ಯತ್ನಾಳ್ ಬಣದಿಂದ ಡಿಕೆಶಿ ಭೇಟಿ: ಕಾಂಗ್ರೆಸ್ ಸೇರ್ಪಡೆಗೆ ನಡಿತಿದೆಯಾ ಬಿಗ್ ಪ್ಲಾನ್?

123 (36)

ರಾಜ್ಯ ರಾಜಕಾರಣದಲ್ಲಿ ಆಶ್ಚರ್ಯಕರ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಬಿಜೆಪಿ ನಾಯಕರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಯತ್ನಾಳ್ ಅವರೊಂದಿಗೆ ಕೈಜೋಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದ ಈ ನಾಯಕರು, ಯತ್ನಾಳ್ ಉಚ್ಛಾಟನೆ ಬಳಿಕ ಕಾಂಗ್ರೆಸ್ ಸೇರ್ಪಡೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹರಡಿದ್ದವು. ಈ ಊಹಾಪೋಹಗಳಿಗೆ ಬಲ ನೀಡುವಂತೆ, ಯತ್ನಾಳ್ ಬಣದ ಪ್ರಮುಖ ನಾಯಕರಾದ ಜಿ.ಎಂ. ಸಿದ್ದೇಶ್ವರ್ ಮತ್ತು ಬಿಜೆಪಿ ಶಾಸಕ ಬಿ.ಪಿ. ಹರೀಶ್, ಡಿಕೆ ಶಿವಕುಮಾರ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿದ್ದಾರೆ.

ADVERTISEMENT
ADVERTISEMENT

ಮೇಲ್ನೋಟಕ್ಕೆ ಈ ಭೇಟಿ ಸೌಜನ್ಯದ ಭೇಟಿಯಂತೆ ಕಂಡರೂ, ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಈ ಇಬ್ಬರು ನಾಯಕರು ಒಟ್ಟಿಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದದ್ದು ಕುತೂಹಲ ಮೂಡಿಸಿದೆ. “ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ. ಹರೀಶ್ ನನ್ನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು” ಎಂದು ಡಿಕೆ ಶಿವಕುಮಾರ್ ಫೋಟೋ ಸಮೇತ ತಿಳಿಸಿದ್ದಾರೆ.

ಈ ಭೇಟಿಯ ಬೆನ್ನಲ್ಲೇ ರಾಜಕೀಯ ಚರ್ಚೆಗಳು ತಾರಕಕ್ಕೇರಿವೆ. ಕೆಲವು ವಾರಗಳ ಹಿಂದೆ, ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಯತ್ನಾಳ್ ಅವರನ್ನು ಉಚ್ಛಾಟಿಸಿತ್ತು. ಈ ಸಂದರ್ಭದಲ್ಲಿ, ಯತ್ನಾಳ್ ಬೆಂಗಳೂರಿನ ಯು.ಬಿ. ಸಿಟಿಯ ಜಿ.ಎಂ. ಸಿದ್ದೇಶ್ವರ್ ನಿವಾಸಕ್ಕೆ ತೆರಳಿ ಮಹತ್ವದ ಚರ್ಚೆ ನಡೆಸಿದ್ದರು. ಈ ಗೌಪ್ಯ ಸಭೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಭಾಗವಹಿಸಿದ್ದರು.

ಯತ್ನಾಳ್ ಉಚ್ಛಾಟನೆ ತೆರವುಗೊಳಿಸಲು ಮತ್ತು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆ ಮಾಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಯತ್ನಾಳ್ ಹೊಸ ಪಕ್ಷ ಕಟ್ಟುವ ಸುಳಿವು ಕೂಡ ನೀಡಿದ್ದರು. ಇದೇ ವೇಳೆ, ಬಿ.ಪಿ. ಹರೀಶ್, ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, “ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯೋಗ್ಯರಲ್ಲ” ಎಂದು ಬಹಿರಂಗವಾಗಿ ಹೇಳಿದ್ದರು.

ಯತ್ನಾಳ್ ಬೆಂಬಲಿಗರಾಗಿದ್ದ ಬಿ.ಪಿ. ಹರೀಶ್, ಯತ್ನಾಳ್ ಉಚ್ಛಾಟನೆ ಬಳಿಕ, “ಯತ್ನಾಳ್ ಮಾತು ಕಡಿಮೆ ಮಾಡಿಕೊಂಡರೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅವರು ದೊಡ್ಡ ಹಿಂದೂ ಸಂಘಟಕರು” ಎಂದು ಬೆಂಬಲ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕಾರಣದ ಸಾಧ್ಯತೆಯನ್ನು ಸೂಚಿಸಿದ್ದ ಹರೀಶ್, ಈಗ ಡಿಕೆ ಶಿವಕುಮಾರ್ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

Exit mobile version