ನಿಮ್ಮ ಮನೆಗೂ ಅಂಟಿಸಿದ್ದಾರಾ ‘UHID ಸ್ಟಿಕ್ಕರ್’: ಏನಿದು ಸ್ಟಿಕ್ಕರ್? ಇಲ್ಲಿದೆ ಪೂರ್ಣ ಮಾಹಿತಿ

Untitled design 2025 09 06t081102.395

ಬೆಂಗಳೂರು: ಕರ್ನಾಟಕದ ಪ್ರತಿ ಮನೆಯ ಬಾಗಿಲಿನಲ್ಲಿ ಈಗ ‘UHID ಸ್ಟಿಕ್ಕರ್’ ಗಳು ಕಾಣಸಿಗುತ್ತಿವೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಭಾರೀ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹೆಜ್ಜೆಯಿದು. ಈ ಸ್ಟಿಕ್ಕರ್ ಏನು, ಏಕೆ ಅಂಟಿಸಲಾಗುತ್ತಿದೆ ಮತ್ತು ನಿಮ್ಮ ಪಾತ್ರ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು UHID ಸ್ಟಿಕ್ಕರ್?

UHID ಎಂದರೆ ಯೂನಿಕ್ ಹೌಸ್ಹೋಲ್ಡ್ ಐಡೆಂಟಿಫಿಕೇಶನ್ (ಅದ್ವಿತೀಯ ಗೃಹ ಖಾತೆ ಸಂಖ್ಯೆ). ರಾಜ್ಯದ ಪ್ರತಿ ಮನೆಗೂ ಒಂದು ಗುರುತಿಸುವಿಕೆಯ ಸಂಖ್ಯೆಯನ್ನು ನೀಡಲಾಗುತ್ತಿದೆ. ಈ ಸಂಖ್ಯೆಯನ್ನು ಹೊಂದಿರುವ ಸ್ಟಿಕ್ಕರ್ ಅನ್ನು ಆಯೋಗದ ಸಿಬ್ಬಂದಿಗಳು ಪ್ರತಿ ಮನೆಯ ಬಾಗಿಲಿಗೆ ಅಂಟಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಸಿಬ್ಬಂದಿಗಳು ರೆಸಿಡೆನ್ಶಿಯಲ್ ಆರ್‌ಆರ್ ನಂಬರ್ (ಮನೆಯ ವಿದ್ಯುತ್ ಮೀಟರ್ ಸಂಖ್ಯೆ) ಆಧಾರದ ಮೇಲೆ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಹೌಸ್‌ಹೋಲ್ಡ್ ಐಡಿಯನ್ನು ಜನರೇಟ್ ಮಾಡಿ, ಸ್ಟಿಕ್ಕರ್ ಅಂಟಿಸುತ್ತಾರೆ. ಈ ಸ್ಟಿಕ್ಕರ್ ಮೇಲೆ UHID ಸಂಖ್ಯೆ, ಕ್ಯೂಆರ್ ಕೋಡ್ ಮತ್ತು ಇತರ ಮಾಹಿತಿಗಳು ಇರುತ್ತವೆ, ಇದು ಸಮೀಕ್ಷೆಯ ಮುಂದಿನ ಹಂತಗಳಿಗೆ ಅಗತ್ಯವಾಗಿರುತ್ತದೆ.

ಈ ಸಮೀಕ್ಷೆಯ ಹಿನ್ನೆಲೆ

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಈ ಕಾರ್ಯಕ್ರಮವನ್ನು ಆರಂಭಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಹೌಸ್ ಲಿಸ್ಟಿಂಗ್ ಎಕ್ಸರ್‌ಸೈಸ್ ಮಾಡಲಾಗುತ್ತಿದೆ. ಅಂದರೆ ಪ್ರತಿ ಮನೆಯನ್ನು ಪಟ್ಟಿ ಮಾಡುವ ಕೆಲಸ. ಇದರ ನಂತರ, ಆಯೋಗದವರು ಎನ್ಯೂಮರೇಷನ್ ಬ್ಲಾಕ್‌ಗಳನ್ನು ತಯಾರಿಸುತ್ತಾರೆ. ಪ್ರತಿ ಬ್ಲಾಕ್‌ಗೆ ಒಬ್ಬ ಶಿಕ್ಷಕರನ್ನು ನೇಮಿಸಿ, ಅವರು ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ.

ಸಿಎಂ ಸಿದ್ದರಾಮಯ್ಯ ಅವರು ಹೇಳಿದಂತೆ, 22ನೇ ತಾರೀಖಿನಿಂದ ಈ ಸಮೀಕ್ಷೆ ಆರಂಭವಾಗಲಿದೆ. ಶಿಕ್ಷಕರು ಮನೆಯ ಸದಸ್ಯರೊಂದಿಗೆ ಮಾತನಾಡಿ, ಅವರ ಶೈಕ್ಷಣಿಕ ಮಟ್ಟ, ಆದಾಯ, ಉದ್ಯೋಗ, ಸಾಮಾಜಿಕ ಸ್ಥಿತಿ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ. “ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆ ಕಾರ್ಯದಲ್ಲಿ ಮನೆ ಪಟ್ಟಿ ಅಂದರೆ ಹೌಸ್ ಲಿಸ್ಟಿಂಗ್ ಎಕ್ಸರ್ಸೈಜ್ ಮಾಡಲಾಗುತ್ತಿದೆ. ಇದರ ಭಾಗವಾಗಿ ಇಂದು ಆಯೋಗದ ಸಿಬ್ಬಂದಿಗಳು ನನ್ನ ನಿವಾಸಕ್ಕೆ ಭೇಟಿ ನೀಡಿ, ಸ್ಟಿಕ್ಕರ್ ಅಂಟಿಸಿದರು. ಇದೇ ಮಾದರಿಯಲ್ಲಿ ರಾಜ್ಯದ ಪ್ರತಿ ಮನೆಗೆ ಸಿಬ್ಬಂದಿಗಳು ಭೇಟಿನೀಡಿ ಸ್ಟಿಕ್ಕರ್ ಅಂಟಿಸಿದ ಬಳಿಕ ಶಿಕ್ಷಕರು ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಈ ವೇಳೆ ಅವರಿಗೆ ಸೂಕ್ತ ಮಾಹಿತಿ ಒದಗಿಸಿ ಸಹಕರಿಸುವ ಮೂಲಕ ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಕೋರುತ್ತೇನೆ” ಎಂದು ಅವರು ಬರೆದಿದ್ದಾರೆ.

ಈ ಸಮೀಕ್ಷೆಯ ಮಹತ್ವವೇನು?

ಹಿಂದುಳಿದ ವರ್ಗಗಳ ಆಯೋಗವು ಈ ಡೇಟಾವನ್ನು ಬಳಸಿ, ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸರಿಯಾದ ಮೀಸಲಾತಿ, ಶಿಕ್ಷಣ ಸೌಲಭ್ಯಗಳು, ಉದ್ಯೋಗ ಅವಕಾಶಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ. ಉದಾಹರಣೆಗೆ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚಿನ ಶಾಲೆಗಳು ಅಥವಾ ಸ್ಕಾಲರ್‌ಶಿಪ್‌ಗಳನ್ನು ಒದಗಿಸಬಹುದು.

ಸಾಮಾಜಿಕವಾಗಿ, ಜಾತಿ ಆಧಾರಿತ ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಯಶಸ್ಸು ಸಾಧ್ಯವಾಗಬೇಕಾದರೆ, ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯ. ಸಿಬ್ಬಂದಿಗಳು ಬಂದಾಗ ಮಾಹಿತಿ ನೀಡಿ, ಸ್ಟಿಕ್ಕರ್ ಅಂಟಿಸಲು ಅನುಮತಿಸಿ ಮತ್ತು ಯಾವುದೇ ಕಾರಣಕ್ಕೂ ಸ್ಟಿಕ್ಕರ್ ತೆಗೆಯಬೇಡಿ. ಏಕೆಂದರೆ ಅದು ಸಮೀಕ್ಷೆಯನ್ನು ಅಡ್ಡಿಪಡಿಸಬಹುದು ಮತ್ತು ನಿಮ್ಮ ಮನೆಯನ್ನು ಪಟ್ಟಿಯಿಂದ ಹೊರಗಿಡಬಹುದು.

Exit mobile version