ಮರು ಜಾತಿ ಸಮೀಕ್ಷೆ, ಸಿಎಂ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ: ಪ್ರತಿಪಕ್ಷ ನಾಯಕ ಆರ್.ಅಶೋಕ್‌‌‌

ಜಾತಿ ಗಣತಿ ಕುರಿತು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ ಆರ್.ಅಶೋಕ್‌‌‌

Web 2025 06 11t180029.236

ಕರ್ನಾಟಕದಲ್ಲಿ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ನಡೆಸುವ ತೀರ್ಮಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳಮೋಕ್ಷ ಮಾಡಿದೆ.ಈ ತೀರ್ಮಾನವು ಸಿದ್ದರಾಮಯ್ಯನವರ ಸೋಲು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ಗೆಲುವು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌‌‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರು ಜಾತಿ ಸಮೀಕ್ಷೆಯ ತೀರ್ಮಾನದಿಂದ ಸಿದ್ದರಾಮಯ್ಯನವರಿಗೆ ಮುಖಭಂಗವಾಗಿ ಸೋಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗೆಲುವಾಗಿದೆ. ಈ ವರದಿಯನ್ನು ನಾವೆಲ್ಲರೂ ವಿರೋಧಿಸಿದ್ದೆವು‌. ಕಾಂಗ್ರೆಸ್ ಹೈಕಮಾಂಡ್ ಗೆ ಈ ವರದಿ ಸರಿಯಿಲ್ಲ ಎನ್ನಿಸಿದೆ. ಹೈಕಮಾಂಡ್ ನಿಂದ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷವಾಗಿದೆ. ಯಾರು ಏನೇ ಮಾಡಿದರೂ ವರದಿ ಜಾರಿ ಮಾಡುತ್ತೇನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು‌‌. ಈಗ ಅವರು ಹೇಳಿದಂತೆ ನಡೆದುಕೊಳ್ಳದೇ ಇರುವುದರಿಂದ ರಾಜೀನಾಮೆ ಕೊಡುವುದು ಸೂಕ್ತ.160 ಕೋಟಿ ರೂ. ವ್ಯರ್ಥವಾಗಿದ್ದು, ಮರು ಸಮೀಕ್ಷೆ ನಡೆಸಲು ಇವರ ಬಳಿ ಹಣವಿಲ್ಲ. ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT
ADVERTISEMENT

ಸರ್ಕಾರಕ್ಕೆ ಕನ್ನಡಿಗರ ಪ್ರಶ್ನೆಗಳು

ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರ ಪರವಾಗಿ, ಆರ್.ಅಶೋಕ್‌‌‌ ಪ್ರಶ್ನೆಗಳನ್ನು ಕೇಳಿದ್ದಾರೆ.

ಹೈಕಮಾಂಡ್ ಶಂಖದಿಂದ ಬಂದರೆ ಮಾತ್ರ ತೀರ್ಥವೇ?

ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು, ಸ್ವತಃ ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಶಾಸಕರು ವಿರೋಧ ಮಾಡುತ್ತಿದ್ದರೂ, ಅದನ್ನು ಬಲವಾಗಿ ಸಮರ್ಥಿಸಿಕೊಂಡು, ಸಚಿವ ಸಂಪುಟದ ಮುಂದೆ ತರಲು ಸಿಎಂ ಸಿದ್ದರಾಮಯ್ಯ ಇಷ್ಟೆಲ್ಲಾ ಹಠ ಹಿಡಿದಿದ್ದರು. ಆದರೆ ಹೈಕಮಾಂಡ್ ತಪರಾಕಿ ಹಾಕಿದಾಕ್ಷಣ, ಮರು ಸಮೀಕ್ಷೆ ಮಾಡುವ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಇವರಿಗೆ ರಾಜ್ಯದ ಜನರ ಮೇಲೆ, ಮಠಾಧೀಶರು, ಸಮುದಾಯಗಳ ಮುಖಂಡರ ಮೇಲೆ ವಿಶ್ವಾಸವಿಲ್ಲ. ಇವರು ಏನಿದ್ದರೂ ಹೈಕಮಾಂಡ್‌ ವಾಕ್ಯ ಪರಿಪಾಲಕ ಅಲ್ಲವೇ?

ಸಮೀಕ್ಷೆ ನಡೆಸುವವರು ಯಾರು?

ಸಿಎಂ ಸಿದ್ದರಾಮಯ್ಯನವರು 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸಮೀಕ್ಷೆ ಹೇಗೆ ಸಾಧ್ಯ ಎಂಬುದು ಜನಸಾಮಾನ್ಯರ ಆತಂಕವಾಗಿದೆ.
ಶಾಲೆಗಳು ಈಗಾಗಲೇ ಆರಂಭವಾಗಿವೆ. ಇಂತಹ ಸಮಯದಲ್ಲಿ ಸಮೀಕ್ಷೆಯಂತಹ ಬೃಹತ್ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿದರೆ, ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಬುಡಮೇಲಾಗುತ್ತವೆ. ಮಕ್ಕಳ ಭವಿಷ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಹಾಗಾದರೆ, ಈ 90 ದಿನಗಳಲ್ಲಿ ಸಮೀಕ್ಷೆಯನ್ನು ನಡೆಸಲು ಸರ್ಕಾರ ಯಾರನ್ನು ನಿಯೋಜಿಸಲಿದೆ?

ಆನ್‌ಲೈನ್ ಸಮೀಕ್ಷೆ-ಅವಿವೇಕದ ಕ್ರಮವಲ್ಲವೇ

ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಮತ್ತೊಂದು ಅವಿವೇಕದ ಕ್ರಮವೆಂದು ತೋರುತ್ತಿದೆ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ, ಇಂತಹ ಸಮೀಕ್ಷೆ ಹೇಗೆ ಸಾಧ್ಯ? ಇದರಿಂದ ಮಾಹಿತಿಯ ನಿಖರತೆ ಮತ್ತು ಗುರುತು ಪತ್ತೆ ಹೇಗೆ ಸಾಧ್ಯವಾಗುತ್ತದೆ? ತಪ್ಪು ದಾಖಲಾತಿಗಳನ್ನು ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ?

ತೆರಿಗೆದಾರರ 167 ಕೋಟಿ ರೂ. ದುಂದುವೆಚ್ಚಕ್ಕೆ ಹೊಣೆ ಯಾರು?

ಜಾತಿ ಜನಗಣತಿಗಾಗಿ ಈಗಾಗಲೇ ಖರ್ಚಾದ ಈ ಬೃಹತ್ ಮೊತ್ತಕ್ಕೆ ಯಾರು ಹೊಣೆಗಾರರು? ಈ ಹಿಂದೆ ಸಿದ್ಧಪಡಿಸಿದ್ದ ಕಾಂತರಾಜು-ಜಯಪ್ರಕಾಶ್ ಹೆಗ್ಡೆ ಅವರ ‘ಚೌಚೌ ವರದಿ’ಗೆ ಈಗ ಎಳ್ಳು-ನೀರು ಬಿಟ್ಟಂತಾಗಿದೆ. ಆ ವರದಿಗೆ ತೆರಿಗೆದಾರರ 167 ಕೋಟಿ ರೂ. ವೆಚ್ಚವಾಗಿದೆ. ಈ ಹಣವನ್ನು ಯಾರಿಂದ ವಸೂಲಿ ಮಾಡುತ್ತಾರೆ?

ಐಪಿಎಲ್ ವಿಜಯೋತ್ಸವ ದುರಂತ ಮರೆಮಾಚಲು ಬೃಹತ್ ನಾಟಕವೇ?

ಈ ಎಲ್ಲ ಬೆಳವಣಿಗೆಗಳಿಗಿಂತ ಮಿಗಿಲಾಗಿ, ಮುಖ್ಯಮಂತ್ರಿಗಳು ಮತ್ತು ಅವರ ಹೈಕಮಾಂಡ್ ಸೇರಿಕೊಂಡು, ಇತ್ತೀಚಿನ ಐಪಿಎಲ್ ವಿಜಯೋತ್ಸವ ದುರಂತವನ್ನು ಮರೆಮಾಚಲು ಮತ್ತೊಂದು ಬೃಹತ್ ನಾಟಕ ಆರಂಭಿಸಿರುವ ಅನುಮಾನಗಳು ದಟ್ಟವಾಗಿವೆ. ಇದು ನಿಜಕ್ಕೂ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೇ?

ಸರ್ಕಾರಕ್ಕೆ ನಿಜಕ್ಕೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ, ಸಮೀಕ್ಷೆ ಹೇಗಿರಬೇಕು ಎಂಬ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ನಡೆಸಬೇಕು. ಹಾಗೆಯೇ, ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ, ಎಲ್ಲರ ಅಭಿಪ್ರಾಯಗಳನ್ನು ಆಲಿಸಬೇಕು. ಸಮಗ್ರವಾಗಿ ಎಲ್ಲ ಸಿದ್ಧತೆಗಳನ್ನು ಮುಗಿಸಿ, ಈ ಶೈಕ್ಷಣಿಕ ವರ್ಷ ಮುಗಿದ ಬಳಿಕವಷ್ಟೇ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಬೇಕು‌‌. ಇದು ರಾಜ್ಯದ ಹಿತದೃಷ್ಟಿಯಿಂದ ಅತಿ ಅವಶ್ಯಕ ಎಂದು ಆರ್.ಅಶೋಕ ಒತ್ತಾಯಿಸಿದ್ದಾರೆ‌.

ತಾರ್ಕಿಕ ಅಂತ್ಯಕ್ಕೆ ತಲುಪಿದ ಹೋರಾಟ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪೊಪ್ಪಿಕೊಂಡಿದ್ದರು.
ಜಾರಿ ನಿರ್ದೇಶನಾಲಯ ಬಹಳ ತಡವಾಗಿ ದಾಳಿ ಮಾಡಿದೆ. ಈ ಹಗರಣದ ಹಣ ಲೋಕಸಭಾ ಚುನಾವಣೆ ಬಳಕೆಯಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಬಡವರ ಹಣ ತಿಂದ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು. ಇಡಿಯ ಈ ಕೆಲಸವನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ನವರು ಇದು ದ್ವೇಷದ ರಾಜಕಾರಣ ಎನ್ನುತ್ತಾರೆ. ಆದರೆ ಹಗರಣ ನಡೆದಿದೆ ಎಂದು ಸಿಎಂ ಒಪ್ಪಿಕೊಂಡಿರುವಾಗ ದ್ವೇಷ ಬರಲು ಹೇಗೆ ಸಾಧ್ಯ? ಬಿಜೆಪಿ ನಡೆಸಿದ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ತಲುಪಿದೆ ಎಂದರು.

187 ಕೋಟಿ ರೂ. ಹಗರಣ ನಡೆದಿದೆ ಎಂಬುದು ಗೊತ್ತಾಗಿದೆ ಅಂದಮೇಲೆ ಇದಕ್ಕೆ ಕಾರಣರಾದವರ ಹೆಸರನ್ನು ಬಹಿರಂಗಪಡಿಸಲಿ. ಸುಮ್ಮನೆ ಬಿಜೆಪಿಯನ್ನು ತೆಗಳುವುದು ಸರಿಯಲ್ಲ. ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಮಾಜಿ ಸಚಿವ ನಾಗೇಂದ್ರ ಹಣ ವರ್ಗಾವಣೆ ಮಾಡಿದ್ದರು. ಅವರ ಭಯದಿಂದಾಗಿ ಅವರನ್ನು ಮತ್ತೆ ಸಚಿವರಾಗಿ ಮಾಡಲು ಸಿದ್ಧತೆ ನಡೆದಿದೆ ಎಂದರು.

Exit mobile version