ಕುಡುಕರು ಹೆಚ್ಚಾಗಿದ್ದು ಯಾವ ಸರ್ಕಾರದ ಅವಧಿಯಲ್ಲಿ? ಬಿಜೆಪಿ-ಕಾಂಗ್ರೆಸ್ ನಡುವೆ ಬಿಸಿ ಬಿಸಿ ವಾಗ್ವಾದ

Untitled design 2025 12 09T210313.751

ಬೆಂಗಳೂರು: ಕುಡುಕರು ಜಾಸ್ತಿಯಾಗಿದ್ದು ಬಿಜೆಪಿ ಆಡಳಿತದಲ್ಲೋ ಅಥವಾ ಕಾಂಗ್ರೆಸ್ ಕಾಲದಲ್ಲೋ?—ಈ ಪ್ರಶ್ನೆಯೇ ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ವಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಕಿಡಿಕಾರಿದರು.. ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಗುರಿಯಾಗಿಸಿಕೊಂಡ ಅವರು, “ಮುಖ್ಯಮಂತ್ರಿಯವರ ಬಾಡಿ ಲ್ಯಾಂಗ್ಜ್ವೇಜ್‌ ಬದಲಾಗಿದೆ. ಭಾಷಣದ ವೇಳೆ ಜನರು ಏನನ್ನೇ ಕೇಳಿದರೂ ‘ಎರಡು ಸಾವಿರ ಕೊಡ್ತಿದೀನಿ’ ಅನ್ನೋ ಉತ್ತರ. ಆದರೆ ಆ ಎರಡು ಸಾವಿರ ರೂಪಾಯಿ ಎಲ್ಲಿ ಬರುತ್ತಿದೆ? ಗಂಡನ ಜೇಬಿನಿಂದ! ಮದ್ಯ ಖರೀದಿಗೆ ಹೋಗುತ್ತಿದ್ದ ಹಣಕ್ಕೆ ಈಗ ತೆರಿಗೆ ಹಾಕಿ ಮಹಿಳೆಯರಿಗೆ ಕೊಡ್ತಿದ್ದೀರಿ,” ಎಂದು ಕಟುವಾಗಿ ಟೀಕಿಸಿದರು.

“ಒಂದು ಕ್ವಾಟರ್‌ಗೆ 50–60 ರೂಪಾಯಿ ಹೆಚ್ಚಿಸಿದ್ದಾರೆ. ಗಂಡನ ಹಣ ಕಿತ್ತುಕೊಂಡು ಹೆಂಡತಿಗೆ ಕೊಡ್ತಿರುವ ಸರ್ಕಾರಿ ಯೋಜನೆ ಇದು!” ಎಂದು ಆರ್‌. ಅಶೋಕ್‌ ಆರೋಪಿಸಿದರು.

ಶಿವಲಿಂಗೇಗೌಡ ತಕ್ಷಣವೇ ಮಧ್ಯಪ್ರವೇಶಿಸಿ, “ಬಿಜೆಪಿ ಆಡಳಿತದ ಅವಧಿಯಲ್ಲಿ ಜನರು ಕುಡಿಯುತ್ತಿರಲಿಲ್ಲವೇ? ಯಾವ ಕಾಲದಲ್ಲೂ ಜನರು ಕುಡಿದಿದ್ದಾರೆ. ಇದನ್ನು ರಾಜಕೀಯ ಬಣ್ಣಕ್ಕೆ ಹಚ್ಚುವುದು ಸರಿಯಲ್ಲ,” ಎಂದು ತಿರುಗೇಟು ನೀಡಿದರು.

ಅದೇ ವೇಳೆ ಸಚಿವ ಎಚ್.ಕೆ. ಪಾಟೀಲ್ ಅವರು ಅಶೋಕ್‌ ಅವರ ಮಾತುಗಳನ್ನು ವಿರೋಧಿಸಿ, “ನಿಮ್ಮ ಮಾತಿನ ಸ್ವರವನ್ನೇ ನೋಡುವಾಗ ಕುಡಿಯುವವರು ಉತ್ತರ ಕರ್ನಾಟಕದಲ್ಲೇ ಹೆಚ್ಚು ಎಂಬಂತೆ ಕಾಣುತ್ತದೆ.  ಗೃಹಲಕ್ಷ್ಮಿ ಹಣ ಮದ್ಯ ಖರೀದಿಗೆ ಹೋಗುತ್ತಿದೆ ಎನ್ನುವುದು ತಪ್ಪು. ಈ ಯೋಜನೆ ಬಡತನ ನಿವಾರಣೆಗೆ, ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿದೆ,” ಎಂದು ಅವರು ಹೇಳಿದರು.

ಇದೇ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಮದ್ಯಪಾನದ ಪ್ರಮಾಣ ಹೆಚ್ಚಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ಹೇಳಿದರು.

“ಬೆಂಗಳೂರು ನಗರದಲ್ಲಿ ಕುಡಿಯುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಅದೇ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಆಶೋಕ ಅವರ ಕ್ಷೇತ್ರದಲ್ಲೇ ಮದ್ಯಪಾನಿಗಳ ಸಂಖ್ಯೆ 1.6% ಹೆಚ್ಚಾಗಿದೆ,” ಎಂದು ರಾಯರೆಡ್ಡಿ ಪ್ರತಿದಾಳಿ ನಡೆಸಿದರು.

“ನಾನು ಉತ್ತರ ಕರ್ನಾಟಕದ ಜನರು ಕುಡಿಯುತ್ತಾರೆ ಎಂದು ಹೇಳಿಲ್ಲ. ಆದರೆ ಮದ್ಯಕ್ಕೆ ತೆರಿಗೆ ಹೆಚ್ಚಿಸಿರುವುದು ಒಂದರ್ಥದಲ್ಲಿ ‘ತೆರಿಗೆ ಭಯೋತ್ಪಾದನೆ’. ಜನರ ಜೇಬಿಗೆ ಹೊರೆ ಹಾಕಿ ಸರ್ಕಾರ ಲಾಭ ನೋಡಿಕೊಳ್ಳುತ್ತಿದೆ,” ಎಂದು ಸರ್ಕಾರದ ತೆರಿಗೆ ನೀತಿಯನ್ನು ಟೀಕಿಸಿದರು.

ಬಿಜೆಪಿ–ಕಾಂಗ್ರೆಸ್ ಎರಡೂ ಕಡೆಗಳಿಂದಲೂ ಬಂದ ಮಾತುಗಳಿಗೆ ಸದನ ಕ್ಷಣಕ್ಷಣಕ್ಕೂ ಉದ್ವಿಗ್ನತೆಯಿಂದ ಕೂಡಿತ್ತು. ಮದ್ಯಪಾನದ ಬಳಕೆ ಯಾವ ಸರ್ಕಾರದ ಅವಧಿಯಲ್ಲಿ ಹೆಚ್ಚಾಗಿದೆ ಎಂಬ ಪ್ರಶ್ನೆ, ಅಭಿವೃದ್ಧಿ–ಬಡತನ ನಿವಾರಣೆ–ತೆರಿಗೆ ನೀತಿ–ಗೃಹಲಕ್ಷ್ಮಿ ಯೋಜನೆ ಎಂಬ ಬೃಹತ್ ಚರ್ಚೆಗೆ ತಿರುಗಿತು.

Exit mobile version