ಶಕ್ತಿ ಯೋಜನೆ ಬಾಕಿ ಹಣದಿಂದ ಸಾರಿಗೆ ನಿಗಮಗಳು ಸಂಕಷ್ಟ: ಕೋರ್ಟ್ ಹೇಳಿದ್ದೇನು?

BeFunky collage 2026 02 18T174007.036

ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು (KSRTC, BMTC, NWKRTC, KKRTC) ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಕೊವಿಡ್ ಸಂಕಷ್ಟದ ನಂತರದ ನಷ್ಟಗಳ ಮೇಲೆ ಶಕ್ತಿ ಯೋಜನೆಯು ಹೆಚ್ಚಿನ ಹೊರೆಯನ್ನು ತಂದೊಡ್ಡಿದೆ ಎಂಬುದು ಕರ್ನಾಟಕ ಹೈಕೋರ್ಟ್‌ನಲ್ಲಿ ಬಹಿರಂಗವಾಗಿದೆ. ಸಾರಿಗೆ ನೌಕರರಿಗೆ ವೇತನ ನೀಡುವುದೇ ಕಷ್ಟವಾಗಿರುವ ಪರಿಸ್ಥಿತಿ ಇದೆ ಎಂದು ನಿಗಮಗಳ ಪರ ವಕೀಲರು ಕೋರ್ಟ್‌ಗೆ ಒಪ್ಪಿಕೊಂಡಿದ್ದಾರೆ.

ದಾವಣಗೆರೆಯ ತಾಹಿರ್ ಹುಸೇನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆಯಲ್ಲಿ ಈ ವಿಷಯಗಳು ಬಹಿರಂಗವಾಗಿವೆ. ಕೊವಿಡ್-19 ಎರಡು ಅಲೆಗಳ ಸಂದರ್ಭದಲ್ಲಿ ಸಾರಿಗೆ ನೌಕರರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದರು. ಆ ವೇಳೆ 323 ಉದ್ಯೋಗಿಗಳು ಕೊರೊನಾ ಬಾಧಿತರಾಗಿ ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇವಲ 7 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದ್ದು, ಉಳಿದವರಿಗೆ ಇನ್ನೂ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ನಿಗಮಗಳ ಪರ ವಕೀಲರು ವಾದ ಮಂಡಿಸುತ್ತಾ, ಸಾರಿಗೆ ನಿಗಮಗಳು ಭಾರೀ ನಷ್ಟದಲ್ಲಿ ನಡೆಯುತ್ತಿವೆ ಎಂದು ಹೇಳಿದರು. ಸಿಬ್ಬಂದಿಗೆ ವೇತನ ನೀಡುವುದೇ ಸವಾಲಾಗಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಶಕ್ತಿ ಯೋಜನೆಯಿಂದಾಗಿ ಸರ್ಕಾರದಿಂದ ಬಾಕಿ ಉಳಿದಿರುವ ಹಣದ ಬಗ್ಗೆ ಕೋರ್ಟ್ ಪ್ರಶ್ನಿಸಿದ್ದು, ಸರ್ಕಾರ ಶಕ್ತಿ ಯೋಜನೆಯಡಿ ಎಷ್ಟು ಹಣ ಬಾಕಿ ಇರಿಸಿಕೊಂಡಿದೆ ಮತ್ತು ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರಗಳನ್ನು ಮಾರ್ಚ್ 23ರೊಳಗೆ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಮುಂದೂಡಲಾಗಿದೆ.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರಕುತ್ತಿದ್ದರೂ, ನಿಗಮಗಳ ಆರ್ಥಿಕ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂಬುದು ಈ ವಿಚಾರಣೆಯಿಂದ ಸ್ಪಷ್ಟವಾಗಿದೆ. ಕೊವಿಡ್ ಸಂದರ್ಭದಲ್ಲಿ ಪ್ರಾಣಾರ್ಪಣೆ ಮಾಡಿದ ನೌಕರರ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂಬ ಒತ್ತಡ ಹೆಚ್ಚಾಗಿದೆ.

Exit mobile version