ವಿವಾಹಿತ ಮಹಿಳೆಗಾಗಿ ಇಬ್ಬರು ಪುರುಷರ ನಡುವೆ ಫೈಟ್: ಮಚ್ಚಿನೇಟಿಗೆ ಯುವಕನ ಹಸ್ತ ಕಟ್

Untitled design 2026 06 24T154602.688

ಚಿಕ್ಕಮಗಳೂರು: ಮದುವೆಯಾಗಿ ಗಂಡನಿಂದ ದೂರವಿದ್ದ ಮಹಿಳೆಯೊಬ್ಬಳ ವಿಚಾರವಾಗಿ ಇಬ್ಬರು ಪುರುಷರ ನಡುವೆ  ಗಲಾಟೆ ನಡೆದಿದ್ದು, ಒಬ್ಬನ ಕೈ ಹಸ್ತ ಸಂಪೂರ್ಣವಾಗಿ ತುಂಡಾಗಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ 35 ವರ್ಷದ ಅರುಣ್ ಎಂಬಾತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆರೋಪಿ ಶೇಷಗಿರಿ (40) ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ವಿಚಾರವೇ ಕಾರಣ

ಅಡಿಗೆಬೈಲು ಗ್ರಾಮದ ನಿವಾಸಿಯಾದ ನಾಗರತ್ನ ಎಂಬ ಮಹಿಳೆ ಮದುವೆಯಾಗಿದ್ದರೂ ಕೆಲವು ಕೌಟುಂಬಿಕ ಕಾರಣಗಳಿಂದ ತನ್ನ ಗಂಡನಿಂದ ದೂರವಾಗಿದ್ದರು. ಇದೇ ವೇಳೆ ಗ್ರಾಮದ ಶೇಷಗಿರಿ ಮತ್ತು ಅರುಣ್ ಈಕೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಮಹಿಳೆಯ ವಿಚಾರವಾಗಿ ಸಣ್ಣಪುಟ್ಟ ಗಲಾಟೆಯಾಗಿತ್ತು. ನಾಗರತ್ನ ಗಂಡನಿಂದ ದೂರವಾಗಿದ್ದರೂ ವಿಚ್ಛೇದನ ಪಡೆದಿರಲಿಲ್ಲ.

ಲಾಂಗ್ ಬೀಸಿದಾಗ ತುಂಡಾದ ಹಸ್ತ

ಈ ವಿಚಾರವಾಗಿ ಇತ್ತೀಚೆಗೆ ಶೇಷಗಿರಿ ಮತ್ತು ಅರುಣ್ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಶೇಷಗಿರಿ, ಅರುಣ್ ಮೇಲೆ ಏಕಾಏಕಿ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ಪ್ರಾಣ ರಕ್ಷಣೆಗಾಗಿ ಅರುಣ್ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾನೆ. ಆದರೆ ಶೇಷಗಿರಿ ಬಲವಾಗಿ ಬೀಸಿದ ಲಾಂಗ್ ಏಟಿಗೆ ಅರುಣನ ಕೈ ಹಸ್ತ ಸಂಪೂರ್ಣವಾಗಿ ಕತ್ತರಿಸಿ ಸ್ಥಳದಲ್ಲೇ  ಬಿದ್ದಿದೆ.

ತಕ್ಷಣವೇ ಸ್ಥಳೀಯರು ಓಡಿಬಂದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅರುಣನನ್ನು ರಕ್ಷಿಸಿದ್ದಾರೆ. ಆತನನ್ನು ತಕ್ಷಣವೇ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. 

ಪೊಲೀಸರ ತನಿಖೆ

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಾಯಲಗೊಂಡ ಅರುಣನ ದೂರಿನ ಮೇರೆಗೆ ಆರೋಪಿ ಶೇಷಗಿರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶೇಷಗಿರಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

Exit mobile version