ಚಿನ್ನದ ನಿಧಿ ಒಪ್ಪಿಸಿದ ಕುಟುಂಬಕ್ಕೆ ಸರ್ಕಾರದಿಂದ ಬಂಪರ್ ಗಿಫ್ಟ್!

Untitled design 2026 01 22T170649.764

ಗದಗ: ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯಾ ಅಗೆದ ವೇಳೆ ಪತ್ತೆಯಾದ 470 ಗ್ರಾಂ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಕೊನೆಗೂ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತಿ ಬಂಪರ್ ಗಿಫ್ಟ್ ನೀಡಿದೆ. ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಗೌರವಿಸಿ, ಲಕ್ಕುಂಡಿ ಗ್ರಾಮ ಪಂಚಾಯತಿ 30×40 ವಿಸ್ತೀರ್ಣದ ನಿವೇಶನವನ್ನು ರಿತ್ತಿ ಕುಟುಂಬಕ್ಕೆ ನೀಡಲು ತೀರ್ಮಾನಿಸಿದೆ.

ಜನವರಿ 22ರಂದು ಲಕ್ಕುಂಡಿ ಗ್ರಾಮ ಪಂಚಾಯತಿಯ ವಿಶೇಷ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದ್ದು, ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸೈಟ್ ನೀಡುವ ನಿರ್ಣಯವನ್ನು ಅಧಿಕೃತವಾಗಿ ಪಾಸ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಪ್ರಜ್ವಲ್ ರಿತ್ತಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಭವ್ಯವಾಗಿ ಸನ್ಮಾನಿಸಲಾಯಿತು. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಂದು ನಿವೇಶನದ ಪ್ರಮಾಣಪತ್ರವನ್ನು ಕುಟುಂಬಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು ಎಂದು ಪಂಚಾಯತಿ ಪ್ರಕಟಿಸಿದೆ.

ಪಂಚಾಯತಿ ಅಧ್ಯಕ್ಷ ಕೆಂಚಪ್ಪ ಪೂಜಾರ್ ಮಾತನಾಡಿ, “ಜನವರಿ 10ರಂದು ಪ್ರಜ್ವಲ್ ರಿತ್ತಿ ತಮ್ಮ ಮನೆಯ ಪಾಯಾ ಅಗೆದಾಗ 466 ಗ್ರಾಂ ಬಂಗಾರ ಪತ್ತೆಯಾಯಿತು. ಅನೇಕರು ಸ್ವಾರ್ಥದ ದಾರಿಯನ್ನು ಆಯ್ದುಕೊಳ್ಳುವ ಈ ಕಾಲದಲ್ಲಿ, ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರೆವ್ವ ರಿತ್ತಿ ಈ ನಿಧಿಯನ್ನು ಯಾವುದೇ ಆಸೆ ಇಲ್ಲದೆ ಸರ್ಕಾರಕ್ಕೆ ಒಪ್ಪಿಸಿದ್ದು ಅಪರೂಪದ ಉದಾಹರಣೆ. ಈ ಪ್ರಾಮಾಣಿಕತೆಗೆ ಗೌರವ ಸಲ್ಲಿಸಲು ಗ್ರಾಮ ಪಂಚಾಯತಿ 30×40 ಸೈಟ್ ನೀಡಲು ನಿರ್ಧರಿಸಿದೆ. ಜೊತೆಗೆ ಅವರ ಶಿಕ್ಷಣ, ಉದ್ಯೋಗ ಮತ್ತು ಮನೆ ನಿರ್ಮಾಣಕ್ಕೂ ಸರ್ಕಾರದಿಂದ ನೆರವು ಒದಗಿಸಲಾಗುವುದು” ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ತೀರ್ಮಾನದಂತೆ, ಮುಂದೆ ಸಚಿವರು ಹಾಗೂ ಶಾಸಕರ ಅನುದಾನದಲ್ಲಿ ರಿತ್ತಿ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲಾಗುವುದು. ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ, ಅವರ ತಾಯಿ ಗಂಗಮ್ಮಗೆ ಉದ್ಯೋಗ ನೀಡುವ ಭರವಸೆ ಕೂಡ ಪಂಚಾಯತಿಯಿಂದ ನೀಡಲಾಗಿದೆ.

ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸಿ, ಬಡ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಇದರ ಪರಿಣಾಮವಾಗಿ ಜಿಲ್ಲಾಡಳಿತ ಹಾಗೂ ಪಂಚಾಯತಿ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಕುಟುಂಬಕ್ಕೆ ಸೂರು ಒದಗಿಸುವ ನಿರ್ಧಾರ ಕೈಗೊಂಡಿವೆ. ಇದರಿಂದ ಸಂತಸಗೊಂಡಿರುವ ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರೆವ್ವ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

Exit mobile version