ನಾಳೆಯಿಂದ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ ಆರಂಭ

Untitled design 2026 06 30T225824.415

ಬೆಂಗಳೂರು (ಜೂನ್ 30): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ (Graha Jyothi) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯ ನಾಳೆ ಜುಲೈ 1ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಯೋಜನೆ ಜಾರಿಯಾಗಿ ಎರಡು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸುವ ಉದ್ದೇಶದಿಂದ ಇಂಧನ ಇಲಾಖೆ ಈ ವಿಶೇಷ ಅಭಿಯಾನ ಕೈಗೊಂಡಿದೆ.

2023ರ ಜುಲೈ ತಿಂಗಳಲ್ಲಿ ಆರಂಭವಾದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಗ್ರಾಹಕರ ದಾಖಲೆಗಳು, ವಿಳಾಸ ಹಾಗೂ ಇತರ ಮಾಹಿತಿಯನ್ನು ಪರಿಶೀಲಿಸಲು ಎಲ್ಲಾ ಎಸ್ಕಾಂಗಳ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ವೇಳೆ ಫಲಾನುಭವಿಗಳ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ದಾಖಲಿಸಿ, ಅಗತ್ಯವಿದ್ದರೆ ಘೋಷಣಾ ಪತ್ರದ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ಇಂಧನ ಇಲಾಖೆ ಮತ್ತು ಬೆಸ್ಕಾಂ ನೀಡಿರುವ ಮಾಹಿತಿಯಂತೆ, ಸಿಬ್ಬಂದಿ ಭೇಟಿ ನೀಡುವ ವೇಳೆ ಫಲಾನುಭವಿಗಳು ಕೆಲವು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಪರಿಶೀಲನೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುವವರು ಬಾಡಿಗೆ ಒಪ್ಪಂದ ಪತ್ರವನ್ನು (ಅನ್ವಯಿಸುವಲ್ಲಿ) ತೋರಿಸಬೇಕಾಗುತ್ತದೆ.

ಈ ಮರುಪರಿಶೀಲನೆಯ ಉದ್ದೇಶ ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸುವುದು ಹಾಗೂ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದರೆ ಅವುಗಳನ್ನು ಸರಿಪಡಿಸುವುದಾಗಿದೆ. ಸ್ಥಳದಲ್ಲಿಯೇ ಮೀಟರ್ ರೀಡರ್ ಮೂಲಕ ಪರಿಶೀಲನೆ ನಡೆಸುವುದು ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಗ್ರಾಹಕರು ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ಇಲಾಖೆ ಮನವಿ ಮಾಡಿದೆ.

ರಾಜ್ಯದ ಐದು ವಿದ್ಯುತ್ ಸರಬರಾಜು ಸಂಸ್ಥೆಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತದೆ.

ಫಲಾನುಭವಿಗಳು ಸಿಬ್ಬಂದಿಯ ಗುರುತಿನ ಚೀಟಿಯನ್ನು ಪರಿಶೀಲಿಸಿದ ಬಳಿಕವೇ ದಾಖಲೆಗಳನ್ನು ತೋರಿಸಿ, ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಪರಿಶೀಲನಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಂತೆ ಇಂಧನ ಇಲಾಖೆ ಮನವಿ ಮಾಡಿದೆ.

Exit mobile version