ಹೆಂಡತಿ ದಪ್ಪ ಇದ್ದಾಳೆಂದು ಕತ್ತು ಹಿಸುಕಿ ಕೊಂದ ಪಾಪಿ ಪತಿ

ಧಾರವಾಡ, ಜುಲೈ 01: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಘೋರ ಘಟನೆಯೊಂದು ನಡೆದಿದೆ. ಪತಿಯೊಬ್ಬ ತನ್ನ ಪತ್ನಿ ‘ದಪ್ಪ’ವಾಗಿದ್ದಾಳೆ ಎಂದು ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಆತನನ್ನು ಮತ್ತು ಆತನ ನಾಲ್ವರು ಕುಟುಂಬಸ್ಥರನ್ನು ಬಂಧಿಸಿದ್ದಾರೆ.

ಮೃತೆ ಮತ್ತು ಆರೋಪಿಗಳ ವಿವರ

ಮೃತ ಮಹಿಳೆಯನ್ನು ಪ್ರಿಯಾಂಕ ಕಮಲಾಕರ್ (29) ಎಂದು ಗುರುತಿಸಲಾಗಿದ್ದು, ಆಕೆಯು ಸುಮಾರು ಒಂದು ವರ್ಷದ ಹಿಂದೆ (2024) ಬಸವರಾಜ್ ವಡ್ಡರ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಮದುವೆಯಾದ ಸ್ವಲ್ಪ ದಿನಗಳಲ್ಲೇ ಆಕೆಯ ಮೇಲೆ ಹಲ್ಲೆ ಮಾಡಲಾಗಿತ್ತು.

ಕಿರುಕುಳದ ಹಿಂದಿನ ಕಾರಣ

ಮಾಹಿತಿಯ ಪ್ರಕಾರ, ಆರೋಪಿ ಬಸವರಾಜ್ ಪ್ರಿಯಾಂಕಳ ತವರು ಮನೆಯಿಂದ ಚಿನ್ನಾಭರಣಗಳು ಮತ್ತು ಹಣವನ್ನು ತರುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಜೊತೆಗೆ, ಆಕೆಯ ದೇಹದ ಬಗ್ಗೆ ಅವಮಾನಕರವಾದ ಮಾತುಗಳನ್ನಾಡುತ್ತಾ, “ನೀನು ತುಂಬಾ ದಪ್ಪವಾಗಿದ್ದೀಯ, ನಿನಗೆ ಗರ್ಭಿಣಿಯಾಗುವ ಸಾಮರ್ಥ್ಯವೇ ಇಲ್ಲ” ಎಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಇದು ಆಕೆಯ ಹತ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ವಿವರ:

ಕಳೆದ ಸೋಮವಾರ ರಾತ್ರಿ ಇದೇ ವಿಷಯದಲ್ಲಿ ದಂಪತಿ ನಡುವೆ ಗಲಾಟೆಯಾಗಿದೆ. ನಂತರ, ಆರೋಪಿ ಬಸವರಾಜ್ ತನ್ನ ಪತ್ನಿ ಪ್ರಿಯಾಂಕಳ ಕತ್ತನ್ನು ಹಿಸುಕಿ ಹತ್ಯೆ ಮಾಡಿದ್ದಾನೆ. ಘಟನೆಯ ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಿಯಾಂಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕುಟುಂಬದ ಪಾತ್ರ ಮತ್ತು ಬಂಧನ

ಈ ಹತ್ಯೆಯಲ್ಲಿ ಆರೋಪಿಯ ಜೊತೆಗೆ ಅವನ ತಂದೆ ಸುಭಾಷ್, ತಾಯಿ ರೇಣವ್ವ, ಮತ್ತು ಸಹೋದರ ಸಿದ್ದರಾಮೇಶ್ ಕೂಡ ಪಾತ್ರವಹಿಸಿರುವ ಶಂಕೆಯಿದೆ. ಪತ್ನಿಗೆ ಕಿರುಕುಳ ನೀಡುವಲ್ಲಿ ಮತ್ತು ಒತ್ತಡ ಹೇರುವಲ್ಲಿ ಇವರೂ ಸಹಕರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇವರೆಲ್ಲರನ್ನು ವಿಚಾರಣೆಗಾಗಿ ಬಂಧಿಸಲಾಗಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತಿ ಬಸವರಾಜ್ ಕೂಡ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

 

Exit mobile version