ಸಿಎಂ ಕುರ್ಚಿ ಪೈಪೋಟಿ: ದೆಹಲಿಗೆ ಹೋಗುತ್ತೇನೆ ಎಂದ ಡಿ.ಕೆ ಶಿವಕುಮಾರ್‌‌

Untitled design 2025 11 28T152953.650

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಸಮರ ಇದೀಗ ತಾರಕಕ್ಕೇರಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಅವರನ್ನು ಇನ್ನೂ ಐದು ವರ್ಷ ಮುಂದುವರಿಸಬೇಕೆಂಬ ಒತ್ತಡ, ಮತ್ತೊಂದೆಡೆ ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರನ್ನು ಕುರ್ಚಿಗೇರಿಸಬೇಕೆಂದು ಒತ್ತಾಯ. ಈ ಎರಡೂ ಗುಂಪುಗಳ ನಡುವೆ ರಾಜ್ಯ ರಾಜಕಾರಣ ರೊಚ್ಚಾಟಕ್ಕೆ ತಿರುಗಿದೆ. ಈ ಎಲ್ಲಾ ಗದ್ದಲದ ಮಧ್ಯೆ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳುತ್ತಿರುವುದಾಗಿ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನಾನು ದೆಹಲಿಗೆ ಹೋಗುತ್ತೇನೆ. ದೆಹಲಿ ನಮಗೆ ದೇವಸ್ಥಾನದಂತೆ. ಹೈಕಮಾಂಡ್ ಕರೆದಾಗ ನಾನು ಯಾವಾಗಲೂ ದೆಹಲಿಗೆ ಹೋಗಿಯೇ ಹೋಗುತ್ತೇನೆ. ನಮ್ಮ ಹಿರಿಯ ನಾಯಕರು ಕರೆದರೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ದೆಹಲಿಗೆ ತೆರಳುತ್ತೇವೆ. ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಕುರ್ಚಿ ಫೈಟ್‌ನಲ್ಲಿ ಕ್ಷಣಕ್ಕೊಂದು ಟ್ವಿಸ್ಟ್: ಅಣ್ಣನ ಪರ ಅಖಾಡಕ್ಕಿಳಿದ ಡಿ.ಕೆ. ಸುರೇಶ್-ದೆಹಲಿಗೆ ತುರ್ತು ಪಯಣ !

ಬೆಂಗಳೂರು, ನವೆಂಬರ್ 28, 2025: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಸುತ್ತಾ ನಡೆಯುತ್ತಿರುವ ಹೈವೋಲ್ಟೇಜ್ ರಾಜಕೀಯ ಕಾವು ಇಂದು ಇನ್ನಷ್ಟು ತೀವ್ರಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ಅಣ್ಣನ ಪರವಾಗಿ ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ಹೊರಟಿದ್ದಾರೆ.

ದೆಹಲಿಯ ಹೈಕಮಾಂಡ್‌ನಿಂದ ಯಾವುದೇ ಕ್ಷಣದಲ್ಲೂ ದಿಲ್ಲಿಗೆ ಬನ್ನಿ ಎಂಬ ಬುಲಾವ್ ಬರುವ ಸಾಧ್ಯತೆ ಇದ್ದಂತೆಯೇ ಡಿ.ಕೆ. ಸುರೇಶ್ ಅವರು ಕಾಯದೆ ತುರ್ತಾಗಿ ರಾಜಧಾನಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ, ಇಂದು ಸಂಜೆಯೇ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ನಿರ್ಣಾಯಕ ಸಭೆ ನಡೆಯಲಿದೆ.

ಕಳೆದ ಎರಡು ದಿನಗಳಿಂದ ಸಿಎಂ ಕುರ್ಚಿ ಸುತ್ತ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತಾರಕಕ್ಕೇರಿವೆ. ಸಿದ್ದರಾಮಯ್ಯ ಅವರನ್ನು ತೆರವುಗೊಳಿಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಡಿ.ಕೆ. ಶಿವಕುಮಾರ್ ಬೆಂಬಲಿಗರು ಒತ್ತಡ ಹೇರಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬೆಂಬಲಿಗರು ಈಗಲೇ ಬದಲಾವಣೆ ಬೇಡ ಎಂದು ವಾದಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮೊನ್ನೆಯಷ್ಟೇ ಡಿ.ಕೆ. ಸುರೇಶ್ ಅವರು ನಾನು ಮಾತು ಕೊಟ್ಟಂತೆ ನಡೆಯುತ್ತೇನೆ, ಅಣ್ಣನಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಇಂದು ಆ ಮಾತನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಏನು ನಿರ್ಧರಿಸುತ್ತಾರೋ ಅದೇ ಅಂತಿಮ. ಆದರೆ ನನ್ನ ಅಣ್ಣನ ಕೊಡುಗೆಯನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಿದ್ದು ಡಿ.ಕೆ. ಶಿವಕುಮಾರ್. ಅವರಿಗೆ ಸೂಕ್ತ ಗೌರವ ಸಿಗಬೇಕು ಎಂದು ಸ್ಪಷ್ಟಪಡಿಸಿದರು.

ಇಂದಿನ ಸಭೆಯಲ್ಲಿ ಸಿಎಂ ಬದಲಾವಣೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡುವುದು, ಸಿದ್ದರಾಮಯ್ಯ ಅವರನ್ನು ಇನ್ನೂ ಕೆಲವು ತಿಂಗಳು ಮುಂದುವರಿಸುವುದು, ಅಥವಾ ಎರಡೂ ಗುಂಪುಗಳನ್ನು ಸಮಾಧಾನಪಡಿಸುವ ಮಧ್ಯಮ ಮಾರ್ಗ ಹೀಗೆ ಯಾವುದಾದರೂ ಒಂದು ತೀರ್ಮಾನ ಇಂದು ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಉತ್ಸಾಹದಲ್ಲಿದ್ದಾರೆ. ಅಣ್ಣನಿಗೆ ನ್ಯಾಯ ದೊರೆಯುತ್ತದೆ, ಸುರೇಶ್ ಅವರು ದೆಹಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಒಬ್ಬ ಶಾಸಕರು ಹೇಳಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಬೆಂಬಲಿಗರು ಶಾಂತವಾಗಿದ್ದಾರೆ. ಹೈಕಮಾಂಡ್ ಏನು ನಿರ್ಧರಿಸುತ್ತದೋ ಅದನ್ನು ಒಪ್ಪುತ್ತೇವೆ ಎಂಬುದು ಅವರ ನಿಲುವು.

ಕರ್ನಾಟಕ ಕಾಂಗ್ರೆಸ್‌ನ ಭವಿಷ್ಯ ಇಂದು ದೆಹಲಿಯ ಒಂದು ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ. ಕುರ್ಚಿ ಫೈಟ್‌ನಲ್ಲಿ ಡಿ.ಕೆ. ಸುರೇಶ್ ಅವರ ದೆಹಲಿ ಪಯಣ ಇದೀಗ ಎಲ್ಲರ ಗಮನ ಸೆಳೆದಿದೆ.

Exit mobile version