ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ

ಚಿತ್ರದುರ್ಗ, ಆಗಸ್ಟ್ 16: ಕಾವಿ ವಸ್ತ್ರ (Kavi Vastra) ಧರಿಸಿ ಆಧ್ಯಾತ್ಮದ ಹೆಸರಿನಲ್ಲಿ ಕಳ್ಳಾಟವಾಡುತ್ತಿದ್ದ ಸ್ವಾಮೀಜಿಯೊಬ್ಬನ ಅಸಲಿ ಮುಖ ಇದೀಗ ಬಯಲಾಗಿದೆ. ಮಠಕ್ಕೆ ಭೇಟಿ ನೀಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೆ, ಆಕೆಯ ಪುತ್ರಿಯ ಜೊತೆಯೂ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ತಿಳಿದ ಮಹಿಳೆಯ ಕುಟುಂಬಸ್ಥರು ಸ್ವಾಮೀಜಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿರುವ ಪ್ರಪ್ರಥಮ ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಯ ಜಂಭಣ್ಣ ತಾತನ ಮಠದ ಸ್ವಾಮೀಜಿ ವೆಂಕಟೇಶ ತಾತ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ‘

ಮಠಕ್ಕೆ ಶ್ರದ್ಧೆಯಿಂದ ಭೇಟಿ ನೀಡುತ್ತಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯನ್ನು ಪುಸಲಾಯಿಸಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದೆ, ಮಠಕ್ಕೆ ತನ್ನ ಜೊತೆಯಲ್ಲಿ ಬರುತ್ತಿದ್ದ ಆಕೆಯ ಮಗಳ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಸಿನಿಮಾ ಸ್ಟೈಲ್ನಲ್ಲಿ ಮಠಕ್ಕೆ ನುಗ್ಗಿ ಥಳಿತ, ಕಿಡ್ನಾಪ್!

ಸ್ವಾಮೀಜಿಯ ಈ ಕಾಮಕಾಂಡದ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ನೇರವಾಗಿ ತಮ್ಮೇನಹಳ್ಳಿಯ ಮಠಕ್ಕೆ ನುಗ್ಗಿದ್ದಾರೆ. ತಮ್ಮ ಕುಟುಂಬದ ಮಹಿಳೆಯರ ಘನತೆಯನ್ನು ಹಾಳುಮಾಡಿದ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬಳಿಕ ಸಿನಿಮಾ ಶೈಲಿಯಲ್ಲಿ ಸ್ವಾಮೀಜಿಯ ಕೈ-ಕಾಲುಗಳನ್ನು ಹಿಡಿದುಕೊಂಡು ಬಲವಂತವಾಗಿ ಕಾರಿನಲ್ಲಿ ಎತ್ತಿಕೊಂಡು ಹೋಗಿದ್ದಾರೆ. ಆಕ್ರೋಶಿತ ಕುಟುಂಬಸ್ಥರು ಸ್ವಾಮೀಜಿಯನ್ನು ಎಲ್ಲಿಗೆ ಕರೆದೊಯ್ದಿದ್ದಾರೆಂಬುದು ಇನ್ನೂ ತಿಳಿದುಬಂದಿಲ್ಲ. 

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಸ್ವಾಮೀಜಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕಳೆದ 15 ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. 

ವಿಡಿಯೋದಲ್ಲಿ ಸ್ವಾಮೀಜಿಯನ್ನು ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ, ಬಲವಂತವಾಗಿ ಕಾರಿನಲ್ಲಿ ತಳ್ಳಲಾಗುತ್ತಿರುವ ದೃಶ್ಯಗಳು ಕಂಡುಬರುತ್ತವೆ. ಕೆಲವು ವಿಡಿಯೋಗಳಲ್ಲಿ ಸ್ವಾಮೀಜಿ ನೆಲಕ್ಕೆ ಬಿದ್ದು, ಮೊರೆಯಿಡುತ್ತಿರುವ ದೃಶ್ಯವೂ ಇದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸ್ವಾಮೀಜಿ ವೆಂಕಟೇಶ ತಾತ ನಾಪತ್ತೆ

ಘಟನೆ ನಡೆದ ನಂತರ ವೆಂಕಟೇಶ ತಾತ ಸ್ವಾಮೀಜಿ ಸಂಪೂರ್ಣವಾಗಿ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಕುಟುಂಬಸ್ಥರು ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ, ಅವರ ಸ್ಥಿತಿ ಏನು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಪೊಲೀಸ್ ತನಿಖೆ ಆರಂಭ

ಈ ಘಟನೆಯು ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಸ್ವಾಮೀಜಿ ನಾಪತ್ತೆಯಾಗಿರುವುದರಿಂದ ಹಾಗೂ ಆತನ ವಿರುದ್ಧ ಅನೈತಿಕ ಸಂಬಂಧದ ಆರೋಪವಿರುವುದರಿಂದ ಪೊಲೀಸರು ಎರಡೂ ಕಡೆಗಳ ತನಿಖೆ ನಡೆಸುತ್ತಿದ್ದಾರೆ.

 

Exit mobile version