ಪದೇ ಪದೇ ತವರು ಮನೆಗೆ ಹೋಗ್ತಾಳೆಂದು ಪತ್ನಿಯನ್ನ ಕೊ*ಲೆಗೈದು, ಪರಾರಿಯಾದ ಪತಿ

Untitled design 2026 01 16T231201.941

ಹಾವೇರಿ: ಹಾನಗಲ್ ತಾಲೂಕಿನ ಮುಡೂರು ಗ್ರಾಮದಲ್ಲಿ ಪತ್ನಿ ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೇ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಸಾಲೇಹಾ ಚಮನಸಾಬ ಗಣಜೂರ (30) ಮೃತ ದುರ್ದೈವಿಯಾಗಿದ್ದಾರೆ. ಆರೋಪಿ ಗೌಸ್ ಬಿ ಮಕಬುಲ್ ಅಹ್ಮದ್ ಹಿರೇಹಳ್ಳಿ (44) ಕೃತ್ಯ ಎಸಗಿದ ನಂತರ ತಲೆಮರೆಸಿಕೊಂಡಿದ್ದಾನೆ.

ಪತ್ನಿ ತನ್ನ ತಾಯಿ ಮನೆಗೆ ಪದೇಪದೆ ಹೋಗುವುದನ್ನು ಪತಿ ವಿರೋಧಿಸುತ್ತಿದ್ದ ಎನ್ನಲಾಗಿದೆ. ಗುರುವಾರ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಆಕ್ರೋಶಗೊಂಡ ಪತಿ ಪತ್ನಿಯ ಮೇಲೆ ಭೀಕರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

2. ಹೋರಿ ಹಬ್ಬದ ಅಧಿಪತಿ ಕರ್ಜಗಿ ಓಂ-112 ಇನ್ನಿಲ್ಲ

ಹಾವೇರಿ ಜಿಲ್ಲೆಯ ಕರ್ಜಗಿಯಲ್ಲಿ ಹೋರಿ ಬೆದರಿಸುವ ಹಬ್ಬದ ಅಪ್ರತಿಮ ಪೈಲ್ವಾನ್ ಆಗಿ ಮಿಂಚಿದ್ದ ‘ಕರ್ಜಗಿ ಓಂ-112’ ಹೋರಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಈ ಹೋರಿಯ ಕಳೆದುಕೊಂಡ ಊರಿನವರು ಕಣ್ಣೀರಕ್ಕಿದ್ದಾರೆ.

1000CC ವೇಗದ ಓಟಗಾರ

ಶರವೇಗದ ಓಟಕ್ಕೆ ಹೆಸರಾಗಿದ್ದ ಈ ಹೋರಿಯನ್ನು ಅಭಿಮಾನಿಗಳು ಪ್ರೀತಿಯಿಂದ ಕರ್ನಾಟಕದ ಸ್ಪೆಷಲ್ ಬ್ರ್ಯಾಂಡ್ 1000CC ಎಂದು ಕರೆಯುತ್ತಿದ್ದರು. ಇತ್ತೀಚೆಗೆ ಬಂಕಾಪುರದಲ್ಲಿ ನಡೆದ ಹಬ್ಬದಲ್ಲಿ ಭಾಗವಹಿಸಿದ್ದ ಓಂ, ಅಲ್ಲಿಂದ ಬಂದ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ಮಾಲೀಕ ಜಗದೀಶ್ ನಾಗಪ್ಪ ಮಾನೆಗಾರ ಅವರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಓಂ ಸಾವನ್ನಪ್ಪಿದೆ.

ಅಭಿಮಾನಿಗಳ ಆರಾಧ್ಯ ದೈವ

ಕಳೆದ ನಾಲ್ಕು ವರ್ಷಗಳಿಂದ ಅಖಾಡದಲ್ಲಿ ರಾಜನಂತೆ ಮೆರೆದಿದ್ದ ಓಂ ಹೋರಿಯನ್ನು ಹಿಡಿಯಲು ಸಾವಿರಾರು ಪೈಲ್ವಾನರು ಹರಸಾಹಸ ಪಡುತ್ತಿದ್ದರು. ಆದರೆ ಯಾರ ಕೈಗೂ ಸಿಗದೆ ಗುರಿ ತಲುಪುವ ಇದರ ಶೈಲಿಯೇ ಅದ್ಭುತವಾಗಿತ್ತು. ಓಂ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ಜಗಿ ಗ್ರಾಮಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಸಲ್ಲಿಸಿದ್ದಾರೆ. ಕರ್ನಾಟಕದ ಹೋರಿ ಹಬ್ಬದ ಇತಿಹಾಸದಲ್ಲಿ ‘ಓಂ-112’ ಹೆಸರು ಹೆಚ್ಚು ಪ್ರಸಿದ್ದಿಯಾಗಿದ್ದು ಸಾವರಾರು ಜನ ಸಂತಾಪ ಸೂಚಿಸಿದ್ದಾರೆ.

Exit mobile version