ಕೋಟಿ ಒಡೆಯನಾಗುವುದಕ್ಕಿಂತ ಒಬ್ಬ ಗುರುವಿನ ಗುಲಾಮನಾದರೆ ಸಾಕು ಬದುಕು ಪರಿಪೂರ್ಣ. ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದ ವರವಿಲ್ಲ ಮತ್ತು ಗುರುವಿಗಿಂತ ದೊಡ್ಡವರು ಮತ್ತೊಬ್ಬರಿಲ್ಲ. ಹೀಗೆ ಶಿಷ್ಯರ ಜೀವನವನ್ನ ಭಕ್ತರ ಭವಿಷ್ಯವನ್ನ ಉಜ್ವಲಗೊಳಿಸುತ್ತಿರುವ ಇಡೀ ಕರುನಾಡಿನ ಅಚ್ಚುಮೆಚ್ಚಿನ ಗುರುಗಳೆಂದ್ರೆ ಅದು ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳು. ಇಂತಹ ಗುರುಗಳಿಗೆ 60ನೇ ಜನ್ಮದಿನದ ಸಂಭ್ರಮ.
ಡಾ. ಪ್ರಕಾಶನಾಥ ಸ್ವಾಮೀಜಿಗಳ ಹುಟ್ಟುಹಬ್ಬದ ಪ್ರಯುಕ್ತ ಬಿಜಿಎಸ್ನಲ್ಲಿ ಹೋಮ ಹವನ ಮಾಡಲಾಯಿತು. ಹೋಮ ಹವನದಲ್ಲಿ ಅಪಾರ ಭಕ್ತರು ಭಾಗಿಯಾಗಿದ್ದರು. ಅಜ್ಞಾನವೆಂಬ ಕತ್ತಲೆಯನ್ನ ಓಡಿಸಿ ಜ್ಞಾನವೆಂಬ ಬೆಳಕು ನೀಡುವ ಮಾರ್ಗದರ್ಶಕನೇ ಗುರು. ಇಂತಹ ಅವಿಸ್ಮರಣೀಯ ಅಮೃತ ಘಳಿಗೆಯಲ್ಲಿ ಜಗ ಮೆಚ್ಚಿದ ಕರುನಾಡೇ ಅಪ್ಪಿದ ಗುರುಗಳ ಕುರಿತು ಒಂದಷ್ಟು ಒಳ್ಳೆಯ ವಿಚಾರಗಳನ್ನು ತಿಳಿಯಿರಿ.
ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ. ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶ್ರೀ ಜಗದ್ಗುರು ಬಾಲಗಂಗಾಧರನಾಥ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು. ತೂಕವಾದ ಮಾತು ಸರಳತೆಯಲ್ಲಿ ಮೇರು ವ್ಯಕ್ತಿತ್ವ ನಡೆನುಡಿಯಲ್ಲಿ ಶುದ್ಧತೆ ಕಾಯಕದಲ್ಲಿ ಬದ್ಧತೆ, ಆಚಾರ ವಿಚಾರದಲ್ಲಿ ಶ್ರೇಷ್ಠತೆ ಹೊಂದಿರುವ ಕಾಯಕಯೋಗಿ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ಅನ್ನೋ ತ್ರಿವಿಧ ಸೇವೆಗಳ ಸರದಾರ ಇವರು. ಶಿಕ್ಷಣ ಕ್ಷೇತ್ರದಲ್ಲಿ ಬಿಜಿಎಸ್ ಕರ್ನಾಟಕವಷ್ಟೇ ಅಲ್ಲ, ಭಾರತ ಹಾಗೂ ವಿದೇಶದಲ್ಲೂ ಖ್ಯಾತಿ ಪಡೆದಿದೆ ಅಂದ್ರೆ ಅದಕ್ಕೆ ಕಾರಣೀಭೂತರು ಡಾ. ಪ್ರಕಾಶನಾಥ ಸ್ವಾಮೀಜಿ ಅಂದ್ರೆ ಅತಿಶಯೋಕ್ತಿ ಅಲ್ಲ.
ಅತ್ಯಂತ ಸೂಕ್ಷ್ಮಜೀವಿಯೂ ಆಗಿರುವ ಡಾ. ಪ್ರಕಾಶನಾಥ ಸ್ವಾಮೀಜಿಯವರ ಮೂಲ ಶಿವಮೊಗ್ಗ ಜಿಲ್ಲೆಯ ಭದ್ರಾವತಿ. ಹೊನ್ನೇಗೌಡ, ಪಾರ್ವತಮ್ಮ ದಂಪತಿಯ ಮುದ್ದಿನ ಮಗನಾಗಿ ಜನ್ಮ ಪಡೆದ ಇವರ ಮೊದಲ ಹೆಸರು ಶೇಖರಪ್ಪ. ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು ಜಾಸ್ತಿ. ಹೀಗಾಗೇ ಹೊನ್ನೇಗೌಡ ದಂಪತಿ ತಮ್ಮ ಮಗ ಶೇಖರಪ್ಪನನ್ನ ಅಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಒಪ್ಪಿಸುತ್ತಾರೆ.
ಅನ್ನ, ಅಕ್ಷರ ಮತ್ತು ಆಶ್ರಯ ದಾಸೋಹಕ್ಕೆ ಖ್ಯಾತಿ ಪಡೆದಿದ್ದ ಕಾಲಭೈರವನ ಸನ್ನಿಧಿಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಸಾರುತ್ತಿದ್ದ ಇದೇ ಮಠಕ್ಕೆ ಬಂದೊಡೆನೇ ಶೇಖರಪ್ಪನ ಜ್ಞಾನ ಮತ್ತಷ್ಟು ವೃದ್ಧಿಯಾಯ್ತು. ವೇದ ಉಪನಿಷತ್ ನಲ್ಲಿ ನಿಪುಣನಾಗಿ ತುಂಬಾ ಉತ್ಸಾಹಿತನಾಗಿದ್ದ ಶೇಖರಪ್ಪಗೆ ಬಾಲಗಂಗಾಧರನಾಥ ಸ್ವಾಮೀಜಿಗಳು ಮನಸೋಲುತ್ತಾರೆ. ಶೇಖರಪ್ಪನ ಆಸಕ್ತಿಗೆ ತಕ್ಕಂತೆ ಜವಾಬ್ದಾರಿ ವಹಿಸುತ್ತಾ ಹೋಗುತ್ತಾರೆ. ಶೇಖರಪ್ಪ. ಪರಮಪೂಜ್ಯರೇ ನಿಬ್ಬೆರಗಾಗುವಂತೆ ತಮಗೆ ವಹಿಸಿದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅಗಾದ ಜ್ಞಾನಾರ್ಜನೆ ಹೊಂದಿದ್ದ ಶೇಖರಪ್ಪ, ಆದಿಚುಂಚನಗಿರಿ ಶ್ರೀಗಳ ಕೃಪೆಯಿಂದ ಪ್ರಕಾಶನಾಥ ಸ್ವಾಮೀಜಿ ಆಗಿ ಮರುನಾಮಾಂಕಿತರಾಗುತ್ತಾರೆ.
ಅಂದಿನಿಂದ ಇಂದಿನವರೆಗೂ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗ್ತಿದೆ. ಡಾ. ಪ್ರಕಾಶನಾಥ ಗುರೂಜಿಗಳ ಮುಂದಾಳತ್ವದಲ್ಲಿ BGS ಸಂಸ್ಥೆಯು ಕರ್ನಾಟಕದಾದ್ಯಂತ ಹಲವಾರು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಅಚ್ಚರಿ ಅಂದ್ರೆ ಬಿಜಿಎಸ್ ಗ್ರೂಪ್ ಮೆಡಿಕಲ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಸಂಸ್ಥೆಗಳನ್ನ ಹೊಂದಿದೆ. ಬೆಳ್ಳೂರಿನ ಏಮ್ಸ್, ಮೆಡಿಕಲ್ ಕಾಲೇಜು, ಗ್ಲೋಬಲ್ ನರ್ಸಿಂಗ್ ಕಾಲೇಜು, ಡೆಂಟಲ್ ಕಾಲೇಜು, ವೈದ್ಯಕೀಯ ವಿಜ್ಞಾನ ಕಾಲೇಜು, ಆರೋಗ್ಯ ವಿಜ್ಞಾನ ಕಾಲೇಜು, ನರ್ಸಿಂಗ್ ಕಾಲೇಜು, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಮ್ಯಾನೇಜ್ ಮೆಂಟ್ ಹಾಗೂ ವಿವಿಧೆಡೆ ಇರೋ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ಗಳು, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗಳು, ಬಿಜಿಎಸ್ ಪಿಯು ಕಾಲೇಜು.. ಹೇಳುತ್ತಾ ಹೋದ್ರೆ ಒಂದು ದೊಡ್ಡ ಪಟ್ಟಿಯೇ ಸಿಗುತ್ತೆ..
ಹೀಗೆ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸೋಕೆ ಬೆನ್ನೆಲುಬಾಗಿ ನಿಂತವರು ಡಾ. ಪ್ರಕಾಶನಾಥ ಸ್ವಾಮೀಜಿಗಳು. ಬಿಜಿಎಸ್ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕುಂಬಳಗೋಡು, ಕೆಂಗೇರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶಾಲವಾದ ಕ್ಯಾಂಪಸ್ ಹೊಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ.
ಇವತ್ತಿನ ಶ್ರೇಷ್ಠ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಬಿಜಿಎಸ್ ಬೆಸ್ಟ್ ಅನ್ನೋ ಮಾತು ಬರೋಕೆ ಕಾರಣ ಗುರುಗಳು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೂ ಆದ್ಯತೆ ಕೊಡಬೇಕು.. ಕರ್ನಾಟಕದ ಮೂಲೆ ಮೂಲೆಯಲ್ಲಿರೋ ಬಡ, ಮಧ್ಯಮವರ್ಗದವರಿಗೂ ಶಿಕ್ಷಣ ದೊರೆಯಬೇಕು.. ಕರುನಾಡಿನ ಸಂಸ್ಕೃತಿ, ಸಂಪ್ರದಾಯ ಎಲ್ಲೆಡೆ ಪಸರಿಸಬೇಕು ಅನ್ನೊ ಮೂಲ ಧ್ಯೇಯ ಹೊಂದಿರೋ ಶ್ರೀಗಳು ಇವತ್ತಿಗೂ ಕಾಲೇಜುಗಳ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದಾರೆ. ಶಿಕ್ಷಣದ ಜೊತೆ ಕ್ರೀಡೆ, ಸಂಸ್ಕಾರ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲೂ ಮಕ್ಕಳು ಪಾಂಡಿತ್ಯ ಪಡೆಯಬೇಕು ಅನ್ನೋ ಹೆಬ್ಬಯಕೆ ಹೊಂದಿದ್ದಾರೆ.
ವಿಜ್ಞಾನ ಎಷ್ಟೇ ಮುಂದುವರೆದ್ರೂ ನಮ್ಮ ಸಂಸ್ಕೃತಿ ಬಿಡಬಾರದೆಂಬ ಛಲ ಶ್ರೀಗಳದ್ದು. ಅದಕ್ಕಾಗಿಯೇ ಸಂಸ್ಕಾರ, ಸಂಸ್ಕೃತಿಗೆ ಮೊದಲ ಆದ್ಯತೆ ಇವರದ್ದು. ಇವರ ನಿರಂತರ ಸೇವೆ, ಅವಿರತ ಶ್ರಮದಿಂದಲೇ ಆದಿಚುಂಚನಗಿರಿ ಬರೀ ಭಕ್ತಿಯ ಕ್ಷೇತ್ರವಾಗದೇ ಶಿಕ್ಷಣ, ಆರೋಗ್ಯ ನೀಡುವ ವಿಶ್ವದ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಮೂಲ ಕಾರಣ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳು ಅನ್ನೋದೇ ಹೆಮ್ಮೆಯ ವಿಚಾರ.
