ಬೆಂಗಳೂರು: ಕರ್ನಾಟಕದಲ್ಲಿ ನಕಲಿ ವೈದ್ಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಆರೋಗ್ಯ ಇಲಾಖೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ರಾಜ್ಯದಾದ್ಯಂತ 958 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಈ ಪೈಕಿ ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಜನರ ಬದುಕಿನ ಜೊತೆ ಆಟವಾಡುವ ಈ ನಕಲಿ ವೈದ್ಯರು, ಯಾವುದೇ ತಜ್ಞತಾ ಪ್ರಮಾಣಪತ್ರವಿಲ್ಲದೆ ಹೈಡೋಸ್ ಔಷಧಿಗಳನ್ನು ನೀಡಿ, ಗಂಭೀರ ಸಮಸ್ಯೆಗಳನ್ನು ಉಮಟುಮಾಡುತ್ತಿದ್ದಾರೆ.
ನಕಲಿ ವೈದ್ಯರಿರುವ ಜಿಲ್ಲೆಗಳು
ರಾಜ್ಯಾದ್ಯಂತ ಪತ್ತೆಯಾಗಿರುವ 958 ನಕಲಿ ವೈದ್ಯರ ಪೈಕಿ, ಬೀದರ್ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಅಗ್ರಸ್ಥಾನದಲ್ಲಿದೆ. ಇಲ್ಲಿ 213 ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
-
ಕೋಲಾರ: 115
-
ತುಮಕೂರು: 109
-
ವಿಜಯನಗರ: 81
-
ಕಲಬುರಗಿ: 64
ಇವರಲ್ಲಿ ಈಗಾಗಲೇ 442 ಜನರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ, 67 ಜನರ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಕೂಡ ಮಧ್ಯಪ್ರವೇಶ ಮಾಡಿ, ನಕಲಿ ಕ್ಲಿನಿಕ್ಗಳನ್ನು ಕೂಡಲೇ ಬಂದ್ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವಾಗಿರುವ ವಿಷಯ. ಎಂಬಿಬಿಎಸ್ ಅಥವಾ ಬಿಎಎಂಎಸ್ ಪದವಿ ಪಡೆದರೆ ಮಾತ್ರ ವೈದ್ಯರಾಗಲು ಅರ್ಹರಾಗಬಹುದಾದರೂ, ಕೆಲವರು ನರ್ಸಿಂಗ್ ಅಥವಾ ಫಾರ್ಮಸಿ ಕೋರ್ಸ್ಗಳನ್ನು ಮಾಡಿ, ಅಥವಾ ಅನುಭವಿ ವೈದ್ಯರ ಬಳಿ ಸಹಾಯಕರಾಗಿ ಕೆಲಸಮಾಡಿ, ರೋಗಲಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡು, ತಾವು ‘ಡಾಕ್ಟರ್’ ಎಂದು ಕರೆಸಿಕೊಂಡು ಗ್ರಾಮೀಣ ಭಾಗಗಳಲ್ಲಿ ಕ್ಲಿನಿಕ್ಗಳನ್ನು ತೆರೆದುಕೊಂಡಿದ್ದಾರೆ.
ಇಂತಹ ನಕಲಿ ವೈದ್ಯರು ಹಳ್ಳಿಗಳಲ್ಲಿ ಸ್ಕೆತಾಸ್ಕೋಪ್, ಇಂಜೆಕ್ಷನ್ ಟ್ಯೂಬ್, ಮಾತ್ರೆಗಳು ತುಂಬಿದ ಬ್ಯಾಗ್ಗಳೊಂದಿಗೆ ಮನೆ ಮನೆಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಕೆಲವು ವೇಳೆ ಅವರು ನೀಡುವ ಔಷಧಿಯಿಂದ ರೋಗಿಗಳು ತಕ್ಷಣ ಗುಣಮುಖರಾಗಿದ್ದರೂ, ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
ಸಣ್ಣ ಪುಟ್ಟ ಜ್ವರ, ಶೀತ, ಮೈಕೈ ನೋವುಗಳಿಗೂ ಬಲವಾದ ಔಷಧಿಗಳನ್ನು ನೀಡುವ ಈ ನಕಲಿ ವೈದ್ಯರು, ಅನೇಕ ಗ್ರಾಮೀಣ ಪ್ರದೇಶದ ಜನರಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಮೂಲವಾಗಿದ್ದಾರೆ. ಎಡವಟ್ಟಾಗಿ ನೀಡುವ ಔಷಧಿಗಳು ಕಿಡ್ನಿ, ಲಿವರ್, ಅಥವಾ ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ನಿಜವಾದ ಚಿಕಿತ್ಸೆ ದೊರಕುವಷ್ಟರಲ್ಲಿ ಬಹುತೇಕರು ಆತಂಕಕಾರಿ ಸ್ಥಿತಿಗೆ ತಲುಪುತ್ತಾರೆ.
ಮುನ್ನೆಚ್ಚರಿಕೆ
‘ವೈದ್ಯೋ ನಾರಾಯಣ ಹರಿ’ ಎನ್ನುವ ಭಾರತೀಯ ಪರಂಪರೆಗೂ ತಲ್ಲಣ ಉಂಟುಮಾಡುವಂತಿದೆ ಈ ನಕಲಿ ವೈದ್ಯರ ದೌರ್ಜನ್ಯ. ಇವರು ವೈದ್ಯಕೀಯ ಪದವಿ ಏನನ್ನೂ ತಿಳಿಯದೇ, ಔಷಧಿಗಳ ಹೆಸರನ್ನೂ ಸರಿಯಾಗಿ ಉಚ್ಛರಿಸದೆ, ಜನರ ಮೇಲೆ ಚಿಕಿತ್ಸಾ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ನಡೆಯಬೇಕಾಗಿದೆ.
ನಿಜವಾದ ವೈದ್ಯರನ್ನು ಗುರುತಿಸಲು ಸರಿಯಾದ ಪ್ರಮಾಣಪತ್ರಗಳ ತಪಾಸಣೆ ಮಾಡುವುದು, ಕ್ಲಿನಿಕ್ನ ನೋಂದಣಿ ಮತ್ತು ವೈದ್ಯರ ತಜ್ಞತಾ ಪ್ರಮಾಣ ಪತ್ರಗಳನ್ನು ಪರಿಶೀಲಿಸುವುದು ಅನಿವಾರ್ಯವಾಗಿದೆ. ಜೊತೆಗೆ ಸರ್ಕಾರ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ.