ಸಿಎಂ ಡಿ.ಕೆ ಶಿವಕುಮಾರ್ ನಿವಾಸದ ಪಕ್ಕದಲ್ಲೇ ವಾಮಾಚಾರ.!

Untitled design 2026 06 07T141127.852

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ನಿವಾಸದ ಪಕ್ಕದಲ್ಲೇ ವಾಮಾಚಾರ ನಡೆದಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಹಿಂಭಾಗದ ರಸ್ತೆಯ ಮಧ್ಯದಲ್ಲಿ ಅಪರಿಚಿತರು ಕೋಳಿ ಬಲಿ ನೀಡಿ, ರಕ್ತದಿಂದ ವೃತ್ತ ರಚಿಸಿದ್ದಾರೆ. ನಿಂಬೆಹಣ್ಣುಗಳನ್ನಿಟ್ಟು ಮಾಟ-ಮಂತ್ರದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದೆ.

ಸದಾಶಿವನಗರದ ಜಿಬಿಎ ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಿಎಂ ನಿವಾಸಕ್ಕೆ ಕೇವಲ 200 ಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಮಧ್ಯರಾತ್ರಿ ಅಥವಾ ಮುಂಜಾನೆ ವೇಳೆ ದುಷ್ಕರ್ಮಿಗಳು ಯಾರಿಗೂ ತಿಳಿಯದಂತೆ ಕೋಳಿಯನ್ನು ಕತ್ತರಿಸಿ, ರಕ್ತದಿಂದ ದೊಡ್ಡ ವೃತ್ತವನ್ನು ರಚಿಸಿದ್ದಾರೆ. ವೃತ್ತದ ಮಧ್ಯದಲ್ಲಿ ಕತ್ತರಿಸಿದ ಕೋಳಿಯ ಕಳೇಬರ, ಅದರ ತಲೆ ಮತ್ತು ನಿಂಬೆಹಣ್ಣುಗಳನ್ನು ಇರಿಸಲಾಗಿತ್ತು. ಸ್ಥಳದಲ್ಲಿ ರಕ್ತದ ಕಲೆಗಳು ಮತ್ತು ಬಲಿ ಕೊಟ್ಟ ಕೋಳಿಯ ಚೂರುಗಳು ಹರಡಿಕೊಂಡಿದ್ದು, ಈ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಸದಾ ಕಣ್ಗಾವಲು ಇರುವ ಮುಖ್ಯಮಂತ್ರಿಗಳ ನಿವಾಸದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಇದ್ದರೂ ಈ ಕೃತ್ಯ ನಡೆದಿರುವುದು ಅಚ್ಚರಿ ಮೂಡಿಸಿದೆ. ಸ್ಥಳೀಯರು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೀದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದರೂ, ಅಪರಿಚಿತರು ಹೇಗೆ ತಲೆಮರೆಸಿಕೊಂಡು ಈ ಘಟನೆ ನಡೆಸಿದರು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಕೋಳಿಯ ತಲೆ ಎಳೆದುಕೊಂಡು ಹೋದ ನಾಯಿ

ಬೆಳಿಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಕತ್ತರಿಸಿದ ಕೋಳಿಯ ತಲೆಯನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ. 

ಪೊಲೀಸರ ಕ್ರಮ

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ. 

Exit mobile version