ಪತ್ನಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದ ಪತಿರಾಯ

Untitled design 2025 06 07t154315.974
ADVERTISEMENT
ADVERTISEMENT

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ಕೊಲೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿಯ ಅಕ್ರಮ ಸಂಬಂಧದಿಂದ ಕೋಪಗೊಂಡ ಪತಿಯೊಬ್ಬ ಆಕೆಯ ತಲೆ ಕಡಿದು, ರುಂಡದೊಂದಿಗೆ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಕೊಲೆಗೀಡಾದ ಮಹಿಳೆ ಮಾನಸ (26), ಹೆಬ್ಬಗೋಡಿ ನಿವಾಸಿ. ಆರೋಪಿ ಶಂಕರ್ (28), ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿಯ ನಿವಾಸಿ. ಈ ದಂಪತಿ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಿಂಗಳ ಹಿಂದಷ್ಟೇ ಈ ಮನೆಗೆ ಶಿಫ್ಟ್ ಆಗಿದ್ದ ಶಂಕರ್ ಮತ್ತು ಮಾನಸ ದಾಂಪತ್ಯ ಜೀವನದಲ್ಲಿ ಸಂತೋಷವಾಗಿರಲಿಲ್ಲ. ಒಂದು ಮಗುವಿರುವ ಈ ಜೋಡಿಯ ನಡುವೆ ಮಾನಸಳ ಅಕ್ರಮ ಸಂಬಂಧದ ಕಾರಣದಿಂದಾಗಿ ಆಗಾಗ ಜಗಳಗಳು ನಡೆಯುತ್ತಿದ್ದವು.

ಜೂನ್ 3ರಂದು ಶಂಕರ್ ಕೆಲಸದ ನಿಮಿತ್ತ ಹೊರಗೆ ತೆರಳಿದ್ದ. ಮಾರನೆ ದಿನ ವಾಪಸ್ ಬರುವುದಾಗಿ ಹೇಳಿದ್ದ ಶಂಕರ್, ಕೆಲಸ ಬೇಗ ಮುಗಿದ ಕಾರಣ ಶುಕ್ರವಾರ ತಡರಾತ್ರಿ ಮನೆಗೆ ಮರಳಿದ. ಆದರೆ, ಮನೆಗೆ ಬಂದಾಗ ಮಾನಸ ಬೇರೊಬ್ಬ ವ್ಯಕ್ತಿಯೊಂದಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯಿಂದ ಕೋಪಗೊಂಡ ಶಂಕರ್, ಮಾನಸಳನ್ನು ತಕ್ಷಣವೇ ಆಕೆಯ ಪ್ರಿಯಕರನೊಂದಿಗೆ ಮನೆಯಿಂದ ಹೊರಗೆ ಕಳುಹಿಸಿದ್ದನು.

ಆದರೆ, ಮಾನಸ ಶಂಕರ್‌ನ ಜೊತೆಗಿನ ಜಗಳವನ್ನು ಮುಂದುವರಿಸಿದ್ದಳು. ಪದೇಪದೇ ಶಂಕರ್‌ಗೆ ಕಿರುಕುಳ ನೀಡುತ್ತಿದ್ದ ಆಕೆ, ಗುರುವಾರ ರಾತ್ರಿ ಮತ್ತೆ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಶಂಕರ್, ಮಾನಸಳ ತಲೆಯನ್ನು ಕಡಿದು, ಆಕೆಯ ರುಂಡವನ್ನು ಬೈಕ್‌ನಲ್ಲಿ ತೆಗೆದುಕೊಂಡು ಸೂರ್ಯನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಸೂರ್ಯನಗರ ಪೊಲೀಸರು ಘಟನೆಯ ಬಗ್ಗೆ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಶಂಕರ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಘಟನೆಯ ಸ್ಥಳವನ್ನು ಪರಿಶೀಲಿಸಿದ್ದಾರೆ. ಮಾನಸಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಕ್ಸ್‌ಫರ್ಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Exit mobile version