ಗೋಕರ್ಣದಲ್ಲಿ ಬೋಟ್ ಅವಘಡ:ನಾಲ್ವರು ಪ್ರಾಣಾಪಾಯದಿಂದ ಪಾರು

Image 8e7e8f2e

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಸಮುದ್ರದ ಅಳವೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಬೋಟ್ ಸಿಲುಕಿ, ಅಲೆಗಳ ಅಬ್ಬರಕ್ಕೆ ತಳಭಾಗಕ್ಕೆ ಹಾನಿಯಾಗಿ ಮುಳುಗಿದೆ. ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ಸ್ಥಳೀಯ ಮೀನುಗಾರರು ಸಮಯೋಚಿತವಾಗಿ ರಕ್ಷಿಸಿದ್ದು, ದೊಡ್ಡ ದುರಂತ ತಪ್ಪಿದೆ.

ಮುಳುಗಿದ ಬೋಟ್ ‘ಲಕ್ಷ್ಮೀಕೃಪ’ ಎಂದು ಗುರುತಿಸಲಾಗಿದ್ದು, ಇದು ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ್ದಾಗಿದೆ. ಸೋಮವಾರ ಬೆಳಿಗ್ಗೆ ತದಡಿ ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್, ಬಂದರಿನಿಂದ ಸ್ವಲ್ಪ ದೂರ ಸಾಗುತ್ತಿದ್ದಂತೆ ಅಳವೆಯಲ್ಲಿದ್ದ ಹೂಳಿನಲ್ಲಿ ಸಿಲುಕಿಕೊಂಡಿತು. ಅಲೆಗಳ ತೀವ್ರ ಹೊಡೆತದಿಂದ ಬೋಟ್ ನಿಯಂತ್ರಣ ತಪ್ಪಿ ತಳಭಾಗದಲ್ಲಿ ಬಿರುಕು ಉಂಟಾಗಿ, ಕೆಲವೇ ಕ್ಷಣಗಳಲ್ಲಿ ನೀರು ತುಂಬಿ ಮುಳುಗತೊಡಗಿತು.

ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರು ಸಹಾಯಕ್ಕಾಗಿ ಕೂಗುತ್ತಿದ್ದಂತೆ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರು ತಮ್ಮ ಬೋಟ್‌ಗಳಲ್ಲಿ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಎಲ್ಲರನ್ನೂ ಸುರಕ್ಷಿತವಾಗಿ ಕರಾವಳಿಗೆ ಕರೆತಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆದರೆ ಬೋಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವುದರಿಂದ ಸುಮಾರು ₹20 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕಾ ಬಲೆ, ಎಂಜಿನ್ ಹಾಗೂ ಇತರ ಉಪಕರಣಗಳಿಗೂ ಹಾನಿಯಾಗಿದೆ.

ಗಮನಾರ್ಹ ಸಂಗತಿಯೆಂದರೆ, ಇದೇ ತದಡಿ ಅಳವೆಯಲ್ಲಿ ಕೇವಲ ಎರಡು ದಿನಗಳ ಹಿಂದೆ ‘ಶ್ರೀದೇವಿ’ ಹೆಸರಿನ ಮತ್ತೊಂದು ಮೀನುಗಾರಿಕಾ ಬೋಟ್ ಕೂಡ ಮುಳುಗಡೆಯಾಗಿತ್ತು. ಒಂದೇ ವಾರದಲ್ಲಿ ಎರಡು ಬೋಟ್‌ಗಳು ಮುಳುಗಿರುವುದು ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ.

ಸ್ಥಳೀಯ ಮೀನುಗಾರರ ಪ್ರಕಾರ, ತದಡಿ ಅಳವೆಯಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಹೆಚ್ಚಾಗುತ್ತಿದ್ದು, ಬೋಟ್ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಅಳವೆಯ ಆಳ ಕಡಿಮೆಯಾಗಿರುವುದರಿಂದ ದೊಡ್ಡ ಬೋಟ್‌ಗಳು ಸುಲಭವಾಗಿ ಸಿಲುಕುತ್ತಿವೆ. ಹೂಳು ತೆರವುಗೊಳಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಮೀನುಗಾರರು ಈಗಾಗಲೇ ಬಂದರು ಹಾಗೂ ಮೀನುಗಾರಿಕೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ. ತದಡಿ ಬಂದರಿನ ಅಳವೆಯನ್ನು ತಕ್ಷಣ ಡ್ರೆಡ್ಜಿಂಗ್ ಮಾಡಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version