ಸಿಲಿಕಾನ್‌ ಸಿಟಿ ಕ್ರಿಕೆಟ್‌ ಪ್ರೇಮಿಗಳಿಗೆ ಮತ್ತೆ ನಿರಾಸೆ: ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಅನುಮತಿ ನೀಡದ ಪೊಲೀಸರು

Untitled design (94)

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ನಿರಾಸೆಯಾಗಿದೆ. ನಾಳೆ (ಬುಧವಾರ) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿಯಬೇಕಿದ್ದ ಈ ಪಂದ್ಯಕ್ಕೆ ಬ್ರೇಕ್‌ ಹಾಕಿದ್ದಾರೆ ಬೆಂಗಳೂರು ಪೊಲೀಸರು.

ಭದ್ರತಾ ಪರಿಶೀಲನೆ ಮತ್ತು ಪೊಲೀಸರ ಆತಂಕ

ಸೋಮವಾರ ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗನವನ್ನ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಸುರಕ್ಷತಾ ಮಾನದಂಡಗಳ ಬಗ್ಗೆ ವರದಿ ಸಲ್ಲಿಸಿದ್ದರು. ಈ ವರದಿಗಳನ್ನು ಆಧರಿಸಿ, ಪ್ರಸ್ತುತ ಕ್ರೀಡಾಂಗಣವು ದೊಡ್ಡ ಮಟ್ಟದ ಜನಸಂದಣಿಯನ್ನು ನಿಭಾಯಿಸಲು ಸಿದ್ಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿರುವುದರಿಂದ, ಸ್ಟೇಡಿಯಂ ಹೊರಭಾಗದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸುವ ಸಾಧ್ಯತೆಯಿದೆ. ಇದನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಲಿದೆ. ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಸುರಕ್ಷತೆಯ ವಿಷಯದಲ್ಲಿ ಸರ್ಕಾರ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಕ್ರೀಡಾಂಗಣದ ಗೇಟ್‌ಗಳು ಕಿರಿದಾಗಿರುವುದು ಮತ್ತು ಜನರ ಸಂಚಾರಕ್ಕೆ ಪೂರಕವಾದ ವಾತಾವರಣ ಇಲ್ಲ. ಹೀಗಾಗಿ ಗೇಟ್ ಅಗಲೀಕರಣವಾಗುವವರೆಗೆ ಅನುಮತಿ ನೀಡುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಸಿಎ ಮನವಿ ಮತ್ತು ಪರಮೇಶ್ವರ್ ಭೇಟಿ

ಪಂದ್ಯವನ್ನು ರದ್ದುಗೊಳಿಸುವುದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕನಿಷ್ಠ ಪಕ್ಷ ಪ್ರೇಕ್ಷಕರಿಲ್ಲದೆ ಪಂದ್ಯ ಆಯೋಜಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಸ್ಟೇಡಿಯಂ ಹೊರಗಿನ ಭದ್ರತೆಯ ದೃಷ್ಟಿಯಿಂದ ಈ ಬಗ್ಗೆ ಸಚಿವ ಜಿ. ಪರಮೇಶ್ವರ್ ಏನು ಪ್ರತಿಕ್ರೆಯೆ ನೀಡಿಲ್ಲವದರೂ ಮುಂದಿನ ಕ್ರಮ ಏನು, ಪರಮೇಶ್ವರ್‌ ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ. ಸದ್ಯ ಈ ನಿರ್ಧಾರದಿಂದ ಕ್ರಿಕೆಟ್‌ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version