ನನಗೋಸ್ಕರ ಯಾರೂ ದೆಹಲಿಗೆ ಹೋಗಬೇಡಿ: ಶಾಸಕರ ‘ಡಿನ್ನರ್ ಪಾಲಿಟಿಕ್ಸ್’ಗೆ ಡಿಕೆಶಿ ಫುಲ್ ಸ್ಟಾಪ್!

Untitled design 2026 02 27T215513.453

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಆಂತರಿಕ ಚರ್ಚೆಗಳು ಬಿರುಸಾಗಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ನನಗೋಸ್ಕರ ಅಥವಾ ನನ್ನ ಪರವಾಗಿ ಮನವಿ ಮಾಡಲು ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಹೇಳುವ ಮೂಲಕ ಶಾಸಕರ ಬಣ ರಾಜಕೀಯಕ್ಕೆ ಅವರು ಕಡಿವಾಣ ಹಾಕಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ಹಾಗೂ ಅರಮನೆ ಮೈದಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಗುರುವಾರ ನಡೆದ ಸಚಿವರು ಮತ್ತು ಶಾಸಕರ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರು ದೆಹಲಿಗೆ ಹೋಗಿ ನನ್ನ ಪರವಾಗಿ ಹೈಕಮಾಂಡ್‌ಗೆ ಮನವಿ ಮಾಡುತ್ತಾರೆ ಎಂಬ ಮಾಹಿತಿ ನನಗಿಲ್ಲ. ದಯವಿಟ್ಟು ನನ್ನ ವಿಚಾರಕ್ಕಾಗಿ ಯಾರೂ ದೆಹಲಿಗೆ ಹೋಗಬೇಡಿ ಎಂದು ಮನವಿ ಮಾಡುತ್ತೇನೆ. ಒಂದು ವೇಳೆ ನಿಮಗೆ ಸಚಿವ ಸ್ಥಾನದ ಆಕಾಂಕ್ಷೆಯಿದ್ದರೆ ಅಥವಾ ಅಧಿಕಾರ, ಹುದ್ದೆ ಬೇಕಿದ್ದರೆ ಹೋಗಿ ಕೇಳಿಕೊಳ್ಳಿ, ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜನ್ಮದಿನದ ನಿಮಿತ್ತ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದು ಶಕ್ತಿ ಪ್ರದರ್ಶನ ಎಂಬ ಚರ್ಚೆಯನ್ನು ಡಿಕೆಶಿ ತಳ್ಳಿಹಾಕಿದರು. ಯಾವ ಶಕ್ತಿ ಪ್ರದರ್ಶನವೂ ನಡೆದಿಲ್ಲ. ಶಾಸಕರು ಕೆಲವೊಮ್ಮೆ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ, ಕೆಲವೊಮ್ಮೆ ದೆಹಲಿಗೆ ಹೋಗುತ್ತಾರೆ ಅಥವಾ ಹೀಗೆ ಊಟಕ್ಕೆ ಸೇರುತ್ತಾರೆ. ಇವೆಲ್ಲವೂ ಅವರ ವೈಯಕ್ತಿಕ ವಿಚಾರಗಳು, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನೀವು ಸಿಎಂ ಆಗಬೇಕು ಎಂದು ಶಾಸಕರು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಯಾರೂ ನನ್ನ ಬಳಿ ಮಾತನಾಡಿಲ್ಲ. ಆದರೆ, ಹೊಸ ಶಾಸಕರಿಗೆ ಮಂತ್ರಿಗಳಾಗಬೇಕು ಎಂಬ ಆಸೆ ಇರುವುದು ಸಹಜ. ನಾನು, ಸಿದ್ದರಾಮಯ್ಯ, ಪರಮೇಶ್ವರ್, ಎಚ್.ಕೆ. ಪಾಟೀಲ್ ನಾವೆಲ್ಲಾ ಹಳಬರಾದೆವು, ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಳಾದವರು. ಈಗ ಹೊಸಬರಿಗೆ ಅವಕಾಶ ಬೇಕು ಎಂಬ ಬೇಡಿಕೆಯನ್ನು ನಾನು ದೆಹಲಿ ನಾಯಕರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಈಗಾಗಲೇ ದೆಹಲಿಗೆ ಭೇಟಿ ನೀಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಬಂದಿರುವ ಡಿಕೆಶಿ, ಸದ್ಯಕ್ಕೆ ರಾಜ್ಯ ರಾಜಕಾರಣದ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ನೀಡಲು ಪ್ರಯತ್ನಿಸಿದ್ದಾರೆ.

Exit mobile version