ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ “ಸ್ಮಾರ್ಟ್ ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿದೆ. KTTP ಕಾಯ್ದೆಯನ್ನು ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದೆ, ಕೂಡಲೇ ಸಚಿವ ಕೆ.ಎ ಜಾರ್ಜ್ ರಾಜೀನಾಮೆ ನೀಡಬೇಕೆಂದು ಬೆಂಗಳೂರು ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದರು.
ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್ನಲ್ಲಿ ಬೃಹತ್ ಹಗರಣ ಹಾಗೂ ಸಚಿವ ಕೆ.ಎ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದ ಬೆಂಗಳೂರು ಜೆಡಿಎಸ್ ಕಾರ್ಯಕರ್ತರು ಇಂಧನ ಸಚಿವ ಕೆ. ಜೆ ಜಾರ್ಜ್ ಮನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ, ರೇಸ್ ಕೋರ್ಸ್ ರಸ್ತೆಯ ಸಚಿವ ಜಾರ್ಜ್ ಸರ್ಕಾರಿ ನಿವಾಸದ ಬಳಿ ಪೊಲೀಸ್ ಭದ್ರತೆ ಕಲ್ಪಿಸಿದ್ದು, ಈ ವೇಳೆ ಮುತ್ತಿಗೆಗೆ ಮುಂದಾಗಿದ್ದ ಜೆಡಿಎಸ್ ಕಾರ್ಯಕರ್ತರು, ಮುಖಂಡರನ್ನ ರಸ್ತೆ ಮಧ್ಯದಲ್ಲೇ ಪೊಲೀಸರು ತಡೆದು, ಪ್ರತಿಭಟನಕಾರರನ್ನ ವಶಕ್ಕೆ ಪಡೆದರು.
ಗ್ಯಾರಂಟಿ ನೀಡಿ ಹಗಲು ದರೋಡೆ
ಈ ವೇಳೆ ಜೆಡಿಎಸ್ ನಗರ ಘಟಕ ಮುಖಂಡರಾದ ಪ್ರವೀಣ್ ಅವರು ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿ ದರೋಡೆಗೆ ಇಳಿದಿದೆ. ಸ್ಮಾರ್ಟ್ ಮೀಟರ್ ವಿಚಾರವಾಗಿ ಜನರ ತೆರಿಗೆ ದುಡ್ಡನ್ನು ಲೂಟಿ ಹೊಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದರ ತನಿಖೆ ಆಗಿ ಸತ್ಯಾಂಶ ಹೊರಬರ್ಬೇಕು. ಪ್ರತಿಭಟನೆ ಮಾಡ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ ಇದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಸ್ಮಾರ್ಟ್ ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹಣವನ್ನ ತಿಂದು ಹಾಕುವ ಕೆಲಸ ಮಾಡುತ್ತಿದ್ದಾರೆ. 15 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಬಸವನಗುಡಿ ಅಧ್ಯಕ್ಷರಾದ ತಿಮ್ಮೆಗೌಡ, ದಾಸರಹಳ್ಳಿ ವಿಧಾನಸಭಾ ಅಧ್ಯಕ್ಷರು ಮುನಿಸ್ವಾಮಿ, ಭಾರತ್ ಗುಂಡಪ್ಪ, ಪ್ರವೀಣ್ ಅವರು ಸೇರಿದಂತೆ ಬೆಂಗಳೂರು ಘಟಕ ವತಿಯಿಂದ ಅನೇಕ ಮುಖಂಡರು ಭಾಗಿಯಾಗಿದ್ದರು.