತೆಹಚ್ಚುವುದು ಹಾಗೂ ಡ್ರೋನ್ನಲ್ಲಿ ಕಂಡುಬಂದ ವಸ್ತು ನಿಜಕ್ಕೂ ಅವರದ್ದೇ ಎಂಬುದನ್ನು ಖಚಿತಪಡಿಸುವುದಾಗಿದೆ. ಶಿವಗಂಗೆ ಬೆಟ್ಟದಲ್ಲಿ ಶೋಧ ಮತ್ತು ತನಿಖೆ ಮುಂದುವರಿದಿದೆ.