ಬ್ಯಾಟರಾಯನಪುರ : ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಟಿಕೆಟ್ ವಂಚಿತ ಆಕಾಂಕ್ಷೆಗಳು ಕಾಲೆಳೆಯವ ಸಾಂಕ್ರಾಮಿಕ ಕಾಂಗ್ರಸ್ ಪಕ್ಷದಲ್ಲಿದೆ, ಆದರೆ ಈ ಸಾಂಕ್ರಾಮಿಕ ಇತ್ತೀಚೆಗೆ ಬಿಜೆಪಿಗೂ ಹರಡಿರುವುದು ವಿಷಾದಕರ ಸಂಗತಿ, ಇದು ತೊಲಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅವರ ನೇತೃತ್ವದಲ್ಲಿ ‘ಸಂಕಲ್ಪ’ ಶೀರ್ಷಿಕೆ ಅಡಿಯಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿ ಶಿಸ್ತು, ಮೌಲ್ಯಗಳಿಗೆ ಹೆಸರಾದ ಪಕ್ಷ. ರಾಷ್ಟ್ರೀಯತೆ, ದೇಶಾಭಿಮಾನ ನಮ್ಮ ಧ್ಯೇಯವಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಟಿಕೆಟ್ ವಂಚಿತ ಅಭ್ಯರ್ಥಿ ಆಕಾಂಕ್ಷೆಗಳು ಕಾಲೆಳೆದು ಸೋಲಿಸುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಅದರೆ ಇತ್ತೀಚೆಗೆ ಈ ಸಾಂಕ್ರಾಮಿಕ ಬಿಜೆಪಿಗೂ ಹರಡಿದ್ದು, ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಬಿಜೆಪಿ ಗರೇ ಸೋಲಿಸುವ ಕುತಂತ್ರದ ನಡೆಗಳು ನಡೆಯುತ್ತಿವೆ ಇದು ತೊಲಗಬೇಕು. ಇಂತಹ ಅಸಹನೀಯ ಬೆಳವಣಿಗೆಗಳನ್ನು ತಡೆಯಲು ಅಗತ್ಯ ಕ್ರಮ ವಹಿಸಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಬಹುದೊಡ್ಡ ನಷ್ಟ ಉಂಟಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ ‘ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ರಾಜ್ಯದ ಜನತೆ ಬೆಲೆ ಏರಿಕೆಯ ಮಾರಕ ಪರಿಣಾಮ ಎದುರಿಸುವಂತಾಗಿದೆ. ಅಭಿವೃದ್ಧಿ ಶೂನ್ಯತೆಯಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ವಲಸೆ ಹೋಗಲು ಸಿದ್ಧವಾಗಿ ನಿಂತಿವೆ. ಕಂದಾಯ ಇಲಾಖೆಯ ಇ ಖಾತ, ಬಿ ಖಾತ, ಎ ಖಾತ ಸೇರಿದಂತೆ ಎಲ್ಲಾ ಮೇಳಗಳು ಭಷ್ಟಾಚಾರದ ಮೂಲಗಳಾಗಿವೆ. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಸರ್ಕಾರದಿಂದ ರಾಜ್ಯದ ಜನತೆ ಏನನ್ನೂ ನಿರೀಕ್ಷಿಸಲಾಗದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿ ‘ವೋಟ್ ಚೋರಿ ತಡೆ ಕುರಿತು ರಾಹುಲ್ ಗಾಂಧಿಯವರು ಅಸಮಂಜಸವಾಗಿ ಮಾತನಾಡು ತ್ತಿದ್ದಾರೆ, ವೋಟ್ ಚೋರಿ ತಡೆ ಜಾರಿಯಾದರೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಗೆ ವರದಾನ ವಾಗಲಿದ್ದು, ಕಳೆದ ಹಲವು ವರ್ಷಗಳಿಂದ ವೋಟ್ ಚೋರಿಯಿಂದಲೇ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ ಎಂದು ಆರೋಪಿಸಿದರು.ಬ್ಯಾಟರಾಯನಪುರ ಕ್ಷೇತ್ರದ 14 ವಾರ್ಡ್ ಗಳಲ್ಲೂ ಬಿಜೆಪಿ ಸದೃಢವಾಗಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಎಲ್ಲಾ 14 ವಾರ್ಡ್ ಗಳಲ್ಲೂ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಗುಂಡಿಗಳಿವೆ, ಅಭಿವೃದ್ಧಿ ಶೂನ್ಯವಾಗಿದೆ. ಈ ಕುರಿತು ಬೃಹತ್ ಆಂದೋಲನದ ಮೂಲಕ ರಾಜ್ಯ ಸರ್ಕಾರದ ಮತ್ತು ಸ್ಥಳೀಯ ಶಾಸಕರ ವೈಫಲ್ಯತೆಯನ್ನು ಸಾರ್ವಜನಿಕರ ಬಳಿಗೆ ತೆಗೆದುಕೊಂಡು ಹೋಗುವ ಬೃಹತ್ ಅಭಿಯಾನ ಕೈಗೊಳ್ಳಲಾಗುವುದು.
ಪ್ರತಿ ಸಮಸ್ಯೆಗಳ ಕುರಿತ ಹೋರಾಟಕ್ಕೆ ಸ್ವತಂತ್ರ ಉದ್ಯಾನವನಕ್ಕೆ ತೆರಳಲಾಗುವುದಿಲ್ಲ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಹೋರಾಟಕ್ಕಾಗಿ ಫ್ರತ್ಯೇಕ ಜಾಗ ನಿಗದಿ ಮಾಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಸಲ್ಲಿಸಲಾಗಿದೆ. ನಮ್ಮ ಕ್ಷೇತ್ರದ ಸಮಸ್ಯೆಗಳ ಹೋರಾಟ ನಮ್ಮ ಕ್ಷೇತ್ರದಲ್ಲೇ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬೀಜೆಪಿ ಅಧ್ಯಕ್ಷ ಹನುಮಂತಗೌಡ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಬಿಜೆಪಿ ಮುಖಂಡ ಪಿ.ಕೆ.ರಾಜಗೋಪಾಲ್, ಬಿಬಿಎಂಪಿ ಮಾಜಿ ಸದಸ್ಯೆ ಕುಸುಮ ಮಂಜುನಾಥ್, ಬೇಗೂರು ಮಹೇಶ್, ಬಿ.ಎಸ್.ಅನಿಲ್ ಕುಮಾರ್, ಮುನಿಹನುಮಯ್ಯ ಸೇರಿದಂತೆ ಇನ್ನಿತರರಿದ್ದರು.
