ಲಕ್ಕುಂಡಿ ನಿಧಿ ಪತ್ತೆ ಪ್ರಕರಣ: ಗ್ರಾಮ ಸ್ಥಳಾಂತರಿಸಲು ಚಿಂತನೆ-ಹೆಚ್.ಕೆ. ಪಾಟೀಲ್

Untitled design 2026 01 15T213529.142

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ (Lakkundi) ನಿಧಿ ಪತ್ತೆಯಾದ ನಂತರ, ಈಗ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಗಂಭೀರ ಪ್ರಸ್ತಾವನೆ ಮಂಡಿಸಲಾಗಿದೆ. ಈ ಪ್ರದೇಶದ ಪುರಾತತ್ವ ಸಂರಕ್ಷಣೆ ಮತ್ತು ಹೆಚ್ಚುವರಿ ಉತ್ಖನನ ಕಾರ್ಯಗಳಿಗೆ ಅಡ್ಡಿಯಾಗದಂತೆ ಗ್ರಾಮವನ್ನು ಇತರ ಕಡೆಗೆ ಪರಿಶೀಲಿಸುವುದರ ವಿಚಾರವನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ

ಕಲ್ಯಾಣಿ ಚಾಲುಕ್ಯರ ಕಾಲದ ರಾಜಧಾನಿಯಾಗಿದ್ದ ಲಕ್ಕುಂಡಿ ಗ್ರಾಮವು ಅದ್ಭುತ ವಾಸ್ತುಶಿಲ್ಪ ಮತ್ತು ಪುರಾತತ್ವದ ದೃಷ್ಟಿಯಿಂದ ಅತ್ಯಮೂಲ್ಯವಾಗಿದೆ. ಈ ಗ್ರಾಮವು 101 ಬಾವಿಗಳಿಗೆ (ಕಲ್ಯಾಣಿ ಅಥವಾ ಪುಷ್ಕರ್ಣಿ) ಹೆಸರುವಾಸಿಯಾಗಿದ್ದು, ಅನೇಕ ಹಿಂದೂ ಮತ್ತು ಜೈನ ದೇವಾಲಯಗಳನ್ನು ಹೊಂದಿದೆ. ಇಲ್ಲಿರುವ ಕಾಶಿ ವಿಶ್ವೇಶ್ವರ ದೇವಾಲಯ ಮತ್ತು ಬ್ರಹ್ಮ ಜಿನಾಲಯದಂತಹ ಹಲವು ಸ್ಮಾರಕಗಳು ಕಲ್ಯಾಣ ಚಾಲುಕ್ಯರ ಕಾಲದ್ದಾಗಿವೆ. ರಾಜ್ಯ ಸರ್ಕಾರವು ಗ್ರಾಮದಲ್ಲಿರುವ 16 ಪುರಾತನ ದೇವಾಲಯಗಳು ಮತ್ತು ಬಾವಿಗಳನ್ನು ಈಗಾಗಲೇ ರಕ್ಷಿತ ಸ್ಮಾರಕಗಳಾಗಿ ಘೋಷಿಸಿದೆ.

ಲಕ್ಕುಂಡಿಯಲ್ಲಿ ಮನೆ ಕಟ್ಟುವಾಗ ದೊರೆತ ನಿಧಿಯನ್ನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿದ ಗಂಗವ್ವ ರಿತ್ತಿ ಮತ್ತು ಅವರ ಪುತ್ರ ಪ್ರಜ್ವಲ್ ರಿತ್ತಿ ಅವರನ್ನು ಸರ್ಕಾರ ವಿಶೇಷವಾಗಿ ಸನ್ಮಾನಿಸಲಿದೆ. ಈ ಕುಟುಂಬಕ್ಕೆ ಉದ್ಯೋಗ, ಮನೆ ನಿರ್ಮಾಣಕ್ಕೆ ನಿವೇಶನ ನೀಡುವುದರ ಜೊತೆಗೆ, ವಿದ್ಯಾರ್ಥಿ ಪ್ರಜ್ವಲ್‌ಗೆ ದ್ವಿತೀಯ ಪಿಯು ವರೆಗೆ ಉಚಿತ ಶಿಕ್ಷಣದ ಭರವಸೆ ನೀಡಲಾಗಿದೆ. ನಿಧಿಗಿಂತಲೂ ಹೆಚ್ಚು ಪ್ರಜ್ವಲ್ ರಿತ್ತಿ ಆದರ್ಶ ಮೆರೆದಿದ್ದಾನೆ. ಈ ಕುಟುಂಬದ ಎಲ್ಲಾ ಅಗತ್ಯಗಳಿಗೂ ಸರ್ಕಾರ ಸ್ಪಂದಿಸಲಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಗ್ರಾಮ ಸ್ಥಳಾಂತರದ ಗಂಭೀರ ಚಿಂತನೆ

ಗ್ರಾಮದಲ್ಲಿ ಈಗಾಗಲೇ ನಿಧಿ ಪತ್ತೆಯಾಗಿದೆ ಜೊತೆಗೆ ಇನ್ನು ಅಮೂಲ್ಯ ಪುರಾತನ ವಸ್ತುಗಳಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಮವನ್ನ ಸಂಪೂರ್ಣವಾಗಿ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸುತ್ತಿದೆ. ಗ್ರಾಮವನ್ನು ಸ್ಥಳಾಂತರಿಸುವ ಮೂಲಕ ಪುರಾತತ್ವ ಇಲಾಖೆಯು ವಿಶಾಲ ಪ್ರಮಾಣದಲ್ಲಿ ಉತ್ಖನನ ಕಾರ್ಯಗಳನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗುತ್ತದೆ. ಇದು ಐತಿಹಾಸಿಕ ಪರಂಪರೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಂರಕ್ಷಿಸಲು ನೆರವಾಗಬಹುದು. ಈ ನಡುವೆ, ಪುರಾತತ್ವ ಇಲಾಖೆಯು ಗ್ರಾಮದಲ್ಲಿ ದೊಡ್ಡ ಮಟ್ಟದ ಉತ್ಖನನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ.

ಮುಂದಿನ ಹೆಜ್ಜೆ

ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾದ ಲಕ್ಕುಂಡಿಯ ಭವಿಷ್ಯ ಈಗ ನಿರ್ಣಾಯಕ ತಿರುವಿನಲ್ಲಿದ್ದು, ನಿವಾಸಿಗಳ ಹಿತಾಸಕ್ತಿ, ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪುರಾತತ್ವೀಯ ಅನ್ವೇಷಣೆ, ಈ ಮೂರು ಅಂಶಗಳ ನಡುವೆ ಸಮತೋಲನ ಕಾಪಾಡುವ ಸವಾಲು ಸರ್ಕಾರದ ಮುಂದಿದೆ. ಎಲ್ಲ ವಿಚಾರಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಯೋಗ್ಯ ನಿರ್ಧಾರ ತೆಗೆದುಕೊಳ್ಳಲಿದೆ.

Exit mobile version