ಡಿಜಿಟಲ್‌ ಅರೆಸ್ಟ್‌: ಬೆಂಗಳೂರಿನಲ್ಲಿ ಟಿಕ್ಕಿಗೆ 31 ಕೋಟಿ ವಂಚಿಸಿದ ಸೈಬರ್‌ ಕಳ್ಳರು

Untitled design (86)

ಬೆಂಗಳೂರು, ನವೆಂಬರ್ 17: ಇಂದಿರಾನಗರದಲ್ಲಿ ವಾಸಿಸುತ್ತಿರುವ ಖ್ಯಾತ ಐಟಿ ಕಂಪನಿಯ ಹಿರಿಯ ಮಹಿಳಾ ಉದ್ಯೋಗಿ ಉಮಾರಾಣಿಯವರಿಂದ 31 ಕೋಟಿ ರೂಪಾಯಿಯನ್ನು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಬೆದರಿಕೆ ಹಾಕಿ ವಂಚಿಸಿದ್ದಾರೆ. ಇದು ಕರ್ನಾಟಕದಲ್ಲಿ ಒಬ್ಬ ವ್ಯಕ್ತಿಯಿಂದ ಒಂದೇ ಪ್ರಕರಣದಲ್ಲಿ ವಂಚಿಸಲಾದ ಅತೀ ದೊಡ್ಡ ಮೊತ್ತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಂಚನೆಯ ಕಥೆ 2024ರ ಸೆಪ್ಟೆಂಬರ್ 15ರಂದು ಉಮಾರಾಣಿಯವರ ಮೊಬೈಲ್‌ಗೆ ಅನಾಮಧೇಯ ಕರೆ ಬಂದಿತು. ಕರೆ ಮಾಡಿದ್ದವರು ತಾವು DHL ಕೊರಿಯರ್ ಸರ್ವೀಸ್ನಿಂದ ಕರೆ ಮಾಡುತ್ತಿದ್ದೇವೆ ಎಂದು ಪರಿಚಯಿಸಿಕೊಂಡರು. ಮುಂಬೈನ ಅಂಧೇರಿಯಿಂದ ನಿಮ್ಮ ಹೆಸರಿಗೆ ಒಂದು ಪಾರ್ಸೆಲ್ ಬಂದಿದೆ. ಅದರಲ್ಲಿ 3 ಕ್ರೆಡಿಟ್ ಕಾರ್ಡ್‌ಗಳು, 4 ಪಾಸ್‌ಪೋರ್ಟ್‌ಗಳು ಮತ್ತು MDMA ಡ್ರಗ್ಸ್ ಇದೆ ಎಂದು ಹೇಳಿದರು. ಉಮಾರಾಣಿ ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ ತನಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರೂ ವಂಚಕರು ಆಕೆಯ ಮೊಬೈಲ್ ಸಂಖ್ಯೆ ಪಾರ್ಸೆಲ್ ಮೇಲೆ ಇರುವುದಾಗಿ ಹೇಳಿ, ಇದು ಸೈಬರ್ ಅಪರಾಧ ಎಂದು ಬೆದರಿಸಿದರು.

ನಂತರ ವಿಡಿಯೋ ಕಾಲ್‌ನಲ್ಲಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಬಂದು, ನೀವು ಈಗ ಡಿಜಿಟಲ್ ಅರೆಸ್ಟ್‌ನಲ್ಲಿದ್ದೀರಿ. ಯಾರಿಗೂ ತಿಳಿಸಿದರೆ ನಿಮ್ಮ ಕುಟುಂಬದವರನ್ನೂ ಪ್ರಕರಣಕ್ಕೆ ಸೇರಿಸುತ್ತೇವೆ ಎಂದು ಭಯಹುಟ್ಟಿಸಿದರು. ಸೆಪ್ಟೆಂಬರ್ 23ರಿಂದ ಒಂದು ವಾರಕ್ಕಿಂತ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ.

ವಂಚಕರು ಆರ್‌ಬಿಐನ ಫೈನಾನ್ಸಿಯಲ್ ಇಂಟೆಲಿಜೆನ್ಸ್ ಯೂನಿಟ್ (FIU) ಎಂದು ಸುಳ್ಳು ಹೇಳಿ, ತನಿಖೆಗಾಗಿ ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳ ವಿವರ, ಆಸ್ತಿ ವಿವರ ಕೊಡಬೇಕು. ಹಣವನ್ನು ನಮ್ಮ ಖಾತೆಗೆ ವರ್ಗಾಯಿಸಿ. ಪರಿಶೀಲನೆ ಬಳಿಕ ವಾಪಸ್ ಕೊಡುತ್ತೇವೆ ಎಂದು ನಂಬಿಸಿದರು. ಭಯಗೊಂಡ ಉಮಾರಾಣಿ 187 ಬಾರಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದರು. ಒಟ್ಟು 31 ಕೋಟಿ ರೂಪಾಯಿ!

2024 ಡಿಸೆಂಬರ್ 6 ರಂದು ಆಕೆಯ ಮಗನ ನಿಶ್ಚಿತಾರ್ಥ ನಡೆದಿತ್ತು. ಆದರೂ ವಂಚಕರು ಹಣ ವಾಪಸ್ ನೀಡಲಿಲ್ಲ. 2025 ಮಾರ್ಚ್ 26ರಂದು ಎಲ್ಲ ಸಂಪರ್ಕ ಕಡಿತಗೊಳಿಸಿದರು. ಇದಾದ ಬಳಿಕ ಅಪರಿಚಿತ ನಂಬರ್‌ಗಳಿಂದ ಅವಾಚ್ಯ ಭಾಷೆ, ಬೆದರಿಕೆ ಕರೆಗಳು ಬರುತ್ತಿದ್ದವು.

ಅಂತಿಮವಾಗಿ ಉಮಾರಾಣಿ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೊಡ್ಡ ಮೊತ್ತದ ವಂಚನೆ ಆಗಿರುವುದರಿಂದ ಪ್ರಕರಣವನ್ನು CID ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಪೊಲೀಸರು ಈಗ ವಂಚಕರು ಬಳಸಿದ ಬ್ಯಾಂಕ್ ಖಾತೆಗಳು, ಐಪಿ ಅಡ್ರೆಸ್, ವಿಡಿಯೋ ಕಾಲ್ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಪ್ರಕರಣ ಕರ್ನಾಟಕದಲ್ಲಿ ಸೈಬರ್ ವಂಚನೆಯ ತೀವ್ರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರದಿಂದ ಉನ್ನತ ಶಿಕ್ಷಿತ, ಉನ್ನತ ಆದಾಯ ಗಳಿಕೆಯವರೇ ವಂಚನೆಗೊಳಗಾಗುತ್ತಿದ್ದಾರೆ. ಪೊಲೀಸರು ಈಗಾಗಲೇ ರಾಜ್ಯದಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತಿದ್ದರೂ, ಇಂತಹ ಘಟನೆಗಳು ನಿಲ್ಲುತ್ತಿಲ್ಲ.

ಈ ಬಗ್ಗೆ ಪೊಲೀಸರು ನೀಡಿರುವ ಸೂಚನೆಗಳು

ಉಮಾರಾಣಿಯವರ 31 ಕೋಟಿ ಹಣ ವಾಪಸ್ ಪಡೆಯುವ ಸಾಧ್ಯತೆ ಕಡಿಮೆ ಇದ್ದರೂ, CID ತಂಡ ಈಗ ಪೂರ್ಣ ಶಕ್ತಿಯಿಂದ ತನಿಖೆ ನಡೆಸುತ್ತಿದೆ.

Exit mobile version