ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BSY) ಅವರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಈ ಪ್ರಕರಣದಲ್ಲಿ ಜಾಮೀನು ಷರತ್ತುಗಳ ಸಡಿಲಿಕೆಗಾಗಿ ಯಡಿಯೂರಪ್ಪ ಪರ ವಕೀಲರು ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ, “ಹಿರಿಯ ರಾಜಕಾರಣಿಯಾಗಿ ಖಂಡನೀಯ ಕೃತ್ಯಗಳನ್ನು ನಡೆಸಬಾರದು, ಇತರರಿಗೆ ಮಾದರಿಯಾಗಿರಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಕೋರ್ಟ್ ವ್ಯಾಪ್ತಿ ತೊರೆಯದಂತೆ ಷರತ್ತು ವಿಧಿಸಲಾಗಿತ್ತು. ಈ ಷರತ್ತು ಸಡಿಲಿಕೆಗಾಗಿ ಅವರ ವಕೀಲರು ಮನವಿ ಮಾಡಿದರು. “ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ ಮತ್ತು ರಾಜಕೀಯ ಪಕ್ಷದ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ. ರಾಜಕೀಯ ಜವಾಬ್ದಾರಿಗಳಿಗಾಗಿ ದೆಹಲಿಗೆ ತೆರಳಬೇಕಾಗಿದೆ,” ಎಂದು ವಕೀಲರು ವಾದಿಸಿದರು. ಆದರೆ, ಹೈಕೋರ್ಟ್ ಈ ವಿಷಯದಲ್ಲಿ ತೀವ್ರ ಗಮನ ಹರಿಸಿತು.
“ಹಿರಿಯ ರಾಜಕಾರಣಿಯಾಗಿ ಯಡಿಯೂರಪ್ಪ ಖಂಡನೀಯ ಕೃತ್ಯಗಳಿಂದ ದೂರವಿರಬೇಕು. ಇದೇ ವೇಳೆ, “ಈ ಆರೋಪಗಳು ಸುಳ್ಳು ಎಂಬ ಕಾರಣಕ್ಕೆ ವಿಚಾರಣೆಗೆ ತಡೆ ನೀಡಲಾಗಿದೆ,” ಎಂದು ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್ಗೆ ಸ್ಪಷ್ಟನೆ ನೀಡಿದರು. ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರಿಗೆ (SPP) ಕಾಲಾವಕಾಶ ನೀಡಿ, ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.
