ಕಾಡುಗೋಡಿ ಮಗು ಕೊ*ಲೆ ಕೇಸ್‌‌: ಮೂವರು ಪೊಲೀಸರ ಅಮಾನತು

Untitled design 2026 06 12T124308.278

ಬೆಂಗಳೂರು, ಜೂನ್ 12: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಐದೂವರೆ ವರ್ಷದ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಅಮಾನತುಗೊಂಡವರಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಂಗಸ್ವಾಮಿ, ಪಿಎಸ್‌ಐ ನಿಂಗರಾಜು ಹಾಗೂ ಸಿಬ್ಬಂದಿ ಹಾಲೇಶ್ ನಾಯ್ಕ್ ಸೇರಿದ್ದಾರೆ. ಪ್ರಕರಣದ ಪ್ರಾಥಮಿಕ ಹಂತದಲ್ಲೇ ಗಂಭೀರ ನಿರ್ಲಕ್ಷ್ಯ ತೋರಿದ ಆರೋಪ ಇವರ ಮೇಲೆ ಕೇಳಿಬಂದಿದ್ದು, ಈ ಕ್ರಮ ಕೈಗೊಳ್ಳಲಾಗಿದೆ.

ಮಾರ್ಚ್ 24ರಂದು ಕಾಡುಗೋಡಿಯ ವಿಲ್ಲಾದಲ್ಲಿ ಬಾಲಕಿ ವೆನ್ನಿಲಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆರಂಭದಲ್ಲಿ ಈ ಘಟನೆಯನ್ನು ಪೊಲೀಸರು ಅಸಹಜ ಸಾವು (Unnatural Death) ಎಂದು ದಾಖಲಿಸಿಕೊಂಡಿದ್ದರು. ಆದರೆ ನಂತರ ನಡೆದ ತನಿಖೆಯಲ್ಲಿ ಇದು ಕೊಲೆ ಪ್ರಕರಣವೆಂದು ಸ್ಪಷ್ಟವಾಗಿತ್ತು.

ಮರಣೋತ್ತರ ಪರೀಕ್ಷೆ ವರದಿ ಲಭ್ಯವಾಗಿದ್ದರೂ ಕೂಡ, ಎಫ್‌ಐಆರ್ ದಾಖಲಿಸುವಲ್ಲಿ ಎರಡು ತಿಂಗಳ ವಿಳಂಬ ನಡೆದಿದೆ ಎಂಬುದು ಪ್ರಮುಖ ಆರೋಪವಾಗಿದೆ. ಈ ಅವಧಿಯಲ್ಲಿ ಸಾಕ್ಷ್ಯ ಸಂಗ್ರಹ, ಸ್ಥಳ ಪರಿಶೀಲನೆ ಹಾಗೂ ತನಿಖಾ ಕ್ರಮಗಳು ಸರಿಯಾಗಿ ನಡೆಯದಿರುವುದೂ ಇಲಾಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಮಗುವಿನ ತಂದೆ ನೀಡಿದ್ದ ದೂರನ್ನು ಪರಿಗಣಿಸದಿರುವುದು ಕೂಡ ಪೊಲೀಸರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಬದಲಿಗೆ ಪ್ರಕರಣವನ್ನು ಸಾಮಾನ್ಯ ಅಸಹಜ ಸಾವು ಎಂದು ದಾಖಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿರಲಿಲ್ಲ.

ಮಹದೇವಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವರದಿಯಲ್ಲಿ ಕಾಡುಗೋಡಿ ಠಾಣೆಯ ತನಿಖಾ ಪ್ರಕ್ರಿಯೆಗಳಲ್ಲಿ ಗಂಭೀರ ಲೋಪಗಳಿರುವುದು  ಉಲ್ಲೇಖವಾಗಿದೆ.

ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಯಾದ ತಾಯಿ ಪ್ರಿಯಾಂಕಾ ಬಂಧನಕ್ಕೂ ಸಂಬಂಧಿಸಿದ ಬೆಳವಣಿಗೆಗಳು ನಡೆದಿವೆ. ಎಫ್‌ಐಆರ್ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಆಕೆಯನ್ನು ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಪೊಲೀಸರು ಬಂಧಿಸಿದ್ದಾರೆ. ನಂತರ ಆಕೆಯನ್ನು ಬೆಂಗಳೂರಿಗೆ ಕರೆತರಲಾಗಿದೆ.

ತನಿಖೆ ವೇಳೆ ಪ್ರಿಯಾಂಕಾಳ ಪ್ರಿಯಕರ ಮೋಹನ್‌ನ ಪಾತ್ರವೂ ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಆತ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ದಿಕ್ಕು ಸಂಪೂರ್ಣವಾಗಿ ಬದಲಾಗಿತ್ತು. ಆರಂಭದಲ್ಲಿ ಸಾಮಾನ್ಯ ಸಾವು ಎಂದು ಪರಿಗಣಿಸಲಾದ ಈ ಪ್ರಕರಣವು ನಂತರದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೊಲೆ ಎಂದು ದೃಢಪಟ್ಟಿದೆ. ಪೊಲೀಸರ ವಿಳಂಬ ಮತ್ತು ನಿರ್ಲಕ್ಷ್ಯವೂ ಈ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

Exit mobile version