ನಕಲಿ ಸೇವಾನುಭವ ಪ್ರಮಾಣಪತ್ರ ನೀಡಿ ಸಾರಿಗೆ ಇಲಾಖೆಗೆ ಮೋಸ: ವಂಚಕ ಅಭ್ಯರ್ಥಿಗಳ ಬಂಧನಕ್ಕೆ ಶರವಣ ಆಗ್ರಹ..!

Untitled design 2025 12 10T140615.188

ಬೆಳಗಾವಿ: ವಿಧಾನ ಮಂಡಲದಲ್ಲಿ ಮೂರನೇ ದಿನವೂ ಚಳಿಗಾಲದ ಅಧಿವೇಶನ ಮುಂದುವರೆದಿದ್ದು, ಅಧಿವೇಶನದಲ್ಲಿ ಇಂದು ಶರವಣ ಸಾರಿಗೆ ಇಲಾಖೆಯ ವಿರುದ್ದ ನಕಲಿ ಸೇವಾನುಭವ ಪ್ರಮಾಣಪತ್ರ ನೀಡಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ವಾಹನ ತಪಾಸಣೆಯ ಇನ್ಸ್ಪೆಕ್ಟರ್‌ ಹುದ್ದೆಗೆ ಬಡ್ತಿ ಪಡೆಯಲು ಸುಮಾರು 50 ಗ್ರೂಪ್‌ ʼಸಿʼ ಲಿಪಿಕ ಸಿಬ್ಬಂದಿ ತಾಂತ್ರಿಕ ಶಿಕ್ಷಣದ ನಕಲಿ ಸೇವಾನುಭವ ಪ್ರಮಾಣಪತ್ರ ನೀಡಿ, ಸಂಜೆ ಪಾಲಿಟೆಕ್ನಿಕ್‌ ಕಾಲೇಜ್‌ನಲ್ಲಿ ಓದುತ್ತಿರುವ ಆರೋಪವಿದೆ ಈ ಸಂಬಂಧ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಶಾಸಕ ಟಿ.ಎ.ಶರವಣ ಒತ್ತಾಯಿಸಿದರು.

ಸಾರಿಗೆ ಅಕ್ರಮದ ಕುರಿತು ಶರವಣ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿ, ಸಾರಿಗೆ ಇಲಾಖೆಯ ಲಿಪಿಕ ಸಿಬ್ಬಂದಿ ಕಾನೂನು ಬಾಹಿರವಾಗಿ ನಕಲಿ ಸೇವಾನುಭವ ಪ್ರಮಾಣ ಪತ್ರ ಪಡೆದಿರುವುದು ಇನ್ನೂ ತನಿಖೆಯ ಹಂತದಲ್ಲಿದೆ. ಈ ಆರೋಪ ನಿಜವಾಗಿದ್ದರೆ ಶೀಘ್ರದಲ್ಲಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗರೆಡ್ಡಿ ಭರವಸೆ ನೀಡಿದ್ದಾರೆ.

ಶಾಸಕ ಶರವಣರ ಆರೋಪವೇನು..?

ಸಾರಿಗೆ ಇಲಾಖೆ ಭಡ್ತಿ ಹಿಂದೆ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಅನುಮಾನವಿದೆ. ಇಲಾಖೆಯ ನೇಮಕಾತಿ ಹಾಗೂ ಬಡ್ತಿ ನಿಯಮಾವಳಿಯೇ ದೋಷಪೂರಿತವಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲವೇ ಇದ್ದು, ಸರ್ಕಾರ ತಕ್ಷಣ ಎಸ್ಐಟಿ ರಚನೆ ಮಾಡಿ, ಶಿಕ್ಷಣ ಸಂಸ್ಥೆ ಮೇಲೆ ತನಿಖೆ ನಡೆಸಬೇಕು. ವ್ಯಾಸಂಗ ಮಾಡುತ್ತಿರುವ ಇಲಾಖಾ ಸಿಬ್ಬಂದಿಯ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಬೇಕು. ವಂಚನೆ ಮಾಡಿರುವ ಅಭ್ಯರ್ಥಿಗಳನ್ನು ಬಂಧಿಸಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಶರವಣ ಆಗ್ರಹಿಸಿದರು.

ಅಕ್ರಮ ತಿದ್ದುಪಡಿ..!

ಎಸ್ಎಸ್ಎಲ್‌ಸಿ ಉತ್ತೀರ್ಣರಾದರೆ ಸಾಕು, ಇನ್ಸ್‌ಪೆಕ್ಟರ್‌ ಆಫ್ ಮೋಟಾರ್ ವೆಹಿಕಲ್ ಹುದ್ದೆಯನ್ನು ಪಡೆಯಬಹುದು ಎಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯೇ ಅಕ್ರಮವಾಗಿದೆ. ಇಲಾಖೆಯಲ್ಲಿ ಇರುವ ಸಿಬ್ಬಂದಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎನ್ನುವ ನೆಪದಲ್ಲಿ ಶೇಕಡಾ 5ರಷ್ಟು ಮೀಸಲಾತಿ ನೀಡಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮೂಲತಃ ಈ ತಿದ್ದುಪಡಿಯೇ ದೋಷಪೂರಿತವಾಗಿದೆ. ಇಂಥ ಉನ್ನತ ಹುದ್ದೆಗಳಿಗೆ ಇಲಾಖಾವಾರು ಬಡ್ತಿ ನೀಡಬೇಕಾದರೆ ತಾಂತ್ರಿಕ ಶಿಕ್ಷಣದ ಅಗತ್ಯವಿದೆ. ಎಸ್ಎಸ್ಎಲ್‌ಸಿ ಪಾಸ್ ಮಾಡಿಕೊಂಡು ಇಲಾಖೆಯಲ್ಲಿ ಚಾಲಕ, ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ಆದವರು ಇನ್ಸ್‌ಪೆಕ್ಟರ್‌ ಆಫ್ ಮೋಟಾರ್ ವೆಹಿಕಲ್ ಹುದ್ದೆಗೇರಲು ಹೇಗೆ ಸಾಧ್ಯವಿದೆ ಎಂದು ಶರವಣ ಅವರು ಪ್ರಶ್ನಿಸಿದರು. ಹಾಗಾಗಿ ಸರ್ಕಾರದ ನೇಮಕಾತಿಯೇ ದೋಷಪೂರಿತವಾಗಿ ಆಗಿದೆ. ಇದರಿಂದ ಹಿಂದೆ ದೊಡ್ಡ ಜಾಲವೇ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ

ಎಸ್‌ಎಸ್‌ಎಲ್‌ಸಿ ಓದಿದ ಮೇಲೆ ನೋಂದಾಯಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷ ಓದಿನ ಜೊತೆಗೆ ಕಾರ್ಯ ನಿರ್ವಹಣೆ ಮಾಡಿ ಅನುಭವ ಪಡೆದಿರಬೇಕು. ನಂತರ ಡಿಪ್ಲೊಮಾ ತಾಂತ್ರಿಕ ಶಿಕ್ಷಣಕ್ಕೆ ಅರ್ಹತೆ ಪಡೆಯುತ್ತಾರೆ. ಆ ನಂತರ ಇನ್ಸ್‌ಪೆಕ್ಟರ್‌ ಆಫ್ ಮೋಟಾರ್ ವೆಹಿಕಲ್ ಹುದ್ದೆಗೆ ಅವರು ಆಯ್ಕೆಯಾಗಲು ಅರ್ಹತೆ ಹೊಂದುತ್ತಾರೆ. ರಾತ್ರಿ ಡಿಪ್ಲೊಮಾ‌ ಕಾಲೇಜಿನಲ್ಲಿ ಓದಲು ಕಚೇರಿಯಿಂದ ಕಾಲೇಜ್ 30 ಕಿಮೀ ವ್ಯಾಪ್ತಿಯ ಒಳಗಿರಬೇಕು ಎಂದಿದೆ.  ಆದರೆ, ಬೆಂಗಳೂರು ಮಲ್ಲೇಶ್ವರಂ ಕಾಲೇಜಿನಲ್ಲಿ ತುಮಕೂರು, ಕಲಬುರಗಿ ಭಾಗದವರೂ ಓದಿದ್ದೇವೆ ಎಂದು ಪ್ರಮಾಣಪತ್ರ ನೀಡಿದ್ದಾರೆ. ಸಾಯಂಕಾಲ 5 ಗಂಟೆಯವರೆಗೆ ಕೆಲಸ ಮಾಡಿ,  ನೂರಾರು ಕಿಮೀ ದೂರದ ಕಾಲೇಜ್‌ಗೆ ಹೇಗೆ ಬರಲು ಸಾಧ್ಯ ಎಂದು ಶರವಣ ಅವರು ಪ್ರಶ್ನಿಸಿದರು.

ಎರಡು ವರ್ಷದ ತಾಂತ್ರಿಕ ಶಿಕ್ಷಣ ಪಡೆದರೆ ಮಾತ್ರ ಸಂಜೆ ಕಾಲೇಜ್‌ನಲ್ಲಿ ಡಿಪ್ಲೊಮಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅರ್ಹತೆ ಇರುತ್ತದೆ. ಆದರೆ, ಈ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ತಾಂತ್ರಿಕ ಶಿಕ್ಷಣ, ಅನುಭವ ಇಲ್ಲದ ಕ್ಲಾರಿಕಲ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರು ಕೂಡ ನಕಲಿ ತಾಂತ್ರಿಕ ಶಿಕ್ಷಣದ ಅನುಭವದ ಪ್ರಮಾಣಪತ್ರ ನೀಡಿ, ಇನ್ಸ್ಪೆಕ್ಟರ್ ಆಫ್ ಮೋಟಾರ್ ವೆಹಿಕಲ್ ಆಗಬೇಕು ಅನ್ನುವ ಕಾರಣಕ್ಕೆ ಜೆಪಿ ನಗರದ ಆಕ್ಸ್‌ಫರ್ಡ್‌ ಸಂಜೆ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಪ್ರವೇಶ ಪಡೆದಿದ್ದಾರೆ. 42 ಜನ ಅಲ್ಲಿಯದ್ದೇ ಪ್ರಮಾಣಪತ್ರ ನೀಡಿದ್ದಾರೆ. ಇದೊಂದು ಕಾನೂನು ಬಾಹಿರ ಅಪರಾಧವಾಗಿದೆ ಮತ್ತುಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇಲಾಖೆಗೆ ಮಾಡುವ ವಂಚನೆಯಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಶರವಣ ಒತ್ತಾಯಿಸಿದರು.

ಅರೆಕಾಲಿಕ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿಗೆ 2  ವರ್ಷಗಳ ತಾಂತ್ರಿಕ ಸೇವಾನುಭವದೊಂದಿಗೆ ಸಂಬಂಧಪಟ್ಟ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.  ದೂರಿನಲ್ಲಿ ನಮೂದಿಸಿದ 49 ಅಭ್ಯರ್ಥಿಗಳ ಪ್ರವೇಶದ ಸಂಪೂರ್ಣ ತನಿಖಾ ವರದಿಯನ್ನು ಲಗತ್ತಿಸಿ, 2 ವರ್ಷಗಳ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ವರದಿ ನೀಡಿದ್ದಾರೆ. ಆದರೆ, ಸಾರಿಗೆ ಇಲಾಖೆಯಿಂದ ತಾಂತ್ರಿಕ ಸೇವಾನುಭವದ ನೈಜತೆಯನ್ನು ಪರಿಶೀಲಿಸಲು ಅವಕಾಶ ಇಲ್ಲದಿರುವುದರಿಂದ ತಾಂತ್ರಿಕ ಶಿಕ್ಷಣ ಇಲಾಖೆಯಿಂದಲೇ ಪರಿಶೀಲನೆ ನಡೆಸಿ ಕೊಡಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರು ಮರು ಪತ್ರ ಬರೆದಿದ್ದಾರೆ.

Exit mobile version