ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್ ಅಮಾನತು

Untitled design 2025 10 27t161852.779

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಚ್.ಬಿ. ಸುನೀಲ್ ಅವರ ಮೇಲೆ ಗಂಭೀರ ಅತ್ಯಾಚಾರ ಮತ್ತು ಮೋಸದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.

ಇನ್‌ಸ್ಪೆಕ್ಟರ್ ಸುನೀಲ್ ಹಾಗೂ ಸಹಾಯಕ ಉಪನಿರೀಕ್ಷಕ (ಎಎಸ್‌ಐ) ಪ್ರಕಾಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯು ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

36 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಕಳೆದ ಒಂದೂವರೆ ವರ್ಷಗಳಿಂದ ಸುನೀಲ್ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರು ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಡಿಜೆ ಹಳ್ಳಿ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿಯೇ ಇನ್‌ಸ್ಪೆಕ್ಟರ್ ಸುನೀಲ್ ಅವರನ್ನು ಭೇಟಿಯಾದರು. ದೂರನ್ನು ಪರಿಹರಿಸುವ ನೆಪದಲ್ಲಿ ಸುನೀಲ್ ಅವರು ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡರು. ನಂತರ ವಾಟ್ಸ್‌ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರು.

ಮಹಿಳೆಯ ದೂರಿನ ಪ್ರಕಾರ, ಸುನೀಲ್ ಅವರು ತಮ್ಮ ಹೆಂಡತಿ ಹೊರಗಡೆ ಇದ್ದಾಗ ಮನೆಗೆ ಕರೆದರು. “ನಾನು ಒಂಟಿಯಾಗಿದ್ದೇನೆ, ಬಾ” ಎಂದು ಹೇಳಿ ಆಹ್ವಾನಿಸಿದರು. ನಂತರ ಹೋಟೆಲ್ ಕೋಣೆಯನ್ನು ಬುಕ್ ಮಾಡಿ ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಮದ್ಯವನ್ನು ನೀಡಿ, ಮದುವೆಯಾಗುವ ಭರವಸೆ ನೀಡಿದರು. “ನಾವು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ. ನೀನು ಎಲ್ಲಿಯೂ ಹೋಗಬೇಕಿಲ್ಲ. ನಾವು ಫ್ಲ್ಯಾಟ್ ಪಡೆದು ಇಲ್ಲಿಯೇ ಇರೋಣ” ಎಂದು ಭರವಸೆ ನೀಡಿದರು. ಅಲ್ಲದೆ, ಬ್ಯೂಟಿ ಪಾರ್ಲರ್ ತೆರೆಯಲು ಸಹಾಯ ಮಾಡುತ್ತೇನೆ, ವ್ಯವಸಾಯಕ್ಕೆ ಹಣ ನೀಡುತ್ತೇನೆ ಎಂದು ಹೇಳಿದರು. ಆದರೆ, ಮಹಿಳೆಯು ಸೂಚಿಸಿದ ಫ್ಲ್ಯಾಟ್‌ಗಳನ್ನು ತಿರಸ್ಕರಿಸುತ್ತಾ ಹೋದರು. ಈ ರೀತಿ ಕಳೆದ ಒಂದು ವರ್ಷದಿಂದ ಮನೆ, ಹೋಟೆಲ್‌ಗಳಲ್ಲಿ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದರು ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ, ಸುನೀಲ್ ಅವರು ಮಹಿಳೆಯ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದರು. “ಈ ಸಂಬಂಧದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದುಬಿಡುತ್ತೇನೆ” ಎಂದು ಬೆದರಿಕೆ ಹಾಕಿದರು. ಮಹಿಳೆಯು ಇತರರೊಂದಿಗೆ ಸಂಪರ್ಕ ಹೊಂದದಂತೆ ಆದೇಶಿಸಿದರು. ಈ ದೌರ್ಜನ್ಯಕ್ಕೆ ಸಹಕರಿಸಿದ್ದಕ್ಕಾಗಿ ಎಎಸ್‌ಐ ಪ್ರಕಾಶ್ ಅವರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊನೆಗೆ, ಸುನೀಲ್ ಅವರು ತನ್ನನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಮಹಿಳೆಯು ಅಕ್ಟೋಬರ್ 21, ರಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಗೆ ದೂರು ಸಲ್ಲಿಸಿದರು. ದೂರಿನಲ್ಲಿ ಎಲ್ಲಾ ವಿವರಗಳನ್ನು ನೀಡಿ ನ್ಯಾಯ ಕೋರಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯು ತಕ್ಷಣ ಕ್ರಮ ಕೈಗೊಂಡಿತು. ಅಕ್ಟೋಬರ್ 22 ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತು. ನಂತರ ಅಕ್ಟೋಬರ್ 27 ರೊಳಗೆ ಇನ್‌ಸ್ಪೆಕ್ಟರ್ ಸುನೀಲ್ ಮತ್ತು ಎಎಸ್‌ಐ ಪ್ರಕಾಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಯಿತು.

Exit mobile version