ಖಾಲಿ ನೀರಿನ ಬಾಟಲ್ ಎಸೆಯಬೇಡಿ.. ವಾಪಸ್ ಕೊಟ್ಟು ಹಣ ಪಡೆಯಿರಿ : ಸಚಿವ ಈಶ್ವರ್ ಖಂಡ್ರೆ ಆದೇಶ

1112

ಜನ ಇತ್ತೀಚೆಗೆ ಸಾಮಾನ್ಯವಾಗಿ ನೀರಿನ ಬಾಟಲ್ ಖರೀದಿ ಮಾಡಿ, ನೀರು ಕುಡಿದು ಎಲ್ಲೆಂದರೆ ಅಲ್ಲಿ ಎಸೆದು ಹೋಗೋ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಹಾಗೆ ಎಸೆಯುವ ಖಾಲಿ ವಾಟರ್ ಬಾಟಲ್ಸ್ ಸೃಷ್ಟಿಸೋ ಸಮಸ್ಯೆ ಒಂದೆರಡಲ್ಲ.

ಮೊದಲೇ ಪ್ಲಾಸ್ಟಿಕ್, ಕೊಳೆಯೋ ವಸ್ತು ಅಲ್ಲ. ಮಣ್ಣಲ್ಲಿ ಕರಗೋದೂ ಇಲ್ಲ. ಸುಡೋಕೆ ಹೋದ್ರೆ, ಅದರಿಂದ ಸೃಷ್ಟಿಯಾಗೋ ವಿಷ ಗಾಳಿ ಜನರಿಗೆ ಮಾಡೋ ಪ್ರಾಬ್ಲಮ್ಸ್ ಕೂಡಾ ಒಂದೆರಡಲ್ಲ. ಇನ್ನು ಎಸೆದಿರೋ ಖಾಲಿ ಬಾಟಲಿಗಳಲ್ಲಿ ನಿಲ್ಲೋ ಸ್ವಲ್ಪ ಸ್ವಲ್ಪ ಪ್ರಮಾಣದ ನೀರು.. ಸೊಳ್ಳೆ, ಕ್ರಿಮಿ ಕೀಟಗಳು ಬೆಳೆಯೋಕೆ ಒಳ್ಳೇ ಜಾಗ ಆಗುತ್ತೆ. ಇನ್ನು ಹುಲ್ಲು ಬೆಳೆಯೋ ಜಾಗದಲ್ಲಿ ಬಿಸಾಡೊ ಖಾಲಿ ಬಾಟಲ್ಲು, ಪ್ಲಾಸ್ಟಿಕ್ ತಿಂದ ದನ, ಎಮ್ಮೆ, ಮೇಕೆ, ಕುರಿಗಳಿಗೆ ಪ್ರಾಣಯಾತನೆ.

ADVERTISEMENT
ADVERTISEMENT

ಇದು ಎಲ್ಲಿ ಅಂದ್ರೆ ಅಲ್ಲಿ ಎಸೆಯೋವ್ರಿಗೆ ಗೊತ್ತಿಲ್ಲ ಅಂತೇನಲ್ಲ. ಆದರೂ ಎಸೆದು ಹೋಗ್ತಾರೆ. ಇದರ ಬಗ್ಗೆ ಒಂದಷ್ಟು ಜನರಿಗೆ ಜಾಗೃತಿ ಮೂಡಿದ್ರೂ, ಶೇ.100ರಷ್ಟು ಪರಿಹಾರ ಸಿಕ್ಕಿಲ್ಲ. ಹೀಗಾಗಿಯೇ.. ರಾಜ್ಯ ಸರ್ಕಾರ ಒಂದು ಆದೇಶ ಹೊರ ತಂದಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.
ಕುಡಿದ ನೀರಿನ ಬಾಟಲ್‌ಗಳನ್ನು ಗ್ರಾಹಕರು ವಾಪಸ್ ಮಾಡಿದರೆ, ಮಾರಾಟಗಾರರೇ ಖಾಲಿ ಬಾಟಲ್ ಖರೀದಿ ಮಾಡಬೇಕು. ಮಾಲೀಕರಿಗೆ ಖಾಲಿ ಬಾಟಲ್ ಖರೀದಿ ಕಡ್ಡಾಯ ಎಂದು ಆದೇಶ ನೀಡಲಾಗಿದೆ.

ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎನ್ನುವುದು ಖಂಡ್ರೆಯವರ ವಾದ.

ಈಗಾಗಲೇ ಆದೇಶವೊಂದನ್ನು ಹೊರಡಿಸಿರುವ ಅರಣ್ಯ ಇಲಾಖೆ, ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಅಂದಹಾಗೆ ಖಾಲಿ ಬಾಟಲ್ಲುಗಳನ್ನು ಮಾಲೀಕರು ಖರೀದಿ ಮಾಡಬೇಕು. ಆ ಮಾಲೀಕರಿಂದ ನೀರು ಸಪ್ಲೈ ಮಾಡುವ ಕಂಪೆನಿಗಳೇ ಖರೀದಿ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

Exit mobile version