ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆ ನಿರ್ವಹಣೆಯಲ್ಲಿರುವ ಆಂಬುಲೆನ್ಸ್ಗಳ ತಾಂತ್ರಿಕ ಸ್ಥಿತಿ ಮತ್ತೊಮ್ಮೆ ಪ್ರಶ್ನೆ ಎದುರಿಸುತ್ತಿದೆ. “ಆರೋಗ್ಯ ಕವಚ” ಹೆಸರಿನ ತುರ್ತು ವೈದ್ಯಕೀಯ ಸೇವೆ ಮಾನವೀಯ ಕರ್ತವ್ಯವನ್ನು ನಿರ್ವಹಿಸಬೇಕಾದಾಗಲೇ ಆಂಬುಲೆನ್ಸ್ನಲ್ಲಿ ತಾಂತ್ರಿಕ ದೋಷ ಎದುರಾದ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ತೀವ್ರ ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳಾ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ಸಲುವಾಗಿ ಬಳಸಲಾಗಿದ್ದ ಆರೋಗ್ಯ ಕವಚ ಆಂಬುಲೆನ್ಸ್ (ನಂ. KA51G 5166) ಮಾರ್ಗ ಮಧ್ಯೆ ಹೊಸಕೋಟೆ ಟೋಲ್ ಬಳಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಿದೆ.
ಸ್ಥಳೀಯ ವೈದ್ಯರು ರೋಗಿಯ ಸ್ಥಿತಿಯನ್ನು ಗಂಭೀರವೆಂದು ನಿರ್ಧರಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಹೇಳಿದ್ದರು. ಆದರೆ, ನಿರೀಕ್ಷಿತ ವೇಗದಲ್ಲಿ ಸಾಗಬೇಕಾಗಿದ್ದ ಆಂಬುಲೆನ್ಸ್ ಯಾಂತ್ರಿಕ ದೋಷದಿಂದ ಕೆಲ ಸಮಯದವರೆಗೆ ರಸ್ತೆ ಬದಿಯಲ್ಲಿಯೇ ನಿಂತುಬಿಟ್ಟಿತು.
ಸ್ಥಳದಲ್ಲಿದ್ದ ಆಂಬುಲೆನ್ಸ್ ಸಿಬ್ಬಂದಿ ತಕ್ಷಣವೇ ತಮ್ಮ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕಿಸಿ ಮತ್ತೊಂದು ಆಂಬುಲೆನ್ಸ್ ಕಳುಹಿಸುವ ವ್ಯವಸ್ಥೆ ಮಾಡಿದರು. ಸುಮಾರು 20 ನಿಮಿಷಗಳ ನಂತರ ಮತ್ತೊಂದು ವಾಹನ ಸ್ಥಳಕ್ಕೆ ಆಗಮಿಸಿ ಮಹಿಳಾ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿತು. ನಂತರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಸಮಯದಲ್ಲಿ ಎಡವಿದ್ದರೆ ರೋಗಿಯ ಜೀವಕ್ಕೆ ಗಂಭೀರ ಅಪಾಯ ಸಂಭವಿಸಬಹುದಿತ್ತು ಎಂದು ವೈದ್ಯರ ಹೇಳಿದ್ದಾರೆ.
ಈ ಘಟನೆ ರಾಜ್ಯದ ಆರೋಗ್ಯ ಇಲಾಖೆಯ ಆಂಬುಲೆನ್ಸ್ ಸೇವೆಗಳ ಸ್ಥಿತಿಗತಿಯನ್ನು ಬಯಲಿಗೆ ತಂದಿದೆ. ಇಂತಹ ಘಟನೆಗಳು ಪುನರಾವರ್ತನೆಗೊಳಗಾಗದಂತೆ ಆಂಬುಲೆನ್ಸ್ಗಳ ನಿರ್ವಹಣೆಯಲ್ಲೂ, ತಾಂತ್ರಿಕ ಪರಿಶೀಲನೆಯಲ್ಲೂ ಆರೋಗ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕಿದೆ. ಪ್ರತಿಯೊಂದು ಆಂಬುಲೆನ್ಸ್ ಸರಿಯಾದ ತಾಂತ್ರಿಕ ಸ್ಥಿತಿಯಲ್ಲಿದೆಯೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಈ ಘಟನೆಯ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.