ಬೆಂಗಳೂರಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಪತ್ನಿ ಆತ್ಮಹತ್ಯೆ

Untitled design 2025 05 20t184901.827

ಬೆಂಗಳೂರು : ಕೆಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಅವರ ಪತ್ನಿ ಶಾಲಿನಿ ಎಚ್‌ಬಿಆರ್ ಲೇಔಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ದಾಂಪತ್ಯ ಕಲಹ ಕಾರಣ ಎಂದು ಶಂಕಿಸಲಾಗಿದ್ದು, ಗೋವಿಂದಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲಿನಿಯ ತಂದೆ-ತಾಯಿ ಈ ಸಾವಿನಲ್ಲಿ ಕೊಲೆಯ ಆರೋಪ ಹೊರಿಸಿದ್ದು, ಪಿಎಸ್‌ಐ ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಶಾಲಿನಿ ಮತ್ತು ನಾಗರಾಜ್ ಚಿಕ್ಕಂದಿನಿಂದಲೂ ಟ್ಯೂಷನ್‌ನಲ್ಲಿ ಸ್ನೇಹಿತರಾಗಿದ್ದರು. ಶಾಲಿನಿ ಎಂ.ಎಸ್.ಸಿ. ಪದವೀಧರರಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ತಯಾರಿ ನಡೆಸುವಾಗ ಶಾಲಿನಿ ಆರ್ಥಿಕ ಸಹಾಯವನ್ನೂ ನೀಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಶಾಲಿನಿ ತನ್ನ ಮೊದಲ ಪತಿಗೆ 2024ರ ಆಗಸ್ಟ್‌ನಲ್ಲಿ ವಿಚ್ಛೇದನ ನೀಡಿ ನಾಗರಾಜ್‌ನನ್ನು ಮದುವೆಯಾದರು. ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ADVERTISEMENT
ADVERTISEMENT

ಕಳೆದ ಎರಡು ತಿಂಗಳಿನಿಂದ ಶಾಲಿನಿ ಮತ್ತು ನಾಗರಾಜ್ ನಡುವಿನ ಸಂಬಂಧ ಒಡಕು ಮೂಡಿದ್ದು, ನಾಗರಾಜ್ ಶಾಲಿನಿ ಹಾಗೂ ಮನೆಯನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರು. ಇದರಿಂದ ಕೋಪಗೊಂಡ ಶಾಲಿನಿ, ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಈ ಘಟನೆಗೂ ಮುನ್ನ ರಾತ್ರಿ ಶಾಲಿನಿ “ರೈಲಿಗೆ ಸಿಲುಕಿ ಸಾಯುವೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು. ಹೊಯ್ಸಳ ಪೊಲೀಸರು ಗಸ್ತಿನ ವೇಳೆ ಶಾಲಿನಿಯನ್ನು ರಕ್ಷಿಸಿ ಮನೆಗೆ ಕರೆತಂದಿದ್ದರು. ಆದರೆ, ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಶಾಲಿನಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದರು.

ಶಾಲಿನಿಯ ತಂದೆ ಶಿವಲಿಂಗಪ್ಪ ಮತ್ತು ತಾಯಿ ಭಾರತಿ, ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನಾಗರಾಜ್‌ಗೆ ನನ್ನ ಮಗಳ ಹಣ ಬೇಕಿತ್ತು, ಆಕೆಯ ಜೊತೆ ಜೀವನ ಬೇಡವಿತ್ತು. ಆಕೆಯನ್ನು ಹೊಡೆಯುತ್ತಿದ್ದ, ಹಣಕ್ಕಾಗಿ ಒತ್ತಾಯಿಸುತ್ತಿದ್ದ, ಡೈಮಂಡ್ ರಿಂಗ್‌ಗೆ ಡಿಮ್ಯಾಂಡ್ ಮಾಡುತ್ತಿದ್ದ,” ಎಂದು ಶಿವಲಿಂಗಪ್ಪ ಆರೋಪಿಸಿದ್ದಾರೆ. “ಇದು ಆತ್ಮಹತ್ಯೆಯಲ್ಲ, ಕೊಲೆ,” ಎಂದು ಶಾಲಿನಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಿನಿಯವರು ಈ ಹಿಂದೆ ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ವಿರುದ್ಧ ದೂರು ದಾಖಲಿಸಿದ್ದರು, ಇದರ ಮೇಲೆ ಇಲಾಖಾ ತನಿಖೆಯೂ ನಡೆದಿತ್ತು. ಶಿವಾಜಿನಗರ ಮಹಿಳಾ ಠಾಣೆಯಲ್ಲಿ ಕೌನ್ಸೆಲಿಂಗ್‌ಗೆ ಕರೆದಾಗ ಶಾಲಿನಿಗೆ ಪೊಲೀಸರೇ ತಪ್ಪಿತಸ್ಥರಂತೆ ಮಾತನಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಶಾಲಿನಿಗೆ ಮೊದಲ ಮದುವೆಯಿಂದ ಏಳು ವರ್ಷದ ಮಗುವಿದೆ. ಈಗ ತಂದೆ-ತಾಯಿಯನ್ನು ಕಳೆದುಕೊಂಡ ಆ ಮಗುವಿನ ಭವಿಷ್ಯದ ಬಗ್ಗೆ ಕುಟುಂಬದವರು ಕಳವಳ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು,” ಎಂದು ಶಾಲಿನಿಯ ತಂದೆ-ತಾಯಿ ಒತ್ತಾಯಿಸಿದ್ದಾರೆ.

Exit mobile version