ಹಣಕ್ಕಾಗಿ ಹಸುಗೂಸನ್ನ ಮಾರಾಟ ಮಾಡಲು ಯತ್ನಿಸಿದ ತಂದೆ ತಾಯಿ-ದಂಪತಿ ಸೇರಿ ಐವರು ಅರೆಸ್ಟ್‌

ಕೋಲಾರ: ಹೆತ್ತ ಮಗುವನ್ನೇ ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ಅಮಾನವೀಯ ಘಟನೆಯೊಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮಗು ಜನಿಸಿದ ಕೇವಲ ಏಳು ದಿನಗಳಲ್ಲಿ ಅದನ್ನು ಐದು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದ ಲಿವಿಂಗ್ ಟುಗೆದರ್ ದಂಪತಿ ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸಪುರದ ನಿವಾಸಿ ಮಹಿಳೆಗೆ ಈ ಹಿಂದೆ ಸಂತೋಷ್ ಎಂಬುವರೊಂದಿಗೆ ಮದುವೆಯಾಗಿದ್ದು, ಅವರಿಗೆ ಒಂದು ಗಂಡು ಮಗುವಿತ್ತು. ಆದರೆ ಕೌಟುಂಬಿಕ ಕಲಹದಿಂದ ಆತನನ್ನು ಬಿಟ್ಟ ಮಹಿಳೆ, ನಂತರ ರಾಘವೇಂದ್ರ ಎಂಬುವವನ ಜೊತೆ ‘ಲಿವಿಂಗ್ ಟುಗೆದರ್’ ಸಂಬಂಧದಲ್ಲಿದ್ದಳು. ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಈ ನಡುವೆ ಮಹಿಳೆ ಮತ್ತೆ ಗರ್ಭಿಣಿಯಾಗಿದ್ದು, ಏಳು ದಿನಗಳ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ರಾಘವೇಂದ್ರ ಮತ್ತು ಆ ಮಹಿಳೆಗೆ ಈ ಮಗು ಬೇಡವಾಗಿತ್ತು.

ಮಗುವನ್ನು ಮಾರಾಟ ಮಾಡಿ ಹಣ ಮಾಡುವ ಸಂಚು ರೂಪಿಸಿದ ಈ ದಂಪತಿಗೆ ನಾರಾಯಣಸ್ವಾಮಿ ಎಂಬ ಮಧ್ಯವರ್ತಿ ಪರಿಚಯವಾಗಿದ್ದ. ಮಗುವನ್ನು ಯಾರಿಗಾದರೂ ನೀಡಿದರೆ 5 ಲಕ್ಷ ರೂಪಾಯಿ ಕೊಡಿಸುವುದಾಗಿ ಆತ ಆಮಿಷ ಒಡ್ಡಿದ್ದ. ಈ ಹಣದ ಆಸೆಗಾಗಿ ದಂಪತಿ ಒಪ್ಪಿಗೆ ನೀಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಮತ್ತು ಮಂಜುಳಾ ಎಂಬ ದಂಪತಿಗೆ ಮಗುವನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು.

ಖಚಿತ ಮಾಹಿತಿ ಲಭ್ಯವಾದ ತಕ್ಷಣ ಶ್ರೀನಿವಾಸಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಗುವನ್ನು ಹಸ್ತಾಂತರಿಸುವ ವೇಳೆ ದಾಳಿ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿ, ಸ್ಥಳದಲ್ಲಿದ್ದ ₹80,000 ನಗದನ್ನು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಗು ಮಾರಾಟ ಮಾಡಲು ಮುಂದಾದ ದಂಪತಿ, ಮಗು ಖರೀದಿಸಲು ಬಂದಿದ್ದ ದಂಪತಿ ಮತ್ತು ಮಧ್ಯವರ್ತಿ ನಾರಾಯಣಸ್ವಾಮಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಸದ್ಯ ರಕ್ಷಿಸಲಾದ ಹಸುಗೂಸನ್ನು ಸುರಕ್ಷಿತವಾಗಿ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಒಪ್ಪಿಸಲಾಗಿದೆ.

Exit mobile version