ಗದಗ: ಲಕ್ಕುಂಡಿಯ ಭೂಗರ್ಭದಲ್ಲಿ ಅಡಗಿರುವ ಪ್ರಾಚೀನ ನಿಧಿ ಮತ್ತು ಐತಿಹಾಸಿಕ ಪುರಾತನ ವಸ್ತುಗಳನ್ನು ಹೊರತೆಗೆಯುವ ಉದ್ದೇಶದಿಂದ ಗದಗ ಜಿಲ್ಲಾಡಳಿತವು ಬೃಹತ್ ಉತ್ಖನನ (Excavation) ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿದೆ. ಜನವರಿ 16ರಿಂದ ಈ ಮಹತ್ವದ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಉತ್ಪನನ ಎಲ್ಲಿ ನಡೆಯುತ್ತಿದೆ ?
ಲಕ್ಕುಂಡಿಯ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮ ವಲಯ ಎಂದು ಗುರುತಿಸಿ, ಪಾರಂಪರಿಕ ನಿಧಿಯನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪ್ರಾಚೀನ ವಸ್ತುಗಳು ಪತ್ತೆಯಾಗುತ್ತಿವೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಈ ವ್ಯವಸ್ಥಿತ ಕಾರ್ಯಾಚರಣೆ ರೂಪಿಸಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ ಮತ್ತು ನಿಷೇಧಿತ ವಲಯ ಘೋಷಣೆ
ಉತ್ಖನನ ನಡೆಯುತ್ತಿರುವ ಪ್ರದೇಶದ ಭದ್ರತೆಯ ದೃಷ್ಟಿಯಿಂದ ಜಿಲ್ಲಾಡಳಿತವು ಆ ಜಾಗವನ್ನು ನಿಷೇಧಿತ ವಲಯ ಎಂದು ಘೋಷಿಸಿದೆ. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ನೇಮಕಗೊಂಡ ಅಧಿಕೃತ ಸಿಬ್ಬಂದಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ವ್ಯಕ್ತಿಗಳು ಅಥವಾ ಪ್ರವಾಸಿಗರು ಉತ್ಖನನನಡೆಯುವ ಸ್ಥಳಕ್ಕೆ ಪ್ರವೇಶಿಸುವಂತಿಲ್ಲ. ಈ ಸ್ಥಳದಲ್ಲಿ ಫೋಟೋಗ್ರಫಿ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಫೋಟೋ ಅಥವಾ ವಿಡಿಯೋ ತೆಗೆದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಪಾರಂಪರಿಕ ಸಂಪತ್ತಿನ ರಕ್ಷಣೆ
ಲಕ್ಕುಂಡಿಯು ನೂರಾರು ಗುಡಿಗಳು ಮತ್ತು ಕಲ್ಯಾಣಿಗಳನ್ನು ಹೊಂದಿರುವ ಐತಿಹಾಸಿಕ ತಾಣ. ಇಲ್ಲಿನ ಭೂಮಿಯ ಅಡಿಯಲ್ಲಿ ಹಳೆಯ ಕಾಲದ ಸುಂದರ ಕೆತ್ತನೆಗಳು, ನಾಣ್ಯಗಳು ಅಥವಾ ಶಾಸನಗಳು ಸಿಗುವ ಸಾಧ್ಯತೆ ಇದೆ. ಈ ಅಮೂಲ್ಯ ಆಸ್ತಿಯನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲು ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಯುತ್ತಿದೆ.
ಈ ಉತ್ಖನನ ಕಾರ್ಯವು ಮುಗಿಯುವವರೆಗೂ ಲಕ್ಕುಂಡಿಗೆ ಭೇಟಿ ನೀಡುವ ಪ್ರವಾಸಿಗರು ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಿ, ಇತಿಹಾಸದ ಸಂರಕ್ಷಣೆಗೆ ಸಹಕರಿಸಬೇಕೆಂದು ಕೋರಲಾಗಿದೆ.
