ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಲೋಕಸಭಾಧ್ಯಕ್ಷರಾದ ಓಂ.ಬಿರ್ಲಾ ಅವರನ್ನು ಇಂದು ನವ ದೆಹಲಿಯಲ್ಲಿ ಭೇಟಿ ಮಾಡಿ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನವನ್ನು 2025ರ ಸೆಪ್ಟೆಂಬರ್ 9 ಮತ್ತು 10ರಂದು ನಡೆಸಲು ಕರ್ನಾಟಕವನ್ನು ಆಯ್ಕೆ ಮಾಡಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಗಳು ಭಾಗವಹಿಸುವುದಲ್ಲದೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕಾಮನ್ ವೆಲ್ತ್ ದೇಶಗಳ ಪೀಠಾಸೀನಾಧಿಕಾರಿಗಳನ್ನು ಆಹ್ವಾನಿಸುವ ಕುರಿತು ಮತ್ತು ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಹ ಸಮಾಲೋಚನೆ ನಡೆಸಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 8, 2025 ರಂದು ವಿಧಾನಸೌಧದ ಬೃಹತ್ ಮೆಟ್ಟಲುಗಳ ಮೇಲೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ಅನೇಕ ಪ್ರಗತಿ ಪರ ಬದಲಾವಣೆಗಳನ್ನು ಸಹ ಲೋಸಭಾಧ್ಯಕ್ಷರ ಗಮನಕ್ಕೆ ತಂದರು.
ಬೆಂಗಳೂರು, ಅಂತರಾಷ್ಟ್ರೀಯವಾಗಿ ಸಿಲಿಕಾನ್ ಸಿಟಿಯಾಗಿರುವುದರಿಂದ ಇಂತಹ ಸಮ್ಮೇಳನಗಳನ್ನು ನಡೆಸುತ್ತಿರುವುದು ಅತ್ಯಂತ ಸೂಕ್ತ ಎಂದು ಲೋಕಸಭಾಧ್ಯಕ್ಷರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಲೋಕಸಭಾ ಸಚಿವಾಲಯದ ಅಧಿಕಾರಿಗಳು ಹಾಜರಿದ್ದರು.