ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣ ಫೆಬ್ರವರಿ, ಮಾರ್ಚ್‌ ತಿಂಗಳ ಹಣ: ಲಕ್ಷ್ಮೀ ಹೆಬ್ಬಾಳ್ಕರ್

Untitled design 2026 01 08T212633.961

ಬೆಂಗಳೂರು: ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.

ಅನರ್ಹ ರೇಷನ್‌ ಕಾರ್ಡ್ ರದ್ದಾಗಿರುವ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಅವರಿಗೂ ದುಡ್ಡು ರಿಲೀಸ್ ಆಗಲಿದೆ. ರೇಷನ್ ಕಾರ್ಡ್ ಆಧರಿಸಿ ನಾವು ಗೃಹಲಕ್ಷ್ಮಿ ‌ಫಲಾನುಭವಿಗಳಿಗೆ ದುಡ್ಡು ಹಾಕುತ್ತಿದ್ದೇವೆ. ಕೆಲ ರೇಷನ್ ಕಾರ್ಡ್ ರದ್ದಾದಾಗ ದುಡ್ಡು ಹೋಲ್ಡ್ ಆಗಿರಬಹುದು. ಆದರೆ ಅವರು ತೆರಿಗೆ ಪಾವತಿದಾರರಲ್ಲದಿದ್ದಲ್ಲಿ ಹಣ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಗೃಹಲಕ್ಷ್ಮೀ ಸಹಕಾರ ಸಂಘಕ್ಕೆ ಸದಸ್ಯರಾದವರು ಪ್ರತಿ ತಿಂಗಳು 200 ರೂಪಾಯಿ ಹಣ ಕಟ್ಟಿಕೊಂಡು ಹೋಗಬೇಕು, 6 ತಿಂಗಳು ಆದ ಬಳಿಕ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದು, ಹೆಚ್ಚು ಕಂಡೀಷನ್‌ಗಳನ್ನು ಹಾಕದೇ ಅರ್ಹರನ್ನು ಗುರುತಿಸಿ ಸಾಲ ನೀಡಲಾಗುವುದು. ಜೊತೆಗೆ ಆರೋಗ್ಯ ವಿಮೆಯನ್ನು ನೀಡುವ ಯೋಚನೆ ಇದೆ ಎಂದು ಸಚಿವರು ಹೇಳಿದರು.

ನಮ್ಮ ಇಲಾಖೆ ಹಾಗೂ ಗೃಹ ಇಲಾಖೆ ಸಹಯೋಗದಲ್ಲಿ ಅಕ್ಕ ಪಡೆ ಆರಂಭಿಸಲಾಗಿದೆ. ಬಹಳಷ್ಟು ಮಹಾತ್ವಾಕಾಂಕ್ಷಿ ಇಟ್ಟುಕೊಂಡು ಅಕ್ಕಪಡೆ ಆರಂಭಿಸಲಾಗಿದೆ. ಈಗಾಗಲೇ ಸಿಬ್ಬಂದಿ ನೇಮಿಸಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಬಸ್‌ ಸ್ಟಾಪ್‌, ದೇವಸ್ಥಾನ, ಮಾಲ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಸಚಿವರು ಹೇಳಿದರು.

ಅಕ್ಕಪಡೆ ಸ್ಕೂಲ್‌, ಕಾಲೇಜುಗಳಿಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದು, ದೂರು ಕೊಡಲು ಅಂಜುವ ಹೆಣ್ಣುಮಕ್ಕಳ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅಕ್ಕಪಡೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಗೊಳಗಾದ ಮಹಿಳೆಯರು, ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಹೆಣ್ಣುಮಕ್ಕಳು ಸಹ ದೂರು ನೀಡಬಹುದು ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಯಾರೇ ತಪ್ಪು ಮಾಡಿರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದೇ ನನ್ನ ಕೋರಿಕೆ ಎಂದರು.

Exit mobile version