ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ದ್ವೇಷ ಭಾಷಣ (Hate Speech) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು, ಅಶಾಂತಿ ಮತ್ತು ಭಯದ ವಾತಾವರಣವನ್ನು ತಡೆಯಲು ಕಠಿಣ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ, ದ್ವೇಷ ಭಾಷಣ ಮಾಡಿದವರಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿರುವ ಮಹತ್ವದ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಸಚಿವ ಹೆಚ್.ಕೆ. ಪಾಟೀಲ್ ಅವರು ವಿಧಾನಸಭೆಯಲ್ಲಿ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಈ ಮಸೂದೆಯನ್ನು ಮಂಡಿಸಿದರು. ಸಮಾಜದಲ್ಲಿ ಕೋಮು ಮತ್ತು ದ್ವೇಷದ ಭಾಷಣದಿಂದಾಗಿ ಅಶಾಂತಿ ಮತ್ತು ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಇದನ್ನು ತಡೆಯಲು ಇಂತಹ ಕಠಿಣ ಕ್ರಮಗಳನ್ನು ಒಳಗೊಂಡ ಕಾನೂನು ಅಗತ್ಯ ಎಂದು ಸರ್ಕಾರ ವಾದಿಸಿದೆ.
ಈ ಹೊಸ ಮಸೂದೆಯು ಸಮಾಜದಲ್ಲಿನ ವಿವಿಧ ವರ್ಗಗಳ ವಿರುದ್ಧ ದ್ವೇಷ ಮತ್ತು ಹಾನಿಯನ್ನು ಉತ್ತೇಜಿಸುವವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ. ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ಹಾನಿ ಅಥವಾ ದ್ವೇಷವನ್ನು ಉತ್ತೇಜಿಸುವ ಭಾಷಣವನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ.
ಧಾರ್ಮಿಕ ಸಮುದಾಯಗಳು, ಜನಾಂಗೀಯ ಸಮುದಾಯಗಳು, ಜಾತಿ ಅಥವಾ ಸಮುದಾಯದ ಗುಂಪುಗಳು, ಲಿಂಗ, ಲೈಂಗಿಕ ದೃಷ್ಟಿಕೋನ (Gender, Sexual Orientation), ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಸೇರಿದಂತೆ ಯಾವುದೇ ವ್ಯಕ್ತಿಯ ವಿರುದ್ಧ ದ್ವೇಷ ಭಾಷಣ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ದ್ವೇಷ ಭಾಷಣದ ಮೂಲಕ ದ್ವೇಷ ಅಥವಾ ಹಾನಿಯನ್ನು ಉತ್ತೇಜಿಸುವ ವ್ಯಕ್ತಿ ಅಥವಾ ಗುಂಪಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆಯ ಜೊತೆಗೆ 5 ಸಾವಿರ ದಂದ ವಿಧಿಸಲು ಅವಕಾಶವಿದೆ ಎಂದು ವಿಧಾನ ಮಂಡಲದಲ್ಲಿ ಇಂದು ಮಂಡಿಸಲಾಗಿದೆ.
ರಾಜ್ಯದಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಮತ್ತಿತರರನ್ನು ಗುರಿಯಾಗಿಟ್ಟುಕೊಂಡು ಕೆಲವು ನಿರ್ದಿಷ್ಟ ಬಣದವರು ಹಲ್ಲೆ ಮಾಡುವುದು, ಜನಾಂಗೀಯ ನಿಂದನೆ ಮತ್ತು ದ್ವೇಷ ಭಾಷಣ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟಬೇಕೆಂಬ ಬೇಡಿಕೆ ಬಹಳ ದಿನಗಳಿಂದಲೂ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದ್ವೇಷ ಭಾಷಣದ ವಿರುದ್ಧ ಕಾಯಿದೆ ಜಾರಿಗೆ ತರಲು ನಿರ್ಧರಿಸಿತ್ತು. ಕಳೆದ ಜೂನ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ವಿಧೇಯಕಕ್ಕೆ ಪ್ರಾಥಮಿಕ ಪ್ರಸ್ತಾಪವನ್ನು ನೀಡಲಾಗಿತ್ತು. ಆ ಪೂರ್ವಭಾವಿ ಅನುಮೋದನೆಯ ಬಳಿಕ ಇದೀಗ ಈ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಕಾಯಿದೆಯು ಯಾವುದೇ ನಿರ್ದಿಷ್ಟ ಭಾಷೆ, ಧರ್ಮ, ಜಾತಿ, ಊರು, ಅಥವಾ ನ್ಯೂನತೆಯನ್ನು ಆಧಾರವಾಗಿ ಇಟ್ಟುಕೊಂಡು ದ್ವೇಷ ಭಾಷಣ ಮಾಡುವುದನ್ನು ನಿರ್ಬಂಧಿಸುತ್ತದೆ. ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಇತರರನ್ನು ಟೀಕೆ ಮಾಡುವ ಅಥವಾ ದ್ವೇಷವನ್ನು ಪ್ರಚೋದಿಸುವಂತಹ ಮಾತುಗಳಿಗೆ ಈ ಕಾಯಿದೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತದೆ. ಕಾಯಿದೆ ಜಾರಿಯಾದ ಬಳಿಕ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
