ರಾಜ್ಯದಲ್ಲಿ ಹೊಸ ಬಾಡಿಗೆ ಕಾಯ್ದೆ ಜಾರಿ: ಬ್ರೋಕರ್‌ಗಳಿಗೆ ಬಿಗ್‌ ಶಾಕ್‌..!

ಪ್ರಶಾಂತ್ ವೀರ್ (3)

ಬೆಳಗಾವಿ: ರಾಜ್ಯದ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ದಶಕಗಳ ಕಾಲದ ಸಂಬಂಧ ಹಾಗೂ ಕಾನೂನು ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ 2025’ಕ್ಕೆ ಮಂಗಳವಾರ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದ ಈ ವಿಧೇಯಕವು, ಬಾಡಿಗೆಯಲ್ಲಿ ಪಾರದರ್ಶಕತೆ ತರಲು ಮತ್ತು ನ್ಯಾಯಾಲಯದ ಮೇಲಿನ ಹೊರೆ ತಗ್ಗಿಸಲು ಸಹಕಾರಿಯಾಗಲಿದೆ.

ಹೊಸ ತಿದ್ದುಪಡಿಯ ಅನ್ವಯ, ಬಾಡಿಗೆ ಕಾಯ್ದೆಯ ಸಣ್ಣಪುಟ್ಟ ಉಲ್ಲಂಘನೆಗಳಿಗೆ ನೀಡಲಾಗುತ್ತಿದ್ದ ಜೈಲು ಶಿಕ್ಷೆಯನ್ನು ಕೈಬಿಡಲಾಗಿದೆ. ಸಣ್ಣಪುಟ್ಟ ತಪ್ಪುಗಳಿಗೆ ಜೈಲಿಗೆ ಕಳುಹಿಸುವುದು ಸರಿಯಲ್ಲ ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರದ ಮಾದರಿ ಕರಡಿನಂತೆ ನಾವು ಈ ಬದಲಾವಣೆ ಮಾಡಿದ್ದೇವೆ. ಆದರೆ, ಜೈಲು ಶಿಕ್ಷೆ ತಪ್ಪಿದೆ ಎಂದು ನಿಯಮ ಉಲ್ಲಂಘಿಸುವಂತಿಲ್ಲ, ಏಕೆಂದರೆ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಬದಲಾವಣೆಗಳು ಮತ್ತು ಹೊಸ ನಿಯಮಗಳು:

ಆನ್‌ಲೈನ್ ನೋಂದಣಿ ಕಡ್ಡಾಯ: ಇನ್ನು ಮುಂದೆ ಪ್ರತಿಯೊಂದು ಬಾಡಿಗೆ ಒಪ್ಪಂದವನ್ನು ಸರ್ಕಾರ ರೂಪಿಸುವ ವಿಶೇಷ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸುವುದು ಕಡ್ಡಾಯ. ಇದರಿಂದ ಬಾಡಿಗೆ ವ್ಯಾಜ್ಯಗಳು ನಡೆದಾಗ ದಾಖಲೆಗಳ ಕೊರತೆ ಇರುವುದಿಲ್ಲ.

ಸಬ್-ಲೆಟಿಂಗ್‌ಗೆ (ಮರು ಬಾಡಿಗೆ) ಭಾರೀ ದಂಡ: ಮಾಲೀಕರ ಅನುಮತಿ ಪಡೆಯದೆ ಬಾಡಿಗೆದಾರರು ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದರೆ (Sub-letting), ಈ ಹಿಂದೆ ಇದ್ದ 5,000 ರೂ. ದಂಡವನ್ನು ಈಗ 50,000 ರೂ.ಗಳಿಗೆ ಏರಿಸಲಾಗಿದೆ.

ಬ್ರೋಕರ್‌ಗಳಿಗೆ ಕಡಿವಾಣ: ಅನುಮತಿ ಪಡೆಯದೆ ಅಥವಾ ನೋಂದಾಯಿಸಿಕೊಳ್ಳದೆ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬಾಡಿಗೆ ಏಜೆಂಟರು ಅಥವಾ ಬ್ರೋಕರ್‌ಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ನೋಂದಣಿ ಮಾಡಿಸದ ಬೋಕರ್‌ಗಳಿಗೆ ಪ್ರತಿ ದಿನಕ್ಕೆ 25,000 ರೂಪಾಯಿ ದಂಡ ವಿಧಿಸುವ ಕಠಿಣ ನಿಯಮ ಜಾರಿಗೆ ತರಲಾಗಿದೆ.

ನೋಟಿಸ್ ಅವಧಿ: ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕಬೇಕಾದರೆ ಅಥವಾ ಖಾಲಿ ಮಾಡಿಸಬೇಕಾದರೆ ಕನಿಷ್ಠ 3 ತಿಂಗಳು ಮುಂಚಿತವಾಗಿ ನೋಟಿಸ್ ನೀಡುವುದು ಕಡ್ಡಾಯವಾಗಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ವ್ಯಾಜ್ಯಗಳು ವರ್ಷಗಟ್ಟಲೆ ನ್ಯಾಯಾಲಯಗಳಲ್ಲಿ ಬಾಕಿ ಉಳಿಯುತ್ತಿವೆ. ಇದನ್ನು ತಪ್ಪಿಸಲು ಹೊಸ ಕಾಯ್ದೆಯಡಿ ‘ಫಾಸ್ಟ್ ಟ್ರ್ಯಾಕ್’ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳು ನಿಗದಿತ ಸಮಯದಲ್ಲಿ ಇತ್ಯರ್ಥಗೊಳ್ಳಲಿವೆ.

ಈ ಕಾನೂನು ಕೇವಲ ಮಾಲೀಕರಿಗೆ ಮಾತ್ರವಲ್ಲ, ಶೋಷಣೆಗೆ ಒಳಗಾಗುವ ಸಣ್ಣ ಬಾಡಿಗೆದಾರರಿಗೂ ರಕ್ಷಣೆ ನೀಡಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪುವುದರಿಂದ ಮತ್ತು ಸರ್ಕಾರಿ ಪೋರ್ಟಲ್‌ನಲ್ಲಿ ಅಧಿಕೃತ ದಾಖಲೆಗಳು ಇರುವುದರಿಂದ ಬಾಡಿಗೆದಾರರು ಹೆಚ್ಚುವರಿ ಮುಂಗಡ (Advance) ಅಥವಾ ಕಿರುಕುಳದ ವಿರುದ್ಧ ಕಾನೂನು ಹೋರಾಟ ಮಾಡುವುದು ಸುಲಭವಾಗಲಿದೆ.ಒಟ್ಟಾರೆಯಾಗಿ, ಕರ್ನಾಟಕದ ರಿಯಲ್ ಎಸ್ಟೇಟ್ ಮತ್ತು ಬಾಡಿಗೆ ಮಾರುಕಟ್ಟೆಯಲ್ಲಿ ಈ ಹೊಸ ತಿದ್ದುಪಡಿಯು ದೊಡ್ಡ ಮಟ್ಟದ ಬದಲಾವಣೆಗೆ ನಾಂದಿ ಹಾಡಲಿದೆ.

Exit mobile version