ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪಟ್ಟಣದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಪನನ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಿನ ಕುತೂಹಲ ಮತ್ತು ಸಂಚಲನ ಮೂಡಿಸುತ್ತಿದೆ. ಪ್ರಾಚೀನ ಕಾಲದ ವೈಭವಕ್ಕೆ ಸಾಕ್ಷಿಯಾಗಿರುವ ಈ ಪ್ರದೇಶದಲ್ಲಿ ಪ್ರತಿದಿನ ಅಮೂಲ್ಯ ಪುರಾತನ ವಸ್ತುಗಳು ಪತ್ತೆಯಾಗುತ್ತಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಕಳೆದ ಎಂಟು ದಿನಗಳಿಂದ ಉತ್ಪನನ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ನಾಲ್ಕು ಬ್ಲಾಕ್ಗಳಂತೆ ಮಣ್ಣನ್ನು ತೆಗೆಯಲಾಗಿದ್ದು, ಈ ವೇಳೆ ಶಿವಲಿಂಗಗಳು, ನಾಗರಕಲ್ಲುಗಳು, ಶಿವಲಿಂಗದ ಪೀಠಗಳು, ವಿವಿಧ ವಿಗ್ರಹಗಳು, ದೇವಾಲಯದ ರಚನೆಯ ಕುರುಹುಗಳು ಸೇರಿದಂತೆ ಹಲವಾರು ಪುರಾತನ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ ನವಶಿಲಾಯುಗದ ಕಾಲಕ್ಕೆ ಸೇರಿದ್ದೆಂದು ಹೇಳಲಾಗಿರುವ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೋಟಾದ ಬಿಲ್ಲೆಗಳು ಮತ್ತು ಪ್ರಾಚ್ಯ ಅವಶೇಷಗಳು ದೊರೆತಿವೆ.
ಉತ್ಪನದ 8ನೇ ದಿನವಾದ ಇಂದು, ಅತ್ಯಂತ ಕುತೂಹಲಕಾರಿ ಮತ್ತು ಅಮೂಲ್ಯವೆಂದು ಪರಿಗಣಿಸಲ್ಪಡುವ ಲೋಹದ ಗುಂಡು ಪತ್ತೆಯಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳ ಗಮನ ಸೆಳೆದಿದೆ. ಸುಮಾರು ಅರ್ಧ ಕಿಲೋಗ್ರಾಂ ತೂಕವಿರುವ ಈ ಲೋಹದ ಗುಂಡು ಯಾವ ಕಾಲಘಟ್ಟಕ್ಕೆ ಸೇರಿದೆ? ಎಂಬ ಪ್ರಶ್ನೆಗಳು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಈ ಲೋಹದ ಗುಂಡು ಯುದ್ಧೋಪಕರಣವಾಗಿರಬಹುದೇ ಅಥವಾ ಯಾವುದಾದರೂ ವಿಶೇಷ ವಿಧಿವಿಧಾನಗಳಲ್ಲಿ ಬಳಸುತ್ತಿದ್ದ ವಸ್ತುವಾಗಿರಬಹುದೇ ಎಂಬ ಕುರಿತು ಪುರಾತತ್ವ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ವಸ್ತುವನ್ನು ವಶಕ್ಕೆ ಪಡೆದು ಸಂರಕ್ಷಣೆಗಾಗಿ ಕ್ರಮ ಕೈಗೊಂಡಿದ್ದು, ವಿಜ್ಞಾನಾಧಾರಿತ ಪರೀಕ್ಷೆಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ. ಪರೀಕ್ಷೆಯ ನಂತರ ಈ ವಸ್ತುವಿನ ಕಾಲಮಾನ, ಇತಿಹಾಸ ಮತ್ತು ಉಪಯೋಗದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಕುಂಡಿಯ ವೀರಭದ್ರೇಶ್ವರ ದೇವಾಲಯದ ಸುತ್ತಮುತ್ತ ಇನ್ನೂ ಕೆಲವೇ ಅಡಿ ಮಣ್ಣನ್ನು ತೆಗೆಯಬೇಕಿದ್ದು, ಅಲ್ಲಿ ಇನ್ನಷ್ಟು ಪುರಾತನ ಮತ್ತು ರಾಜ-ಮಹಾರಾಜರ ಕಾಲದ ಅಮೂಲ್ಯ ವಸ್ತುಗಳು ದೊರೆಯುವ ನಿರೀಕ್ಷೆ ಹೆಚ್ಚಿದೆ..
ಇನ್ನೊಂದೆಡೆ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಈ ಉತ್ಪನನ ಕಾರ್ಯ ಸ್ಥಳೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರ ಗಮನವನ್ನೂ ಸೆಳೆದಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇತಿಹಾಸ ಮತ್ತು ಪುರಾತತ್ವದ ಮೇಲೆ ಆಸಕ್ತಿ ಹೊಂದಿರುವ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಉತ್ಪನನ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸುರಕ್ಷತೆ ಹಾಗೂ ಪುರಾತನ ವಸ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚಿನ ನಿಗಾವಹಿಸಲು ಆಡಳಿತ ಕ್ರಮ ಕೈಗೊಂಡಿದೆ.
