ಕೊಪ್ಪಳ: ಇಡೀ ನಾಡನ್ನೇ ಬೆಚ್ಚಿಬೀಳಿಸಿದ್ದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯ ಬಳಿ ನಡೆದ ವಿದೇಶಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಒಡಿಶಾ ಪ್ರವಾಸಿಗನ ಹತ್ಯೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದೆ. ಈ ಕೃತ್ಯ ಎಸಗಿದ್ದ ಮೂವರು ಅಪರಾಧಿಗಳಿಗೆ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯವು ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಆದೇಶಿಸಿದೆ.
ಅಪರಾಧಿಗಳ ವಿವರ
ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದವರು:
-
ಮಲ್ಲೇಶ್ (ಹಂದಿಮಲ್ಲ) – ಸಾಯಿನಗರ, ಗಂಗಾವತಿ.
-
ಸಾಯಿ (ಚೈತನ್ಯಸಾಯಿ) – ಸಾಯಿನಗರ, ಗಂಗಾವತಿ.
-
ಶರಣಪ್ಪ (ಶರಣು ಬಸವರಾಜ್) – ಸಾಯಿನಗರ, ಗಂಗಾವತಿ.
ಕಳೆದ ವರ್ಷ ಮಾರ್ಚ್ 6 ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಭೀಕರ ಘಟನೆ ನಡೆದಿತ್ತು. ಹಂಪಿ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಮೂಲದ ಮಹಿಳೆ ಸೇರಿದಂತೆ ಐವರು ಪ್ರವಾಸಿಗರು ಸಾಣಾಪುರ ಕೆರೆಯ ಬಳಿ ನಕ್ಷತ್ರಗಳನ್ನು ನೋಡುತ್ತಾ, ಗಿಟಾರ್ ನುಡಿಸುತ್ತಾ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದರು. ಅವರ ಜೊತೆಗೆ ಸ್ಥಳೀಯ ಹೋಂ ಸ್ಟೇ ನಿರ್ವಾಹಕಿ ಕೂಡ ಇದ್ದರು.
ಈ ವೇಳೆ ಬೈಕ್ನಲ್ಲಿ ಬಂದ ಮೂವರು ಆರೋಪಿಗಳು, ಪೆಟ್ರೋಲ್ ಹಾಕಿಸಲು 100 ರೂಪಾಯಿ ನೀಡುವಂತೆ ಪೀಡಿಸಿದ್ದರು. ಹಣ ನೀಡಲು ನಿರಾಕರಿಸಿದಾಗ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿ, ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟಕ್ಕೇ ನಿಲ್ಲದ ಕಾಮುಕರು, ಮೂವರು ಪುರುಷ ಪ್ರವಾಸಿಗರನ್ನು ಬಲವಂತವಾಗಿ ಪಕ್ಕದಲ್ಲಿದ್ದ ಕಾಲುವೆಗೆ ತಳ್ಳಿದ್ದರು. ಈ ವೇಳೆ ಇಬ್ಬರು ಈಜಿ ದಡ ಸೇರಿದ್ದರೂ, ಒಡಿಶಾ ಮೂಲದ ಬಿಬಾಸ್ ಎಂಬ ಪ್ರವಾಸಿಗ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿದ್ದ.
ಬಳಿಕ ಆರೋಪಿಗಳು ಏಕಾಂಗಿಯಾಗಿದ್ದ ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೇ ನಿರ್ವಾಹಕಿಯನ್ನು ಬೆದರಿಸಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದರು. ಮರುದಿನ ಬಿಬಾಸ್ ಶವ ಪತ್ತೆಯಾದ ನಂತರ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಪ್ರಕರಣ ದಾಖಲಿಸಿಕೊಂಡ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಸಾಕ್ಷ್ಯಧಾರಗಳು ಮತ್ತು ಡಿಎನ್ಎ ವರದಿಗಳ ಆಧಾರದ ಮೇಲೆ ನ್ಯಾಯಾಧೀಶರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ (Rarest of Rare case) ಎಂದು ಪರಿಗಣಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ.
