‘ಉಸಿರು ಇರುವವರೆಗೂ ರೈತರ ಪರ ಹೋರಾಟ’: ನಿಖಿಲ್ ಕುಮಾರಸ್ವಾಮಿ

Untitled design 2026 08 09T160913.916

ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡುವವರೆಗೂ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ಪಕ್ಷವು ರೈತರ ಪರವಾಗಿ ಹೋರಾಟ ಮುಂದುವರಿಸಲಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿ ಹಾಗೂ ರೈತರ ವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸಿದರು. ಕಳೆದ 500ಕ್ಕೂ ಹೆಚ್ಚು ದಿನಗಳಿಂದ ರೈತರು ತಮ್ಮ ಸ್ವಂತ ಆಸ್ತಿ ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ನಿಖಿಲ್ ನೆನಪಿಸಿದರು.

ಸರ್ಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ನಿಖಿಲ್

ಹೆಚ್.ಡಿ.ದೇವೇಗೌಡರು ಮಾಧ್ಯಮ ಗೋಷ್ಠಿ ನಡೆಸಿ, “ಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯದಿದ್ದರೆ ಸತ್ಯಾಗ್ರಹ ಕೂರುತ್ತೇವೆ” ಎಂದು ಎಚ್ಚರಿಕೆ ನೀಡಿದ ಮಾರನೇ ದಿನವೇ ಮುಖ್ಯಮಂತ್ರಿಗಳು ಸಮಿತಿ ರಚನೆಯ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ನಂತರ ಮತ್ತೆ ನಾಲ್ಕು ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆಕ್ಷೇಪಿಸಿದರು.

ಚುನಾವಣೆ ಹಾಗೂ ಭೇಟಿ ಸಂದರ್ಭಗಳಲ್ಲಿ ರಾಮನಗರದ ಜನರ ಬಳಿ “ನಮಗೆ ಪೆನ್ನು, ಪೇಪರ್ ಕೊಡಿ” ಎಂದು ಕೇಳಿದ್ದ ಆಡಳಿತ ಪಕ್ಷದ ನಾಯಕರು, ಈಗ ಅದೇ ಪೆನ್ನು-ಪೇಪರ್ ಬಳಸಿ ರೈತರಿಗೆ ಮರಣಶಾಸನ ಬರೆಯಲು ಹೊರಟಿದ್ದಾರೆಯೇ ಎಂದು ನಿಖಿಲ್ ನೇರವಾಗಿ ಪ್ರಶ್ನಿಸಿದರು.

33 ಸಾವಿರ ಕೋಟಿ ಲಾಭಕ್ಕಾಗಿ ರೈತರ ಬಲಿ

ಈ ಟೌನ್ಶಿಪ್ ಯೋಜನೆಯಿಂದಾಗಿ ಸುಮಾರು 10 ಲಕ್ಷ ತೆಂಗು, ಮಾವು, ಬಾಳೆ ಮತ್ತು ಅಡಿಕೆ ಮರಗಳ ಮಾರಣಹೋಮ ನಡೆಯಲಿದೆ. 33 ಸಾವಿರ ಕೋಟಿ ರೂಪಾಯಿಗಳ ಲಾಭ ಮಾಡಿಕೊಳ್ಳಲು ಸರ್ಕಾರ ಈ ಬೃಹತ್ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ. ರೈತರ ಭೂಮಿಗೆ ಪರಿಹಾರ ನೀಡಲು ಕನಿಷ್ಠ 11 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ. “ನಿಮ್ಮ ಬಳಿ ಹಣವಿದ್ದರೆ ತೋರಿಸಿ” ಎಂದು ಸರ್ಕಾರಕ್ಕೆ ಸವಾಲೆಸೆದರು.

ಯೋಜನೆಯ ವ್ಯಾಪ್ತಿಗೆ ಬರುವ 2,000 ರೈತರ ಪೈಕಿ ಕೇವಲ 50 ಜನರು ಮಾತ್ರ ಪರಿಹಾರ ಧನ ಪಡೆದಿದ್ದಾರೆ. ಬಹುತೇಕ ರೈತರು ಭೂಮಿ ನೀಡಲು ಸಿದ್ಧರಿಲ್ಲ ಎಂದು ಅವರು ತಿಳಿಸಿದರು.

ಈ ಜಿಲ್ಲೆಯಲ್ಲಿ ನಾವು ಹುಟ್ಟದೇ ಇದ್ದರೂ, ರಾಮನಗರದ ಜನತೆ ದೇವೇಗೌಡರ ಕುಟುಂಬಕ್ಕೆ ‘ಜಿಲ್ಲೆಯ ಮಗ’ ಎನ್ನುವ ಗೌರವ ಕೊಟ್ಟಿದ್ದಾರೆ. ರೈತರ ಭೂಮಿ ಉಳಿಸಲು ನಮ್ಮ ಕುಟುಂಬ ಕೊನೆಯುಸಿರಿರುವ ತನಕ ಹೋರಾಡಲಿದೆ. ಈ ಸಂಬಂಧ ಈಗಾಗಲೇ ಕಾನೂನು ಹೋರಾಟವೂ ಆರಂಭವಾಗಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಈ ಮೂರು ದಿನಗಳ ಪಾದಯಾತ್ರೆಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅಭಯ ನೀಡಿದರು.

ಜೆಡಿಎಸ್ ಯುವ ಘಟಕದಿಂದ ಈ ಪಾದಯಾತ್ರೆಗೆ ಅಪಾರ ಬೆಂಬಲ ವ್ಯಕ್ತವಾಗಿದ್ದು, ರಾಮನಗರ ಜಿಲ್ಲೆಯಾದ್ಯಂತ ರೈತರು ತಮ್ಮ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಿದ್ಧವಾಗಿದ್ದಾರೆ. ಸರ್ಕಾರದ ಈ ನಿರ್ಧಾರವು ರೈತರ ಜೀವನೋಪಾಯವನ್ನು ಪ್ರಶ್ನಿಸಿದೆ ಎಂದು ನಿಖಿಲ್ ಆರೋಪಿಸಿದರು.

Exit mobile version