ಬೆಂಗಳೂರು: ಕರ್ನಾಟಕದ ಆಸ್ತಿಗಳನ್ನು ರಕ್ಷಿಸುವ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಚ್ಎಎಲ್ (ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್) ಅನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿರುವ ಬೇಡಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹೆಮ್ಮೆಯಾದ ಎಚ್ಎಎಲ್ನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ನಮ್ಮ ಸರ್ಕಾರವು ರಾಜ್ಯದ ಆಸ್ತಿಗಳನ್ನು ಕಾಪಾಡುತ್ತದೆ. ಎಚ್ಎಎಲ್ಗೆ ವಿಸ್ತರಣೆಗೆ ಭೂಮಿ ಬೇಕಾದರೆ ನಾವು ನೀಡುತ್ತೇವೆ. ಆಂಧ್ರಪ್ರದೇಶ ತಮ್ಮ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಆರಂಭಿಸಬಹುದು. ಆದರೆ ಕರ್ನಾಟಕದ ಆಸ್ತಿಯಾದ ಎಚ್ಎಎಲ್ ಇಲ್ಲಿಯೇ ಉಳಿಯುತ್ತದೆ. ಇದು ನಮ್ಮ ನವರತ್ನ, ನಮ್ಮ ಹೆಮ್ಮೆ,” ಎಂದು ಡಿಕೆ ಶಿವಕುಮಾರ್ ಹೇಳಿದರು. “ಎಚ್ಎಎಲ್ನ್ನು ಬಿಜೆಪಿ ಸರ್ಕಾರ ಸ್ಥಾಪಿಸಿಲ್ಲ. ಜವಾಹರ್ಲಾಲ್ ನೆಹರೂ ಅವರು ಕರ್ನಾಟಕದ ತಾಂತ್ರಿಕ ಮತ್ತು ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಗುರುತಿಸಿ ಬೆಂಗಳೂರಿನಲ್ಲಿ ಇದನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ವಾಯುನೆಲೆಗಳು ಮತ್ತು ಏರ್ ಶೋಗಳಿಗೆ ಬೆಂಗಳೂರು, ಬೀದರ್ನಂತಹ ಸ್ಥಳಗಳು ಕೇಂದ್ರಬಿಂದುವಾಗಿವೆ,” ಎಂದು ಅವರು ವಿವರಿಸಿದರು.
ತುಮಕೂರಿನಲ್ಲಿ ಎಚ್ಎಎಲ್ನ ಹೆಲಿಕಾಪ್ಟರ್ ವಿಭಾಗಕ್ಕೆ ಈಗಾಗಲೇ ಜಮೀನು ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು. “ಚಂದ್ರಬಾಬು ನಾಯ್ಡು ಅವರ ರಾಜಕೀಯ ಬೇಡಿಕೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನೆರೆ ರಾಜ್ಯಗಳ ಏಳಿಗೆಗೆ ನಾವು ಅಡ್ಡಿಯಾಗುವುದಿಲ್ಲ. ಆದರೆ, ಕರ್ನಾಟಕದ ಆಸ್ತಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಎಚ್ಎಎಲ್ ಸೇರಿದಂತೆ ನಮ್ಮ ನವರತ್ನಗಳನ್ನು ಉಳಿಸಿಕೊಳ್ವೆವು,” ಎಂದು ಅವರು ಘೋಷಿಸಿದರು.
ಸಂಸದರು, ಕೇಂದ್ರ ಸಚಿವರ ವಿರುದ್ಧ ಕಿಡಿ
ಈ ಸಂದರ್ಭದಲ್ಲಿ, ಕರ್ನಾಟಕದಿಂದ ಆಯ್ಕೆಯಾದ ಸಂಸದರು ಮತ್ತು ಕೇಂದ್ರ ಸಚಿವರ ನಿಷ್ಕ್ರಿಯತೆಯನ್ನು ಶಿವಕುಮಾರ್ ತೀವ್ರವಾಗಿ ಟೀಕಿಸಿದರು. “ನಮ್ಮ ರಾಜ್ಯದ ಸಂಸದರು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವರು ಯಾಕೆ ಮೌನವಾಗಿದ್ದಾರೆ? ಇಂದು ಸಂಜೆಯೊಳಗೆ ಎಲ್ಲರೂ ಈ ಬಗ್ಗೆ ಮಾತನಾಡಬೇಕು,” ಎಂದು ಅವರು ಆಗ್ರಹಿಸಿದರು.
ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರು ಕಲಬುರ್ಗಿಯ ಜಿಲ್ಲಾಧಿಕಾರಿಯನ್ನು ‘ಪಾಕಿಸ್ತಾನಿ’ ಎಂದು ನಿಂದಿಸಿರುವ ವಿಚಾರವನ್ನೂ ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದರು. “ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿಯಿಲ್ಲ. ಕಲಬುರ್ಗಿಯ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ತಮ್ಮದೇ ಆದ ಘನತೆ ಇದೆ. ಕರ್ನಾಟಕ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ,” ಎಂದರು.
ಬಿಜೆಪಿಯವರು ಮಹಿಳಾ ಅಧಿಕಾರಿಯನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದ ಶಿವಕುಮಾರ್, “ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವರು ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಬೇಕು,” ಎಂದು ಒತ್ತಾಯಿಸಿದರು.