ಸಿಎಂ ಆದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಡಿಕೆಶಿ ಭೇಟಿ: ಅದ್ದೂರಿ ಸ್ವಾಗತಕ್ಕೆ ಸಜ್ಜಾದ ಜನತೆ

Untitled design 2026 06 07T105215.033

ಕನಕಪುರ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ಇಂದು (ಜೂನ್ 7) ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುತ್ತಿದ್ದಾರೆ. ನೂತನ ಸಿಎಂ ಆಗಿ ಆಯ್ಕೆಯಾದ ಹಿನ್ನೆಲೆ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಅವರು ಇಂದು ದಿನವಿಡೀ ‘ಕೃತಜ್ಞತಾ ಸಮರ್ಪಣಾ ಪ್ರವಾಸ’ ಹಮ್ಮಿಕೊಂಡಿದ್ದಾರೆ.

ಮುಖ್ಯಮಂತ್ರಿಗಳಾಗಿ ಮೊದಲ ಬಾರಿ ಮನೆಗೆ ಬರುತ್ತಿರುವ ನೆಚ್ಚಿನ ನಾಯಕನನ್ನು ಅತ್ಯಂತ ಅದ್ದೂರಿಯಾಗಿ ಬರಮಾಡಿಕೊಳ್ಳಲು ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರಸ್ತೆ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ರಸ್ತೆ ಮಾರ್ಗವಾಗಿ ಹಾರೋಹಳ್ಳಿ ಸರ್ಕಲ್ ಗೆ ಆಗಮಿಸಲಿದ್ದಾರೆ. ಈ ವೇಳೆ ವಿವಿಧ ಜನಪದ ಕಲಾ ತಂಡಗಳ ಭವ್ಯ ಪ್ರದರ್ಶನದೊಂದಿಗೆ ಅವರಿಗೆ ಸಾಂಪ್ರದಾಯಿಕ ಹಾಗೂ ಅತ್ಯಂತ ಅದ್ದೂರಿ ಸ್ವಾಗತ ಸಿಗಲಿದೆ. ಅಲ್ಲಿಂದ ನೇರವಾಗಿ ಪ್ರಸಿದ್ಧ ಕೋಟೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿರುವ ಸಿಎಂ, ಬಳಿಕ ತೆರೆದ ವಾಹನದಲ್ಲಿ ಬೆಂಗಳೂರು ರಸ್ತೆಯ ಉದ್ದಕ್ಕೂ ಹಾರೋಹಳ್ಳಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಆರಂಭಿಸಲಿದ್ದಾರೆ.

ಗ್ರಾಮ ಗ್ರಾಮಕ್ಕೆ ಭೇಟಿ
ಬೃಹತ್ ರೋಡ್ ಶೋ ಮೂಲಕ ಕ್ಷೇತ್ರದ ಹಳ್ಳಿಹಳ್ಳಿಗೆ ತೆರಳಲಿರುವ ಡಿ.ಕೆ. ಶಿವಕುಮಾರ್ ಅವರು ಪ್ರತಿಯೊಬ್ಬ ಮತದಾರರಿಗೂ ಧನ್ಯವಾದ ತಿಳಿಸಲಿದ್ದಾರೆ. ಈ ರೋಡ್ ಶೋ ಕನಕಪುರ ತಾಲೂಕಿನ ತುಂಗಣಿ, ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ ಮತ್ತು ಹುಣಸನಹಳ್ಳಿ ಮುಖಾಂತರ ಸಾಗಲಿದೆ. ಅಲ್ಲಿಂದ ಮುಂದೆ ಹೊಸದುರ್ಗ ಗ್ರಾಮಕ್ಕೆ ತೆರಳಲಿದ್ದು, ಮಧ್ಯಾಹ್ನ ಕೋಡಿಹಳ್ಳಿ ಗ್ರಾಮದಲ್ಲಿ ಭೋಜನದ ವಿರಾಮ ಇರಲಿದೆ.

ಹುಟ್ಟೂರಿನಲ್ಲಿ ವಿಶೇಷ ಕಾರ್ಯಕ್ರಮ
ಊಟದ ಬಳಿಕ ಮತ್ತೆ ರೋಡ್ ಶೋ ಮುಂದುವರಿಯಲಿದ್ದು, ಹೂಕುಂದ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡಾಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್ ಮತ್ತು ಸೋಮದ್ಯಾಪನಹಳ್ಳಿ ಗ್ರಾಮಗಳನ್ನು ಸಿಎಂ ತಲುಪಲಿದ್ದಾರೆ. ಸಂಜೆ 4 ಗಂಟೆಗೆ ಅವರ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ರೋಡ್ ಶೋ ನಡೆಯಲಿದೆ. ಸಂಜೆ 7 ಗಂಟೆಯ ವೇಳೆಗೆ ಕನಕಪುರದ ಹಳೆ ಪೊಲೀಸ್ ಸ್ಟೇಷನ್ ಸರ್ಕಲ್ ಹಾಗೂ ಮೇಗಳ ಬೀದಿ ಮುಖಾಂತರ ರೋಡ್ ಶೋ ಕನಕಪುರ ಟೌನ್ ಪ್ರವೇಶಿಸಲಿದೆ.

ಭಾಷಣ ಮತ್ತು ಕೃತಜ್ಞತೆ
ಪ್ರವಾಸದ ಹಾದಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಮುಖ ಕಡೆಗಳಲ್ಲಿ ಅರ್ಧಗಂಟೆಗಳ ಕಾಲ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ರಾತ್ರಿ 8 ಗಂಟೆಗೆ ಕನಕಪುರ ಟೌನ್‌ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಅವರು ಪ್ರಮುಖವಾಗಿ ಮಾತನಾಡಲಿದ್ದಾರೆ. ಕಗ್ಗಲಿಪುರ ಸರ್ಕಲ್ ನಲ್ಲಿ ಮುಂಜಾನೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದು, ಸಿಎಂಗೆ ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.

ಬಿಗಿ ಭದ್ರತೆ
ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಇಡೀ ಕನಕಪುರ ಕ್ಷೇತ್ರಾದ್ಯಂತ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಯಾವುದೇ ಲೋಪವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಆಗಮಿಸುತ್ತಿರುವ ಡಿಕೆಶಿ ಅವರನ್ನು ಸ್ವಾಗತಿಸಲು ಕನಕಪುರವೇ ಕಂಗೊಳಿಸುತ್ತಿದೆ.

Exit mobile version