“ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ”: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

 ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹಾಗೂ ಗೋವಿಂದ ಕಾರಜೋಳ ಅವರು ಸಹ ಉಪಸ್ಥಿತರಿದ್ದರು.

ವಿಜಯೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಬದುಕು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವಾಗ, ರಾಜ್ಯ ಸರ್ಕಾರ ಜನರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. “ಕಾಯಕವೇ ಕೈಲಾಸ ಎನ್ನುವ ತತ್ವಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲಾಗಿದೆ. ಅಬಕಾರಿ ಇಲಾಖೆಯ ಮೇಲಿರುವ ವಿಶೇಷ ಆಸಕ್ತಿ ಇದಕ್ಕೆ ಸಾಕ್ಷಿ,” ಎಂದು ಹೇಳಿದರು.

ಮಹಾತ್ಮ ಗಾಂಧಿ ಅವರ ತತ್ವಗಳನ್ನು ಕಾಂಗ್ರೆಸ್ ನಾಯಕರು ಮಾತಿನಲ್ಲಿ ಮಾತ್ರ ಬಳಸುತ್ತಿದ್ದಾರೆ, ಆದರೆ ಕಾರ್ಯದಲ್ಲಿ ಅವಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು. ಮಹಿಳೆಯರು, ಬಡವರು ಮತ್ತು ಯುವಜನತೆಗೆ ಅನ್ಯಾಯವಾಗುತ್ತಿದೆ. ಅಲ್ಪಸಂಖ್ಯಾತರಿಗೆ ನ್ಯಾಯ ಕೊಡುತ್ತಿದ್ದೇವೆ ಎಂಬ ಹೆಸರಿನಲ್ಲಿ ಒಕ್ಕಲಿಗ ಹಾಗೂ ವೀರಶೈವ-ಲಿಂಗಾಯತ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಜಾತಿಗಣತಿ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. 170 ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಿದ ವರದಿಯನ್ನು ಕಡೆಗಣಿಸಿ, ಮತ್ತೆ 450 ಕೋಟಿ ವೆಚ್ಚದಲ್ಲಿ ರಿಸರ್ವೇ ನಡೆಸಲಾಗಿದೆ ಎಂದು ಅವರು ಪ್ರಶ್ನಿಸಿದರು. “ಇದು ಜನರ ಹಣದ ದುರ್ಬಳಕೆ,” ಎಂದು ಹೇಳಿದರು.

ಹಾಗೆಯೇ ಮುಡಾ ಹಗರಣ, ಗೃಹ ಲಕ್ಷ್ಮೀ ಹಗರಣ, ಅಬಕಾರಿ ಹಗರಣ, ಸ್ಮಾರ್ಟ್ ಮೀಟರ್ ಹಗರಣ ಸೇರಿದಂತೆ ಹಲವು ಪ್ರಕರಣಗಳು ಸರ್ಕಾರದ ಮೇಲೆ ಮಸುಕಾಗಿವೆ ಎಂದು ಆರೋಪಿಸಿದರು. “ಭ್ರಷ್ಟಾಚಾರ ಹೇಗೆ ಮಾಡಬೇಕು ಎಂಬುದಕ್ಕೆ ಮಾದರಿ ಸೃಷ್ಟಿಸಲಾಗಿದೆ,” ಎಂದು ವಿಜಯೇಂದ್ರ ಟೀಕಿಸಿದರು.

ಪಂಚ ಗ್ಯಾರಂಟಿ ಯೋಜನೆಗಳು ‘ಪಂಚರ್’ ಆಗಿವೆ ಎಂದು ಆರೋಪಿಸಿದ ಅವರು, ಹತ್ತು ಕೆಜಿ ಅಕ್ಕಿ ನೀಡುವುದಾಗಿ ಹೇಳಿ ಐದು ಕೆಜಿ ಮಾತ್ರ ನೀಡುತ್ತಿದ್ದಾರೆ, ಅದೂ ಕೇಂದ್ರ ಸರ್ಕಾರದ ಅಕ್ಕಿ ಎಂದು ಹೇಳಿದರು. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿ ಒಂದನ್ನೂ ಭರ್ತಿ ಮಾಡಿಲ್ಲ. ಮೀಸಲಾತಿ ವಿಚಾರದಲ್ಲಿ ಸರಿಯಾದ ವಾದ ಮಂಡಿಸಿಲ್ಲ. ಉಚ್ಚ ನ್ಯಾಯಾಲಯ ಸೂಚನೆ ನೀಡಿದರೂ ಸರ್ಕಾರ ಕಿವಿಗೊಡಲಿಲ್ಲ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸುವ ಭರವಸೆ ಕೂಡ ಈಡೇರಿಲ್ಲ. ನೀರಾವರಿ ಯೋಜನೆಗಳಿಗೆ ಹಣ ಮೀಸಲು ಇಲ್ಲ. ಟೆಕ್ ಪಾರ್ಕ್ ನಿರ್ಮಿಸಿ ಉದ್ಯೋಗ ನೀಡುವುದಾಗಿ ಹೇಳಿದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ಗುಲ್ಬರ್ಗ ಜಿಲ್ಲೆಯ ಹಿಂದುಳಿದ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲಾಗಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವರಾಜ ಅರಸು ನಿಗಮಕ್ಕೆ 190 ಕೋಟಿ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಕೇವಲ 50 ಕೋಟಿ ಮಾತ್ರ ನೀಡಿದೆ ಎಂದು ಅವರು ಹೇಳಿದರು. ಅಲೆಮಾರಿ ನಿಗಮ, ಸವಿತ ಸಮಾಜ ಹಾಗೂ ಅಂಬಿಗರ ಚೌಡಯ್ಯ ನಿಗಮಗಳಿಗೆ ಸಹ ಕಡಿಮೆ ಅನುದಾನ ನೀಡಲಾಗಿದೆ ಎಂದು ಆರೋಪಿಸಿದರು.

ಹಾಲುಮತ ಸಮುದಾಯಕ್ಕೂ ಅನ್ಯಾಯವಾಗಿದೆ. ಕುರಿ-ಮೇಕೆ ಸತ್ತ ಪ್ರಕರಣಗಳಲ್ಲಿ ಸಮರ್ಪಕ ಪರಿಹಾರ ನೀಡಲಾಗಿಲ್ಲ. “ರಾಜ್ಯವನ್ನು 25 ವರ್ಷ ಹಿಂದೆ ಕೊಂಡೊಯ್ಯಲಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇದು ಸಂಭ್ರಮದ ದಿನವಲ್ಲ, ಆತ್ಮಪರಿಶೀಲನೆಯ ದಿನವಾಗಬೇಕು,” ಎಂದು ವಿಜಯೇಂದ್ರ ಹೇಳಿದರು.

Exit mobile version